ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್(ಪಿಎಸಿಎಲ್) ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಹಣಕಾಸು ಸಂಸ್ಥೆಯು ದೇಶದ ಹಲವು ಭಾಗಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಹೂಡಿಕೆದಾರರಿಗೆ ಮೋಸ ಮಾಡಿರುವುದನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
“ಭೂ ವ್ಯವಹಾರದಲ್ಲಿ ಹಣವನ್ನು ವ್ಯಯಿಸಿ ಅದರ ಲಾಭಾಂಶವನ್ನು ಹೂಡಿಕೆದಾರರಿಗೆ ವಿತರಿಸಲಾಗುವುದು, ಹಲವು ಯೋಜನೆಗಳ ಮೂಲಕ ಅವರು ಹೂಡಿದ ಹಣಕ್ಕೆ ಹೆಚ್ಚಿನ ಲಾಭ ನೀಡಲಾಗುವುದೆಂದು ಆಸೆ ತೋರಿಸಿ ದೇಶಾದ್ಯಂತ ಸುಮಾರು ₹49,100 ಕೋಟಿಯಷ್ಟು ಹಗರಣ ನಡೆಸಿದ್ದು, ಸುಮಾರು 1.49 ಮಿಲಿಯನ್ ಹೂಡಿಕೆದಾರರಿಗೆ ಮೋಸಮಾಡಿದ್ದಾರೆ” ಎಂದು ಆರೋಪಿಸಿದರು.
“ಪಿಎಸಿಎಲ್ ಎಂಬ ಮೋಸದ ಹಣಕಾಸು ಸಂಸ್ಥೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಕೋಟಿ ಮೊತ್ತವನ್ನು ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೊತ್ತವನ್ನು ಮರುಪಾವತಿಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಹೋರಾಟ ಸಮಿತಿಯು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ನಾಯಕ, ರೌಡಿ ಶೀಟರ್ ಮಣಿಕಂಠ ರಾಠೋಡ್ ಪೊಲೀಸ್ ವಶಕ್ಕೆ
ನಿಯೋಗದಲ್ಲಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ದಾಮೋದರ ಉಳ್ಳಾಲ, ಅಧ್ಯಕ್ಷ ತೆಲ್ಮ ಮೊಂತೆರೋ, ಪ್ರಧಾನ ಕಾರ್ಯದರ್ಶಿ ಆಸುಂತಾ ಡಿಸೋಜ, ಇತರ ಮುಖಂಡರುಗಳಾದ ನಾನ್ಸಿ ಫೆರ್ನಾಂಡಿಸ್, ಶ್ಯಾಮಲ, ಶಾಲಿನಿ, ವಾಯಿಲೆಟ್, ಜನಾರ್ಧನ ಪುತ್ತೂರು, ಮೋಲಿ ಡಿಸೋಜ, ಸುನಿತಾ ಬಜಾಲ್ ಸೇರಿದಂತೆ ಬಹುತೇಕರು ಇದ್ದರು.




