ಮೈಸೂರಿನ ರೋಟರಿ ಸಭಾಂಗಣದಲ್ಲಿ ಶನಿವಾರ ದಸಂಸ ರಾಜ್ಯ ಸಂಚಾಲಕ ದಿ. ಲಕ್ಷ್ಮಿನಾರಾಯಣ ನಾಗವಾರ ಅವರ ಪ್ರಥಮ ವರ್ಷದ ಸ್ಮರಣಾರ್ಥ ನಡೆದ ‘ಗುರಿಮುಟ್ಟದ ದಲಿತ ರಾಜಕಾರಣ ಮತ್ತು ಮುಂದಿನ ನಡೆ’ ವಿಚಾರ ಸಂಕೀರಣದಲ್ಲಿ ಮಾತನಾಡಿದ ಲೇಖಕ ಸಿ. ಹರಿಕುಮಾರ್, ‘ದಲಿತರು ಸಿಎಂ ಸ್ಥಾನಕ್ಕಾಗಿ ಬೇಡದೇ, ಹಕ್ಕಾಗಿ ಮಂಡಿಸಬೇಕು’ ಎಂದು ಕಿವಿಮಾತು ಹೇಳಿದರು.
“ಸಿದ್ದರಾಮಯ್ಯ ಅಹಿಂದ ನಾಯಕರಾಗಿ, ಕೋಮುವಾದಿಗಳ ಕಡು ವಿರೋಧಿಯಾಗಿ ಗುರುತಿಸಿಕೊಂಡು, ಕಂದಾಚಾರ, ಮೌಢ್ಯಗಳನ್ನು ದಿಕ್ಕರಿಸಿ ರಾಜಕಾರಣದ ವಿಚಾರ ಬಂದಾಗ ಅಧಿಕಾರಕ್ಕಾಗಿ ಬೇಡಿಕೆಯ ಹಕ್ಕನ್ನು ಸಮರ್ಥವಾಗಿ ಮಂಡಿಸುತ್ತಾರೆ. ಎಲ್ಲಾ ಸಮುದಾಯದವರನ್ನು ತಮ್ಮೊಟ್ಟಿಗೆ ಕರೆದೊಯ್ಯುವ ಚಾಣಾಕ್ಷತನ ಎರಡು ಬಾರಿ ಮುಖ್ಯಮಂತ್ರಿಯಾಗುವಂತೆ ಮಾಡಿದೆ. ಇದುವರೆಗೆ ದಲಿತರು ಹಕ್ಕು ಮಂಡಿಸದೆ, ಕೇವಲ ಬೇಡುವುದೇ ಆಗಿರುವುದು ಸಮಾಜದ ಹಿನ್ನಡೆಗೆ ಕಾರಣ. ಸಚಿವ ಸತೀಶ್ ಜಾರಕಿಹೊಳಿ 2028ಕ್ಕೆಮುಖ್ಯಮಂತ್ರಿಹುದ್ದೆ ಕೇಳುವುದಾಗಿ ಹೇಳಿದ್ದಾರೆ. ಆದರೇ, ಹಕ್ಕು ಮಂಡಿಸುತಿಲ್ಲ” ಎಂದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, “ದಲಿತರ ಮುಂದಿನ ನಡೆ ಅಧಿಕಾರ ಹಿಡಿಯುವ ಕಡೆಗೆ ಸಾಗಬೇಕಿದೆ. ಕೇವಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟರೆ ಸಾಲದು. ಆರಂಭದಲ್ಲಿಯೇ ಷರತ್ತು ವಿಧಿಸಿ ಬೆಂಬಲ ಕೊಡುವಂತೆ ಹೇಳಿದ್ದೆ. ಆದರೇ, ಮುಖಂಡರು ಈ ಬಾರಿ ಸಮುದಾಯಕ್ಕೆ ಅಧಿಕಾರ ಸಿಗಲಿದೆ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದರು. ಇದರಿಂದ, ರಾಜಕೀಯ ಶಕ್ತಿ ಹೊಂದುವ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ಮಾತನಾಡಿ, “ಅಹಿಂದ ವರ್ಗ ಇರುವುದು ತಮಗಾಗಿ ಮಾತ್ರವೋ, ಇಲ್ಲಾ ಎಲ್ಲಾ ಸಮುದಾಯಗಳ ಒಳಗೊಳ್ಳುವಿಕೆಗೆ ಎಂಬುದನ್ನು ಸಿಎಂ ಸಿದ್ದರಾಮಯ್ಯನವರು ಅರಿತುಕೊಳ್ಳಬೇಕು. ದಲಿತರನ್ನು ಕೇವಲ ಮತ ಬ್ಯಾಂಕಾಗಿ ಬಳಸುವುದನ್ನು ಮೊದಲು ನಿಲ್ಲಿಸಬೇಕು. ರಾಜ್ಯದಲ್ಲಿ ಉನ್ನತ ಸ್ಥಾನಮಾನಗಳನ್ನು ನೀಡುವುದರ ಮೂಲಕ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ನಾಮಧಾರಿ ಗೌಡ ಸಮುದಾಯವನ್ನು ಪ್ರವರ್ಗ 2ಎ ಸೇರಿಸುವ ಪ್ರಯತ್ನಕ್ಕೆ ಪ್ರಾಮಾಣಿಕ ಬೆಂಬಲ: ಹೆಚ್ ಡಿ ಕುಮಾರಸ್ವಾಮಿ
ವಿಚಾರಸಂಕೀರಣದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದಸಂಸ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ವಿಭಾಗಿಯ ಸಂಚಾಲಕ ರಾಜಶೇಖರ್ ಕೋಟೆ, ಜಿಲ್ಲಾ ಸಂಚಾಲಕ ಸರಗೂರು ಸಣ್ಣಸ್ವಾಮಿ,ರಾಜ್ಯ ದಲಿತ ಮಹಿಳಾ ಒಕ್ಕೂಟದ ಸಂಚಾಲಾಕಿ ಜಾನಕಮ್ಮ ಲಕ್ಸ್ಮಿ ನಾರಾಯಣ ನಾಗವಾರ, ರಾಜ್ಯ ಕಾರ್ಯಕಾರಿ ಸಂಚಾಲಕ ಭುಗತಗಳ್ಳಿ ಕೆ. ಮಣಿಯಯ್ಯ ಸೇರಿದಂತೆ ಹಲವರು ಇದ್ದರು.





