29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವ ಕೇಂದ್ರದ ಮೋದಿ ಸರ್ಕಾರದ ವಿರುದ್ಧ CITU ಆಕ್ರೋಶ ಹೊರಹಾಕಿದೆ. ಫೆಬ್ರವರಿ 12ರಂದು ನಡೆಯಲಿರುವ ದೇಶವ್ಯಾಪಿ ಅಖಿಲ ಭಾರತ ಮುಷ್ಕರದ ಪ್ರಚಾರಾರ್ಥವಾಗಿ ಸಿಐಟಿಯು ಉಳ್ಳಾಲ ತಾಲೂಕು ಸಮಿತಿಯ ವತಿಯಿಂದ ತಲಪಾಡಿಯಿಂದ ಪಂಪ್ವೆಲ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಇಂದು ಆಯೋಜಿಸಲಾಗಿತ್ತು.
ಜಾಥಾವನ್ನು ತಲಪಾಡಿಯಲ್ಲಿ ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ, ಕೇಂದ್ರದ ಮೋದಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿ ಮಾಲಿಕರ ಪರ ಕಾನೂನುಗಳಾಗಿ ಪರಿವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಸ್ವಾತಂತ್ರ್ಯ ನಂತರ ದೀರ್ಘ ಹೋರಾಟಗಳ ಫಲವಾಗಿ ಕಾರ್ಮಿಕರಿಗೆ ದೊರೆತ ಕನಿಷ್ಠ ವೇತನ, ಕೆಲಸದ ಸಮಯದ ಮಿತಿ, ಸಂಘಟನೆ ಹಾಗೂ ಮುಷ್ಕರದ ಹಕ್ಕು, ಸಾಮಾಜಿಕ ಭದ್ರತೆ ಮೊದಲಾದ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನವೇ ಈ ನಾಲ್ಕು ಕಾರ್ಮಿಕ ಸಂಹಿತೆಗಳು ಎಂದು ಅವರು ಹೇಳಿದರು.
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಉನ್ನತ ತ್ರಿಪಕ್ಷೀಯ ವೇದಿಕೆಯಾದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಕರೆಯದೇ ಇರುವುದು ಕಾರ್ಮಿಕ ವಿರೋಧಿ ನಿಲುವಿನ ಸ್ಪಷ್ಟ ಸಾಕ್ಷಿ ಎಂದು ಶೆಟ್ಟಿ ಟೀಕಿಸಿದರು. ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒಕ್ಕೊರಳಿನಿಂದ ವಿರೋಧ ವ್ಯಕ್ತಪಡಿಸಿದ್ದರೂ, ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಗೈರುಹಾಜರಿಯ ವೇಳೆ ಯಾವುದೇ ಸಮಗ್ರ ಚರ್ಚೆಯಿಲ್ಲದೆ ಈ ಸಂಹಿತೆಗಳಿಗೆ ಅಂಗೀಕಾರ ಪಡೆಯಲಾಗಿದೆ ಎಂದು ಆರೋಪಿಸಿದರು.

ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಸಂಘಟನೆ ಮತ್ತು ಮುಷ್ಕರದ ಹಕ್ಕನ್ನು ಕಾನೂನಾತ್ಮಕವಾಗಿ ಕುಂಠಿತಗೊಳಿಸಲಾಗಿದೆ ಎಂದು ಶೆಟ್ಟಿ ಹೇಳಿದರು. 1926ರ ಟ್ರೇಡ್ ಯೂನಿಯನ್ ಕಾಯ್ದೆಯ ಪ್ರಕಾರ ಏಳು ಕಾರ್ಮಿಕರು ಸೇರಿ ಸಂಘ ರಚಿಸಲು ಅವಕಾಶವಿದ್ದರೆ, ಈಗ ಅದಕ್ಕೂ ಅಡೆತಡೆ ಸೃಷ್ಟಿಸಲಾಗಿದೆ. ಹಿಂದಿನ ಕಾನೂನಿನಂತೆ ಮುಷ್ಕರಕ್ಕೆ 15 ದಿನಗಳ ನೋಟಿಸ್ ಸಾಕಾಗುತ್ತಿತ್ತು. ಆದರೆ ಹೊಸ ಸಂಹಿತೆಗಳಲ್ಲಿ ಅದನ್ನು 60 ದಿನಗಳಿಗೆ ಏರಿಸಲಾಗಿದೆ. ಸಂಧಾನ ಪ್ರಕ್ರಿಯೆಯ ಅವಧಿಯಲ್ಲಿ ಮುಷ್ಕರ ನಡೆಸುವುದು ಅಕ್ರಮವಾಗಿದ್ದು, ಮತ್ತೊಬ್ಬರ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಷ್ಕರ ಮಾಡಿದರೂ ಅಪರಾಧವೆಂದು ಪರಿಗಣಿಸುವಂತಹ ಕರಾಳ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಬೆಳ್ತಂಗಡಿ | ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು
ಈ ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಎಲ್ಲಾ ಕಾರ್ಮಿಕ ವರ್ಗದವರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂದು ಜೆ. ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.
ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಥಾದಲ್ಲಿ ಕಾರ್ಮಿಕ ಮುಖಂಡರಾದ ಸುಂದರ ಕುಂಪಲ, ಜಯಂತ್ ನಾಯಕ್, ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ರಫೀಕ್ ಹರೇಕಳ, ನಿತಿನ್ ಕುತ್ತಾರ್, ಶೇಖರ್ ಕುಂದರ್, ಮಹಾಬಲ ದೆಪ್ಪೆಲಿಮಾರ್, ರೋಹಿದಾಸ್ ಭಟ್ನಗರ, ಇಬ್ರಾಹಿಂ ಮದಕ, ರಮೇಶ್ ಉಳ್ಳಾಲ, ಸುನಿಲ್ ತೇವುಲ, ಪ್ರಮೋದಿನಿ ಕಲ್ಲಾಪು, ಜಯರಾಮ್ ತೇವುಲ, ಜನಾರ್ಧನ ಕುತ್ತಾರ್, ರಝಕ್ ಮುಡಿಪು, ಅಶ್ರಫ್ ಹರೇಕಳ, ರಿಜ್ವಾನ್ ಹರೇಕಳ ಸೇರಿದಂತೆ ಹಲವರು ಭಾಗವಹಿಸಿದ್ದರು.





