ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆ ಗ್ರಾಮದ ದಲಿತ ಯುವಕ ಶ್ರೀಧರ ಕೊಲೆ ಪ್ರಕರಣದ ಆರೋಪಿಗಳಿಗೆ ಬೆಳ್ತಂಗಡಿ ಶಾಸಕರು ಬೆಂಗಾವಲಾಗಿ ನಿಂತಿದ್ದಾರೆ. ಇದರಿಂದಾಗಿ ತನಿಖೆಗೆ ಹಿನ್ನಡೆಯಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆರೋಪಿಸಿದೆ.
2022ರ ಡಿಸೆಂಬರ್ 17ರಂದು ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ದಲಿತ ಯುವಕ ಶ್ರೀಧರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಕೊಲೆ ಘಟನೆಯನ್ನು ಖಂಡಿಸಿ ಅಂದು ದಲಿತ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾಗಿದ್ದ ಶ್ರೀಧರ, ಶಿಬಾಜೆಯ ಸಾರಾ ಫಾರ್ಮ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನನ್ನು ಮಹೇಶ್ ಪೂಜಾರಿ, ತಿಮ್ಮಪ್ಪ ಪುಜಾರಿ, ಲಕ್ಷ್ಮಣ್ ಪೂಜಾರಿ, ಕೆ.ಎಲ್.ಆನಂದ ಗೌಡ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಆದರೆ, ಚಾರ್ಜ್ಶೀಟ್ ಸಲ್ಲಿಸುವಾಗ ಕೊಲೆ ಯತ್ನ ಹಾಗೂ ಕೊಲೆಗೆ ಸಂಬಂಧಿಸಿದ ಸೆಕ್ಷನ್ಗಳನ್ನು ಉಲ್ಲೇಖಿಸದೆ, ಶ್ರೀಧರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬರೆದು, ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು” ಎಂದು ದಲಿತ ಸಂಘಟನೆಗಳು ಆರೋಪಿಸಿವೆ.
“ಪ್ರಕರಣವನ್ನು ತಿರುಚುವಲ್ಲಿ ಹಾಗೂ ಆರೋಪಿಗಳ ರಕ್ಷಣೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕೈವಾಡ ಇದೆ ಎಂದು ದಸಂಸ ಸಮನ್ವಯ ಸಮಿತಿ ಸಂಚಾಲಕ ಅಶೋಕ್ ಕೊಂಚಾಡಿ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸದೆ ದುರ್ಬಲ ಸೆಕ್ಷನ್ ಹಾಕಿದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರಾಗುವಂತಾಗಿತ್ತು” ಎಂದು ಅಶೋಕ್ ಕೊಂಚಾಡಿ ಆರೋಪಿಸಿದ್ದಾರೆ.
“ಘಟನೆಯ ಸಾಕ್ಷಿಯಾಗಿದ್ದ ಹರೀಶ್ ಮೊಗೇರೆ ಅವರನ್ನು ಕೊಲೆ ಆರೋಪಿ ಮಹೇಶ್ ಪೂಜಾರಿ ಬೆದರಿಸಿ, ದೌರ್ಜನ್ಯ ನಡೆಸಿ ಅವಮಾನ ಮಾಡಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ. ಈ ಬಗ್ಗೆ ಕೂಡ ಸರಿಯಾಗಿ ತನಿಖೆ ನಡೆಸದೆ ಆರೋಪಿ ಬಗ್ಗೆ ‘ಬಿ’ ರಿಪೋರ್ಟ್ ಹಾಕಿ ಆರೋಪಿ ಸುಲಭದಲ್ಲಿ ಪಾರಾಗಲು ಪೊಲೀಸರು ಪರೋಕ್ಷವಾಗಿ ಸಹಕರಿಸಿದ್ದಾರೆ” ಎಂದು ಅಶೋಕ್ ಕೊಂಚಾಡಿ ದೂರಿದ್ದಾರೆ.
“ತನಿಖಾಧಿಕಾರಿಗಳಿಗೆ ಬೆಳ್ತಂಗಡಿ ಶಾಸಕರು ಒತ್ತಡ ಹಾಕಿ ಜಿಲ್ಲಾ ನ್ಯಾಯಾಲಯದಲ್ಲಿದ್ದ ಕಡತವನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ರವಾನಿಸಿ ಎ.ಪಿ.ಪಿ. ಅವರೆದುರು ಸಾಕ್ಷಿದಾರ ಹರೀಶನ ಮರು ಹೇಳಿಕೆ ಎಂದು ದಾಖಲಿಸುವಂತೆ ಮಾಡಿಸಿ, ಸಾಕ್ಷಿದಾರರ ವಿರುದ್ಧ ದಲಿತ ದೌರ್ಜನ್ಯ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿಸಿ ಕೊಲೆ ಆರೋಪಿಗೆ ಜಾಮೀನು ಕೊಡಿಸುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಹರೀಶ್ ಅವರನ್ನು ನ್ಯಾಯಾಲಯದ ಚೇಂಬರ್ ಗೆ ಕರೆಸಿದ ನ್ಯಾಯಾಲಯವು ಸಾಕ್ಷಿದಾರರು ಮರು ಹೇಳಿಕೆ ನೀಡಿದ್ದಾರೆಯೇ ಎಂದು ವಿಚಾರಿಸಿದಾಗ ಸಾಕ್ಷಿದಾರ ಹರೀಶ್ ಅವರು ತಾನು ಮರು ಹೇಳಿಕೆ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ನ್ಯಾಯಾಲಯ ಪೊಲೀಸರಿಗೆ ಛಿಮಾರಿ ಹಾಕಿತ್ತು” ಎಂದು ಅಶೋಕ್ ಕೊಂಚಾಡಿ ಹೇಳಿದ್ದಾರೆ.
“ಶ್ರೀಧರ ಕೊಲೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಪಕ್ಷಪಾತಿ ಧೋರಣೆಯ ವಿರುದ್ಧ ದಲಿತ ಸಂಘಟನೆಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ದೂರು ಸಲ್ಲಿಸಿದ ಮೇರೆಗೆ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿತ್ತು” ಎಂದು ತಿಳಿಸಿದ್ದಾರೆ.
“ಪ್ರಕರಣದ ದೂರುದಾರ ಹಾಗೂ ಇನ್ನೋರ್ವ ಸಾಕ್ಷಿಯಾಗಿರುವ ಗುರುವ ಮುಗೇರ ಎಂಬವರ ಮೇಲೂ ಕೊಲೆ ಆರೋಪಿ ಮಹೇಶ್ ಪೂಜಾರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ, ಈ ಪ್ರಕರಣದಲ್ಲಿ ಆರೋಪಿಯ ಜಾಮೀನು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ. ಇಷ್ಟರಲ್ಲಿ ಪೊಲೀಸರ ವಶದಲ್ಲಿ ಇರಬೇಕಾದ ಆರೋಪಿಗಳು ಬಾರ್ನಲ್ಲಿ ಪಾನಮತ್ತರಾಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಪೊಲೀಸರಿಗೇ ಸವಾಲೊಡ್ಡಿದ್ದಾರೆ” ಎಂದು ಅಶೋಕ್ ಕೊಂಚಾಡಿ ಆರೋಪಿಸಿದರು.
ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದ್ದು ಬಂಧನ ವಿಳಂಬವಾದರೆ ಡಿವೈಎಸ್ ಪಿ ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡರಾದ ಎಂ.ದೇವದಾಸ್, ರಮೇಶ್ ಕೋಟ್ಯಾನ್, ರಘು ಎಕ್ಕಾರ್ ಸರೋಜಿನಿ ಬಂಟ್ವಾಳ, ದಿನೇಶ್ ಮೂಳೂರು, ಪ್ರೇಮ್ ಬಳ್ಳಾಲ್ ಭಾಗ್, ಚಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




