ಮನೆ, ಕಾರು, ಚಿನ್ನದ ಆಮಿಷವೊಡ್ಡಿ ಜನರಿಂದ ಹಣ ಪಡೆದು ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಒತ್ತಾಯಿಸಿದರು.
ನ್ಯೂ ಇಂಡಿಯಾ ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದರು.
“ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಮಂಗಳೂರು ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಹಣ ಸಂಗ್ರಹಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನೆ ವಿಸ್ತರಣೆಯಾಗಿದೆ. ಜಿಲ್ಲೆಯಲಿರುವ ಎಲ್ಲ ಲಕ್ಕಿ ಸ್ಕೀಮ್ಗಳು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿವೆ. ಹಾಗಾಗಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು” ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಬಡವರ ಪ್ರಾಮಾಣಿಕತೆಯನ್ನು ಹೈಜಾಕ್ ಮಾಡಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ಹೆಣ್ಣುಮಕ್ಕಳ ಮದುವೆಗೆ ಸಹಾಯವಾಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯವಾಗಿದೆ. ನ್ಯೂ ಇಂಡಿಯಾ ಕಂಪೆನಿ ಮಾಲೀಕನಿಂದ 50 ಕೋಟಿ ರೂಪಾಯಿಯ ವಂಚನೆ ನಡೆದಿದೆ. ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆಯಾಗುತ್ತಿರಲಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅದಾನಿ, ಅಂಬಾನಿಗಳನ್ನು ಗ್ರಾಮ ಪಂಚಾಯಿತಿಗೂ ತರುವ ಹುನ್ನಾರ ನಡೆದಿದೆ: ಸಚಿವ ಆರ್ ಬಿ ತಿಮ್ಮಾಪುರ್
ಸಿಐಟಿಯು ಮುಖಾಂಡ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ತಯ್ಯುಬ್ ಬೆಂಗ್ರೆ ಮಾತನಾಡಿದರು. ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂತ್ರಸ್ತರ ವೇದಿಕೆಯ ಪ್ರಮುಖರಾದ ಪರ್ವೀಜ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಜೀಜ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮಿ ಉಳ್ಳಾಲ, ಖೈರುನ್ನಿಸ ಉಚ್ಚಿಲ, ಸುಜಾತ ಮಧ್ಯಪಾದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮೊಹಮ್ಮದ್ ಪಾಷ ಶಿವಮೊಗ್ಗ ಇದ್ದರು.





