ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷನ್ ಸರ್ವೀಸ್ ನವೀಕರಣದ ಹೆಸರು ಹೇಳಿ ವೈದ್ಯೆಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಕಳೆದುಕೊಂಡವರು ಮಣಿಪಾಲದ ಡಾ. ಎನ್. ಶ್ವೇತಾ ರೆಡ್ಡಿ (28). ನವೆಂಬರ್ 18ರಂದು ಐಸಿಐಸಿಐ ಬ್ಯಾಂಕ್ ಏಜೆಂಟ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ಕರೆ ಮಾಡಿ, ಅವರ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ‘ಪ್ರೊಟೆಕ್ಷನ್ ಸರ್ವೀಸ್’ ಮುಗಿದಿದೆ ಎಂದು ತಿಳಿಸಿದ್ದಾನೆ. ಸೇವೆ ನವೀಕರಣ ಅಗತ್ಯವಿಲ್ಲವೆಂದು ವೈದ್ಯೆ ತಿಳಿಸಿದರೂ, ಬಳಿಕ ಗೂಗಲ್ನಲ್ಲಿ “ಐ ಮೊಬೈಲ್ ಲೈಟ್” ಆಪ್ ಸರ್ಚ್ ಮಾಡಲು ಕರೆ ಮಾಡಿದ ವ್ಯಕ್ತಿ ಒತ್ತಾಯಿಸಿದ್ದಾನೆ.
ಅದನ್ನು ಸರ್ಚ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈದ್ಯೆಯ ಮೊಬೈಲ್ ಸಂಪೂರ್ಣವಾಗಿ ಹ್ಯಾಕ್ ಆಗಿದ್ದು, ಶ್ವೇತಾ ರೆಡ್ಡಿ ಅವರ ಉಳಿತಾಯ ಖಾತೆ ಮತ್ತು ಕ್ರೆಡಿಟ್ ಕಾರ್ಡ್ನಿಂದ ಒಟ್ಟು ₹3,70,944 ಮೊತ್ತವನ್ನು ಅಪರಿಚಿತರು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ ಬರುತ್ತಿದ್ದಾರೆ. ಸಾರ್ವಜನಿಕರು ಜಾಗೃತರಾಗಬೇಕಿದೆ. ಬ್ಯಾಂಕ್ಗಳು ಯಾವುದೇ ಸಂದರ್ಭದಲ್ಲೂ ಗೂಗಲ್ ಸರ್ಚ್ ಮೂಲಕ ಆಪ್ ಡೌನ್ಲೋಡ್ ಮಾಡುವಂತೆ ಸೂಚಿಸುವುದಿಲ್ಲ. ಅಪರಿಚಿತರಿಂದ ಬರುವ ನವೀಕರಣ, KYC ಅಥವಾ ಕ್ರೆಡಿಟ್ ಕಾರ್ಡ್ ಆಫರ್ ಕರೆಗಳನ್ನು ನಂಬದೇ, ತಕ್ಷಣ ಬ್ಯಾಂಕ್ ಅಧಿಕೃತ ಹೆಲ್ಪ್ಲೈನ್ ಮೂಲಕ ಮಾತ್ರ ಪರಿಶೀಲನೆ ನಡೆಸಬೇಕು.





