ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ, ಮಾರ್ಚ್ 11ರಂದು ತನ್ನ ಸ್ನೇಹಿತರೊಂದಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದಾನೆ. ರಾತ್ರಿ ಸುಮಾರು 8.30ರ ಸುಮಾರಿಗೆ ಜಾತ್ರೆಯ ವೇಳೆ ಸ್ನೇಹಿತರು ಜಾಯಿಂಟ್ ಫೀಲ್ ಮೇಲೆ ಹತ್ತಿದಾಗ, ಸಮೀಪದಲ್ಲಿದ್ದ ಬಾಲಕನನ್ನು ಕೆಲವರು “ನೀನು ಮುಸ್ಲಿಮನಾ?” ಎಂದು ಪ್ರಶ್ನಿಸಿದ್ದು, ಹೌದು ಎಂದು ಹೇಳಿದ ಕೂಡಲೇ ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕನನ್ನು ರಕ್ಷಿಸಲು ಮುಂದಾದ ಸ್ನೇಹಿತರ ಮೇಲೂ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಜನಸಂದಣಿ ಹೆಚ್ಚಾದ ಸಂದರ್ಭದಲ್ಲೇ ಬಾಲಕನನ್ನು ಬೈಕ್ನಲ್ಲಿ ಅಪಹರಿಸಿ ಸುಮಾರು ಐದು ಕಿಲೋಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು, ಹತ್ತಕ್ಕೂ ಹೆಚ್ಚು ಮಂದಿ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. “ನೀವು ಟೆರರಿಸ್ಟ್ಗಳು” ಎಂದು ಅವಹೇಳನಕಾರಿ ಮಾತುಗಳನ್ನಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಬಾಲಕನಿಗೆ ಬೆದರಿಕೆ ಹಾಕಿ ವಿಡಿಯೋ ಕೂಡ ಚಿತ್ರೀಕರಿಸಿದ್ದು, ನಂತರ ತಡರಾತ್ರಿ ಉಜಿರೆಯ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಮನಗೆ ಬಂದ ಬಾಲಕ ಖಿನ್ನತೆಯಿಂದ ಇದ್ದು, ವಿಷಯವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಆರೋಪಿಗಳು ಪ್ರತಿದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಕರೆ ಸ್ವೀಕರಿಸದಿದ್ದಾಗ “ನಿನ್ನ ಮನೆಗೆ ಬರುತ್ತೇವೆ” ಎಂಬ ಸಂದೇಶ ಕಳುಹಿಸಿರುವುದಾಗಿ ತಿಳಿದುಬಂದಿದೆ. ಈ ಒತ್ತಡದಿಂದ ಮಾನಸಿಕವಾಗಿ ಕುಗ್ಗಿದ ಬಾಲಕ ಆತ್ಮಹತ್ಯೆ ಯತ್ನಿಸುವ ನಿರ್ಧಾರಕ್ಕೆ ಬಂದು ಡೆತ್ ನೋಟ್ ಬರೆದಿದ್ದಾನೆ.
ಈ ಡೆತ್ ನೋಟ್ ಮನೆಯವರ ಗಮನಕ್ಕೆ ಆಕಸ್ಮಿಕವಾಗಿ ಬಂದಿದ್ದು, ಬಳಿಕ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಇದರ ಆಧಾರದ ಮೇಲೆ ಬಾಲಕನ ತಂದೆ ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ, ಅಪಹರಣ, ಗುಂಪು ದಾಳಿ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಆರೋಪಗಳ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) 137(2), 115(2), 351(2), 352, 353(2) ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.





