ವಿಶೇಷ ತನಿಖಾ ತಂಡ (ಎಸ್ಐಟಿ) ಧರ್ಮಸ್ಥಳದ ಎಲ್ಲಾ ಅಪರಾಧ ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ (NFIW) ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ ದಾವಣಗೆರೆ ಜಿಲ್ಲಾ ಸಮಿತಿ ಸಹಿ ಸಂಗ್ರಹ ಚಳುವಳಿ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿತು.
ದಾವಣಗೆರೆ ಪಂಪಾಪತಿ ಭವನದಲ್ಲಿ, ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟದ ಕರೆಯ ಮೇರೆಗೆ ಕರ್ನಾಟಕ ರಾಜ್ಯೋತ್ಸವದ ದಿನದಂದು ಸಹಿ ಸಂಗ್ರಹ ಚಳುವಳಿ ಆರಂಭಿಸಿದ ಮಹಿಳಾ ಮುಖಂಡರು, “ಧರ್ಮಸ್ಥಳ ನೆಲದಲ್ಲಿ ದಶಕಗಳಿಂದ ಹೆಣ್ಣು ಮಕ್ಕಳನ್ನು, ಗಂಡಸರನ್ನು ಘೋರ ಹಿಂಸೆಗೊಳಪಡಿಸಿ ಜೀವ ತೆಗೆದ ದುರುಳರು ಯಾರೆಂದು ಪತ್ತೆ ಹಚ್ಚದೆ ನೇರವಾಗಿ ಮತ್ತು ಪರೋಕ್ಷವಾಗಿ ಅವರ ರಕ್ಷಣೆಗೆ ನಿಂತಿರುವ ಸರ್ಕಾರ, ಅದರ ಸಚಿವರು ಈ ನಾಡಿನ ಸಂಸದರು, ವಿರೋಧ ಪಕ್ಷಗಳ ನಾಯಕರು, ಶಾಸಕರು, ಜನಪ್ರತಿನಿಧಿಗಳೆಲ್ಲರೂ ರಾಜ್ಯದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುವ ಅಧಿಕಾರವನ್ನು ನೈತಿಕವಾಗಿ ಕಳೆದುಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸೌಜನ್ಯ, ಯಮುನಾ- ನಾರಾಯಣ, ಪದ್ಮಲತಾ, ವೇದವಲ್ಲಿಯಂತಹ ಕನ್ನಡ ನೆಲದ ಮಕ್ಕಳು ಪದಗಳಲ್ಲಿ ಹೇಳಲಾರದಷ್ಟು ನೋವುಂಡು ಮಣ್ಣಾದ ಕಹಿ ನೆನಪುಗಳು ಇಂದಿಗೂ ಜನರನ್ನು ಕಾಡುತ್ತಿವೆ.
ಧರ್ಮಸ್ಥಳದಲ್ಲಿ ಹತ್ತಾರು ವರ್ಷಗಳಿಂದ ನಡೆದಿರುವ, ಅನೇಕ ಮಹಿಳೆಯರ ನಾಪತ್ತೆ, ಅತ್ಯಾಚಾರ, ಅಸಹಜ ಸಾವು ಹಾಗೂ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳನ್ನು ಇನ್ನೂ ಪತ್ತೆ ಮಾಡಿಲ್ಲ, ನಿರ್ದಿಷ್ಟ ಕಾರಣ ಹೇಳದೆ ತನಿಖೆಯನ್ನು ನಿಲ್ಲಿಸಲಾಗಿದೆ, ಈ ನಿರ್ಧಾರವು ಸರಿಯಲ್ಲ ಹೀಗಾಗಿ ಧರ್ಮಸ್ಥಳ ಪ್ರಕರಣದಲ್ಲಿ ಅಪರಾಧಿಗಳು ಪತ್ತೆಯಾಗುವವರೆಗೂ ಎಸ್ ಐ ಟಿ ತನಿಖೆ ಮುಂದುವರೆಯಬೇಕು, ಧರ್ಮಸ್ಥಳದ ಎಲ್ಲಾ ಪ್ರಕರಣಗಳನ್ನು ಸಂಪೂರ್ಣವಾಗಿ ಎಸ್ ಐ ಟಿ (SIT)ತನಿಖೆಗೆ ಒಳಪಡಿಸಬೇಕು” ಎಂದು ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳೆಯರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದರು. ಸಹಿ ಸಂಗ್ರಹ ಮಾಡಿದ್ದನ್ನು ಮಹಿಳಾ ಒಕ್ಕೂಟದ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಂಘಟಕರು ತಿಳಿಸಿದರು.
“ರಾಜ್ಯ ಎಂದರೆ ಬರೀ ಗಡಿಯಲ್ಲ, ಸೀಮೆಯಲ್ಲ ಈ ನೆಲದಲ್ಲಿರುವ ಮನುಷ್ಯರು ಜನಸಾಮಾನ್ಯರು.ಎಸ್ ಐ ಟಿ ರಚಿಸಿದ್ದರೂ ನಾಡಿನ ಜನತೆಗೆ ನ್ಯಾಯ ಸಿಗದೇ, ಅತ್ಯಾಚಾರ- ಕೊಲೆಗಳ ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡಿರುತ್ತಾರೆ ಎಂದಾದರೆ ಸರ್ಕಾರ ನಡೆಸುವ ಕನ್ನಡ ನಾಡಿನ ಉತ್ಸವಕ್ಕೆ ಏನು ಅರ್ಥ ಎಂದು ಜನ ಕೇಳುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳದ ಇಳುವರಿ ಕುಸಿತ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?
ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜಾ, ಚಂದ್ರಮ್ಮ, ಮಂಜುಳಾ, ಮಹಿಳಾ ಮುನ್ನಡೆ ಸಂಘಟನೆ ಮುಖಂಡರಾದ ಪವಿತ್ರ ಸೇರಿದಂತೆ ಮುಖಂಡರುಗಳಾದ ಆವರಗೆರೆ ಚಂದ್ರು,ಹೆಚ್ ಜಿ ಉಮೇಶ್ ,ಜಿ ಯಲ್ಲಪ್ಪ,ವಿ ಲಕ್ಷ್ಮಣ, ಸತೀಶ್ ಅರವಿಂದ್, ಸುರೇಶ್ ಯರಗುಂಟೆ, ಹೆಚ್ ಪಿ ಉಮಾಪತಿ, ನಾಗೇಂದ್ರಚಾರಿ ಹಾಗೂ ಇತರರು ಮಹಿಳಾ ಸಂಘಟನೆಯ ಸಹಿಸಂಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು.





