ಮಂಗಳೂರು ನಗರ ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ದಿಢೀರ್ ಜೈಲು ತಪಾಸಣೆ ನಡೆಸಿದ್ದು, ಈ ಸಂದರ್ಭ 2 ಮೊಬೈಲ್ಗಳು, 1 ಸಿಮ್ ಕಾರ್ಡ್ ಮತ್ತು 1 ಕೇಬಲ್ ರಹಿತ ಮೊಬೈಲ್ ಚಾರ್ಜರ್ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇವುಗಳು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವುದರಿಂದ ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ನೀಡಿ ಪ್ರಕರಣ ದಾಖಲಿಸಲಾಗಿದೆ.
“ಇಲಾಖೆಯ ಮುಖ್ಯಸ್ಥರಾದ ಐಪಿಎಸ್ ಅಲೋಕ್ ಕುಮಾರ್, ಕರ್ನಾಟಕ ಕಾರಾಗೃಹ ಮಹಾನಿರ್ದೇಶಕರು ಮತ್ತು ಸುಧಾರಣಾ ಸೇವೆ ಬೆಂಗಳೂರು ಇವರಿಗೆ ದೂರವಾಣಿ ಮುಖಾಂತರ ವಿಷಯವನ್ನು ತಿಳಿಸಲಾಗಿದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.
ಈ ವೇಳೆ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
ಕಾರಾಗೃಹಗಳು ಕೈದಿಗಳ ಸುಧಾರಣೆಗೆ ಮೀಸಲಾದ ಸ್ಥಳಗಳು. ಆದರೆ, ನಿಷೇಧಿತ ವಸ್ತುಗಳು ಒಳಹೊಕ್ಕುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದು ಕೈದಿಗಳು ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಅಪರಾಧ ಚಟುವಟಿಕೆಗಳನ್ನು ಮುಂದುವರೆಸುವ ಅಪಾಯವನ್ನು ಹೆಚ್ಚಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಜಿಂದಾಲ್ ಟೌನ್ಶಿಪ್ನಲ್ಲಿ ರೋಹಿಣಿ ಸಿಂಧೂರಿ ವಾಸ್ತವ್ಯ; ತನಿಖೆಗೆ ರೈತರ ಆಗ್ರಹ
ಈ ರೀತಿಯ ಘಟನೆಗಳು ಮಂಗಳೂರು ಜೈಲಿನಲ್ಲಿ ಹೊಸದಲ್ಲ. ಕಳೆದ ಡಿಸೆಂಬರ್ನಲ್ಲೇ ಗಲಾಟೆಯ ನಂತರ 4 ಮೊಬೈಲ್ಗಳು ಪತ್ತೆಯಾಗಿದ್ದವು ಮತ್ತು ಹಿಂದಿನ ವರ್ಷಗಳಲ್ಲೂ ಮಾದಕ ವಸ್ತುಗಳು, ಫೋನ್ಗಳು ಜಪ್ತಿಯಾಗಿರುವ ಉದಾಹರಣೆಗಳಿವೆ. ಜೈಲು ಸಿಬ್ಬಂದಿ, ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು, ಮೊಬೈಲ್ಗಳ ಸಮರ್ಪಕ ಬಳಕೆ ಮತ್ತು ನಿಗಾವಣೆಯನ್ನು ಹೆಚ್ಚಿಸುವುದು ಅತ್ಯಗತ್ಯ. ಇಂತಹ ಕ್ರಮಗಳು ಇಲ್ಲದಿದ್ದರೆ ಕಾರಾಗೃಹಗಳು ಸುಧಾರಣಾ ಕೇಂದ್ರಗಳಾಗದೆ ಅಪರಾಧ ಕೇಂದ್ರಗಳಾಗಿ ಪರಿವರ್ತನೆಯಾಗುವ ಅಪಾಯವಿದೆ.
ಕಾರಾಗೃಹ ಇಲಾಖೆಯು ಈ ಘಟನೆಯಿಂದ ಪಾಠ ಕಲಿತು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇಂತಹ ಪುನರಾವರ್ತನೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಒಳಿತು.





