ಜಾನುವಾರುಗಳ ರಕ್ಷಣೆ ಹೆಸರಿಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದೌರ್ಜನ್ಯ ಹಾಗೂ ಪೊಲೀಸರ ಅತಿರೇಕದ ವರ್ತನೆಯ ನಿಯಂತ್ರಣಕ್ಕಾಗಿ ಸರ್ಕಾರ ಅಧಿಕೃತವಾಗಿ ಕಸಾಯಿಖಾನೆಗೆ ಅನುಮತಿ ನೀಡಬೇಕು ಎಂದು ಮುಸ್ಲಿಂ ಮುಖಂಡರ ಸಭೆಯಲ್ಲಿ ಒತ್ತಾಯಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ ಧೋರಣೆ ಕೃತ್ಯವನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಾಜಕೀಯ, ಸಾಮಾಜಿಕ ಮುಖಂಡರು, ಧಾರ್ಮಿಕ ನೇತಾರರು ಹಲವಾರು ಮಸೀದಿಗಳ ಅಧ್ಯಕ್ಷರುಗಳನ್ನು ಒಳಗೊಂಡ ಮುಸ್ಲಿಂ ಮುಖಂಡರ ಸಭೆಯು ಶುಕ್ರವಾರ ಸಭೆ ಬಿಸಿರೋಡ್ ನಲ್ಲಿ ನಡೆಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳ ಹೆಸರಿನಲ್ಲಿ ಮುಸ್ಲಿಮರನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ಶೂಟೌಟ್, ಮನೆ, ಕಟ್ಟಡಗಳ ಜಪ್ತಿ, ಪ್ರಾರ್ಥನೆ ಸಲ್ಲಿಸುವ ಮಸೀದಿಗಳ ಒಳಗೆ ಪೊಲೀಸ್ ಪೇದೆಗಳು ಗೋಹತ್ಯೆ ಕಾಯಿದೆಯ ಮಾಹಿತಿ ಕೊಡುವ ನೆಪದಲ್ಲಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವನ್ನು ಮುಸ್ಲಿಂ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ದ್ವೇಷ ಭಾಷಣ ಮಾಡುವ ಸಂಘಪರಿವಾರದ ಮುಖಂಡರ ಮೇಲೆ ಮೃದು ದೋರಣೆ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಮಂಗಳೂರಿನ ಕುದ್ರೋಳಿಯಲ್ಲಿರುವ ಅಧಿಕೃತ ಕಸಾಯಿಖಾನೆಯನ್ನು ಕಳೆದ ಹಲವಾರು ವರ್ಷಗಳಿಂದ ಬಂದ್ ಮಾಡಿ ಇಟ್ಟಿದೆ. ಇದರಿಂದ ಸರಕಾರದ ಆದಾಯವು ಕೈತಪ್ಪಿದ್ದು ಮಾತ್ರವಲ್ಲ ಕಾನೂನಾತ್ಮಕವಾದ ಆಹಾರವನ್ನು ಕಸಿದುಕೊಳ್ಳುವ ಷಡ್ಯಂತ್ರವಾಗಿದೆ. ಆದ್ದರಿಂದ ಕುದ್ರೋಳಿ ಕಸಾಯಿಖಾನೆಯನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಪ್ರತೀ ತಾಲೂಕು ಮಟ್ಟದಲ್ಲಿ ಸುಸಜ್ವಿತವಾದ ಕೋಣ, ಎತ್ತು ಮತ್ತು ಕುರಿಯ ಕಸಾಯಿಖಾನೆಯನ್ನು ತೆರೆಯಲು ಸರಕಾರ ಮತ್ತು ಜಿಲ್ಲಾಡಳಿತ ಮುಂದಾಗಬೇಕು. ಮತ್ತು ಅವೈಜ್ಞಾನಿಕ, ರೈತ ವಿರೋಧಿ, ಮತ್ತು ರಾಜಕೀಯ ಪ್ರೇರಿತ ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯುವ ವಿಚಾರವಾಗಿ ಸರ್ಕಾರಕ್ಕೆ ಒತ್ತಡ ಹಾಕುವ ಬಗ್ಗೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ | ನಿಯಂತ್ರಣ ತಪ್ಪಿ ಸರ್ಕಲ್ಗೆ ಡಿಕ್ಕಿ ಹೊಡೆದ ಕಾರು; ಮೂವರು ಸಾವು
ಅದೇ ರೀತಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಸ್ಲಿಂ ಸಮುದಾಯದಕ್ಕೆ ಪೊಲೀಸ್ ಇಲಾಖೆಯಿಂದ ಆಗುತ್ತಿರುವ ಅನ್ಯಾಯಕ್ಕೂ ಹೆಚ್ಚು ಸಮಸ್ಯೆ ಮುಸ್ಲಿಮರೇ ಅಧಿಕಾರಕ್ಕೆ ತಂದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗುತ್ತಿದೆ. ಇಂತಹ ಪರಿಸ್ಥಿತಿ ಅಗುವುದಾದರೆ ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಲು ನಾವೆಲ್ಲರೂ ತಯಾರಾಗಿದ್ದೇವೆ ಎಂದು ಮುಖಂಡರು ಸಭೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಮುಸ್ಲಿಂ ಮುಖಂಡರ ನಿಯೋಗ ಶೀಘ್ರದಲ್ಲೇ ಮುಖ್ಯಮಂತ್ರಿ, ಮುಸ್ಲಿಂ ಸಚಿವರಿಗೆ ಮನವಿ ಸಲ್ಲಿಸುವ ಬಗ್ಗೆ, ತೀರ್ಮಾನಿಸಲಾಯಿತು. ಅದೇರೀತಿ ಎಲ್ಲಾ ಮುಸ್ಲಿಂ ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರನ್ನೊಳಗೊಂಡ ಜಿಲ್ಲಾ ಮುಸ್ಲಿಂ ಒಕ್ಕೂಟ ರಚನೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ರಾಜಕೀಯ, ಸಾಮಾಜಿಕ ಮುಖಂಡರು, ಧಾರ್ಮಿಕ ನೇತಾರರು ಹಲವಾರು ಮಸೀದಿಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.





