ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮಧ್ಯೆ ಮೈಮನಸ್ಸು ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪದ ಮೇಲೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮತ್ತು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ದೂರು ದಾಖಲಾಗಿದೆ.
ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ಸಮಿತಿ ಪುತ್ತೂರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ದಿನಾಂಕ 12-01-2026ರಂದು ಪುತ್ತೂರಿನ ವಿವೇಕಾನಂದ ಕಾಲೇಜು ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದು, ಅಲ್ಲಿ ವಿವಿಧ ಧರ್ಮಗಳ ನಾಗರಿಕರು ಸೇರಿದ್ದು ಭಾಷಣದಲ್ಲಿ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ರೀತಿಯಲ್ಲಿ ಮಾತನಾಡಲಾಗಿದೆ. ಇತಿಹಾಸವನ್ನು ಉಲ್ಲೇಖಿಸಿ ಮುಸ್ಲಿಂ ಮತ್ತು ಕ್ರೈಸ್ತರ ಬಗ್ಗೆ ನಿಂದನಾತ್ಮಕವಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಲ್ಲದೇ ಈ ಭಾಷಣವನ್ನು ವಿಕಸನ ಟಿವಿ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗಿದೆ. ಅದರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಮತಾಂತರ ವಿಚಾರದಲ್ಲಿ ಕ್ರೈಸ್ತರನ್ನು ದೂಷಿಸಲಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಲಾಗಿದೆ. ವೀರ ಮಹಿಳೆ ಒನಕೆ ಓಬವ್ವರನ್ನು ಉದಾಹರಣೆಯಾಗಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿದ್ದು, ಅಲ್ಲಿ ನೆರೆದಿದ್ದ ಜನರು ಮತ್ತು ಯೂಟ್ಯೂಬ್ ವೀಕ್ಷಕರಿಗೆ ದ್ವೇಷ ಸಂದೇಶ ಸಾರುವಂತಿದೆ. ಹಾಗಾಗಿ ಚಾನೆಲ್ ಮೇಲೆ ಕೂಡಾ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಪ್ರಭಾಕರ ಭಟ್ಟರ ಮೇಲೆ ದ್ವೇಷಭಾಷಣ ಮಾಡದಂತೆ ಕೋರ್ಟ್ ಷರತ್ತು ಇದ್ದು, ಈ ಕಾರಣದಿಂದ ಇದು ನ್ಯಾಯಾಲಯದ ಷರತ್ತು ಉಲ್ಲಂಘನೆಯಾಗಿದೆ ಎಂದಿರುವ ಮಾನವ ಬಂಧುತ್ವ ವೇದಿಕೆ, ಒಟ್ಟಾರೆ ದ್ವೇಷ ಭಾಷಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದೆ.
ಮಾನವ ಬಂಧುತ್ವ ವೇದಿಕೆಯ ಪುತ್ತೂರು ಸಮಿತಿಯ ರಾಮಚಂದ್ರ ಕೆ, ಡಾ.ರಾಜಾರಾಮ ಕೆ.ಬಿ. ಎಂ.ಬಿ. ವಿಶ್ವನಾಥ ರೈ, ಮಹಮ್ಮದ್ ಆಲಿ, ಮೌರಿಸ್ ಮಸ್ಕರೇನಸ್, ಕೆನ್ಯೂಟ್ ಮಸ್ಕರೇನಸ್, ಅಬ್ದುಲ್ ರಹಿಮಾನ್ ಯುನಿಕ್, ಬೋಲೋಡಿ ಚಂದ್ರಶೇಖರ ರೈ, ಶಶಿಕಿರಣ್ ರೈ, ಪ್ರಕಾಶ್ ಗೌಡ ಜೊತೆಯಾಗಿ ದೂರು ನೀಡಿದ್ದಾರೆ.
ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ: ಪ್ರಭಾಕರ ಭಟ್ಟ ವಿರುದ್ಧ ದೂರು
ಪೋಸ್ಟ್ ಹಂಚಿಕೊಳ್ಳಿ:




