- ಒಂದು ವರ್ಷದೊಳಗೆ ₹700 ಕೋಟಿ ಹಣ ಕಳೆದುಕೊಂಡ ಜನ
- ಈ ಸೈಬರ್ ವಂಚನೆ ಜಾಲಕ್ಕೂ ಭಯೋತ್ಪಾದಕ ಸಂಘಟನೆಗೂ ಸಂಬಂಧ
ದೇಶದಲ್ಲಿ ನಿತ್ಯ ಹಲವಾರು ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ಹೈದರಾಬಾದ್ನ ಸಾಫ್ಟ್ವೇರ್ ಎಂಜಿನಿಯರ್ವೊಬ್ಬರು ಆನ್ಲೈನ್ನಲ್ಲಿ ₹82 ಲಕ್ಷ ಕಳೆದುಕೊಂಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಹೈದರಾಬಾದ್ ಪೊಲೀಸರು ಇದರಲ್ಲಿ ಚೀನಾದ ವ್ಯಕ್ತಿಗಳ ಕೈವಾಡವಿರುವ ಜಾಲವನ್ನು ಪತ್ತೆ ಮಾಡಿದ್ದಾರೆ.
ಚೀನಾದ ವ್ಯಕ್ತಿಗಳ ಕೈವಾಡವಿರುವ ಸೈಬರ್ ವಂಚನೆ ಜಾಲವು ದೇಶ ವಿದೇಶಗಳಲ್ಲಿ ಜನರನ್ನು ಹೂಡಿಕೆ ಹಾಗೂ ಅರೆಕಾಲಿಕ ಉದ್ಯೋಗಗಳನ್ನು ಕೊಡಿಸುವ ನೆಪದಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ವಂಚನೆಯ ಸುಳಿಗೆ ಒಂದು ವರ್ಷದೊಳಗೆ ಕನಿಷ್ಠ 15 ಸಾವಿರ ಭಾರತೀಯರು ಸಿಲುಕಿ ₹700 ಕೋಟಿಗೂ ಅಧಿಕ ಹಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
ಹೈದರಾಬಾದ್ನ ಸಾಪ್ಟ್ವೇರ್ ಇಂಜಿನಿಯರ್ ಶಿವು ಎಂಬುವವರು ಆನ್ಲೈನ್ನಲ್ಲಿ ಬರೋಬ್ಬರಿ ₹82 ಲಕ್ಷ ಕಳೆದುಕೊಡಿದ್ದರು. ಸೈಬರ್ ಕ್ರೈಂ ಜಾಲದೊಳಗೆ ಸಿಲುಕಿದ್ದ ಇವರು ಹೈದರಾಬಾದ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.
ಶಿವು ದೂರು ನೀಡಿದ ಬೆನ್ನಲ್ಲೇ, ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಪ್ರಕರಣವನ್ನು ಭೇದಿಸಿದ ಸೈಬರ್ ಕ್ರೈಂ ವಿಭಾಗದ ಪೊಲೀಸರು ಚೀನಾ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಯ ಮಾಸ್ಟರ್ಮೈಂಡ್ ಅಹಮದಾಬಾದ್ನ ಪ್ರಕಾಶ್ ಪ್ರಜಾಪತಿ ಹಾಗೂ ಕುಮಾರ್ ಪ್ರಜಾಪತಿ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೀನಾದ ಕೆವಿನ್ ಜುನ್, ಲು ಲಾಂಗ್ಶೋ ಮತ್ತು ಶಾಶಾ ಎಂಬ ಮೂವರನ್ನು ಒಳಗೊಂಡ ಈ ತಂಡ ಭಾರತದಲ್ಲಿ ಕೆಲವರ ಸಹಕಾರದೊಂದಿಗೆ ಸೈಬರ್ ವಂಚನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಈ ಚೀನಾ ಮೂಲದ ಸೈಬರ್ ವಂಚನೆ ತಂಡವು ಯುಟ್ಯೂಬ್ ಹಾಗೂ ಫೇಸ್ಬುಕ್ ಮೂಲಕ ಅಮಾಯಕರನ್ನು ಟಾರ್ಗೆಟ್ ಮಾಡಿ ನಾನಾ ಕಂಪನಿಗಳ ಹೆಸರಿನಲ್ಲಿ 48 ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹548 ಕೋಟಿ ಜಮಾ ಆಗಿದೆ. ಇನ್ನುಳಿದಂತೆ ₹128 ಕೋಟಿ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಚೀನಾದ ಸೈಬರ್ ವಂಚನೆ ಜಾಲಕ್ಕೂ ಭಯೋತ್ಪಾದಕ ಸಂಘಟನೆಗೂ ಸಂಬಂಧವಿದೆ ಎನ್ನಲಾಗಿದೆ. ಖಾತೆಗೆ ಬಂದ ಹಣವನ್ನು ಈ ತಂಡ ದುಬೈ ಮೂಲಕ ಚೀನಾಗೆ ರವಾನಿಸಿದೆ. ಇನ್ನೂ ಕೆಲವು ಹಣವನ್ನು ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ ನಿರ್ವಹಿಸುತ್ತಿರುವ ಖಾತೆಗೆ ಕಳುಹಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಅರೆಕಾಲಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವಿಸ್ತರಣೆ ಮಸೂದೆ ಅಂಗೀಕಾರ
ಈ ವಂಚನೆಯ ಬಗ್ಗೆ ಕೇಂದ್ರ ಏಜೆನ್ಸಿಗಳು, ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ಘಟಕಕ್ಕೂ ವಿವರಗಳನ್ನು ನೀಡಲಾಗಿದೆ. ಈ ಜಾಲವು ಹಣದ ಒಂದು ಭಾಗವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಲಾಗಿದೆ ಹಾಗು ಹಿಜ್ಬುಲ್ಲಾ ನಿರ್ವಹಿಸುವ ವ್ಯಾಲೆಟ್ಗೆ ಠೇವಣಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ತಂಡವು ವಾಟ್ಸ್ಆಪ್ ಮತ್ತು ಟೆಲಿಗ್ರಾಮ್ ಮೂಲಕ ಅಮಾಯಕರನ್ನು ಸಂಪರ್ಕಿಸಿ ಹೂಡಿಕೆ ಮತ್ತು ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ಅಮಾಯಕ ಜನರನ್ನು ಯಾಮಾರಿಸಿ ಅವರಿಂದ ಕಡಿಮೆ ಹಣ ಹೂಡಿಕೆ ಮಾಡಿಸಿದ್ದಾರೆ. 5-6 ಲಕ್ಷ ಹಣವನ್ನು ಕಳೆದುಕೊಂಡವರನ್ನು ವಾಟ್ಸಾಪ್ ಹಾಗೂ ಟೆಲಿಗ್ರಾಮ್ನಲ್ಲಿ ಸಂಪರ್ಕಿಸಿ ಅವರಿಗೆ ₹5 ಸಾವಿರ ಮೊತ್ತದ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಕೇಳಿದ್ದಾರೆ. ಬಳಿಕ ಈ ಹೂಡಿಕೆಗೆ ದುಪ್ಪಟ್ಟು ಹಣ ನೀಡಿ ವಿಶ್ವಾಸ ಗಳಿಸಿದ್ದಾರೆ. ನಂತರ ಅಧಿಕ ಮೊತ್ತ ಹೂಡಿಕೆ ಮಾಡಲು ಪ್ರೇರೇಪಿಸಿ ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದೆ.




