ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಅಪ್ರತಿಮ ಸೌಂದರ್ಯದ ಗಣಿಯಾಗಿರುವ ದಾಂಡೇಲಿ ಅರಣ್ಯ ಪ್ರದೇಶವು ಮತ್ತೊಮ್ಮೆ ಪಕ್ಷಿ ಪ್ರೇಮಿಗಳ ಸಮ್ಮಿಲನಕ್ಕೆ ಸಜ್ಜಾಗುತ್ತಿದೆ.
ಪ್ರತಿ ವರ್ಷ ಜನವರಿ 5 ರಂದು ಆಚರಿಸಲಾಗುವ ‘ರಾಷ್ಟ್ರೀಯ ಪಕ್ಷಿ ದಿನ’ದ ಅಂಗವಾಗಿ, ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ರಕ್ಷಣೆ ಮತ್ತು ಪರಿಸರ ಸಮತೋಲನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಖ್ಯಾತ ಪಕ್ಷಿ ತಜ್ಞ ರಾಹುಲ್ ಭಾವಾಜಿ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಾನವನ ಹಸ್ತಕ್ಷೇಪ ಹಾಗೂ ಪರಿಸರ ಬದಲಾವಣೆಯಿಂದಾಗಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ನೈಸರ್ಗಿಕ ವಾಸಸ್ಥಾನಗಳ ರಕ್ಷಣೆ ಮತ್ತು ಜೀವವೈವಿಧ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ದಾಂಡೇಲಿಯ ಅರಣ್ಯ ಇಲಾಖೆಯ ವತಿಯಿಂದ ಜನವರಿ 16 ಮತ್ತು 17 ರಂದು ಆಯೋಜಿಸಲಾಗಿರುವ ‘ಹಾರ್ನ್ಬಿಲ್ ಪಕ್ಷಿ ಹಬ್ಬ’ವು ಪ್ರಕೃತಿ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಲಿದೆ. ದಕ್ಷಿಣ ಭಾರತದ ಪ್ರಮುಖ ಆಕರ್ಷಣೆಯಾಗಿರುವ ಈ ಹಾರ್ನ್ಬಿಲ್ ಹಬ್ಬಕ್ಕೆ ವಿವಿಧ ರಾಜ್ಯಗಳ ಪಕ್ಷಿ ವೀಕ್ಷಕರು, ಸಂಶೋಧಕರು ಹಾಗೂ ಛಾಯಾಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ ಎಂದು ಕಾರ್ಯಕ್ರಮದ ಕುರಿತು ಭಾವಜಿ ಅವರು ಮಾಹಿತಿ ನೀಡಿದರು.
ಸ್ಥಳೀಯ ಯುವ ಸಮುದಾಯಕ್ಕೆ ಹಾಗೂ ಪ್ರಕೃತಿ ಬಗ್ಗೆ ಆಸಕ್ತಿಯುಳ್ಳವರಿಗೆ ಇದೊಂದು ಅತ್ಯುತ್ತಮ ಶೈಕ್ಷಣಿಕ ವೇದಿಕೆಯಾಗಲಿದೆ ಎಂದು ರಾಹುಲ್ ಭಾವಾಜಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಆಯ್ದ ಹತ್ಯೆಗಳ ಬಗ್ಗೆ ಮಾತ್ರ ಆಕ್ರೋಶವೇಕೆ? ಉಪೇಂದ್ರ ಪೈ–ಅನಂತಮೂರ್ತಿ ಹೆಗಡೆಗೆ ಅರ್ಜುನ್ ಮಿಂಟಿ ನೇರ ಪ್ರಶ್ನೆ
ಪಕ್ಷಿ ವೀಕ್ಷಣೆ ಎಂಬುದು ಕೇವಲ ಕಾಲಹರಣದ ಹವ್ಯಾಸವಲ್ಲ, ಅದೊಂದು ರೋಮಾಂಚಕಾರಿ ವೈಜ್ಞಾನಿಕ ಅಧ್ಯಯನ” ಎನ್ನುತ್ತಾರೆ ಭಾವಾಜಿ. ಕಾಡಿನ ಮೌನದಲ್ಲಿ ಪಕ್ಷಿಗಳ ಕಲರವ ಆಲಿಸುವುದು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ.
ಪಕ್ಷಿಗಳ ಆಹಾರ ಪದ್ಧತಿ, ಗೂಡು ಕಟ್ಟುವ ಕಲೆ, ಅವುಗಳ ಸಂತಾನೋತ್ಪತ್ತಿ ಕ್ರಿಯೆ ಹಾಗೂ ಬೇಟೆಯಾಡುವ ಕೌಶಲ್ಯಗಳನ್ನು ಹತ್ತಿರದಿಂದ ಗಮನಿಸುವುದು ಒಂದು ಅಪರೂಪದ ಅನುಭವ. ಇಂತಹ ಸೂಕ್ಷ್ಮ ವಿಷಯಗಳನ್ನು ದಾಖಲಿಸಿಕೊಳ್ಳುವುದು ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಗಲಿದೆ.
ಪ್ರಕೃತಿಯ ಅತಿಥಿಗಳಾದ ಪಕ್ಷಿಗಳನ್ನು ಪ್ರೀತಿಸೋಣ ಮತ್ತು ಅವುಗಳ ಸಂರಕ್ಷಣೆಗೆ ಕೈಜೋಡಿಸೋಣ ಎಂಬ ಆಶಯದೊಂದಿಗೆ ದಾಂಡೇಲಿಯ ಈ ಪಕ್ಷಿ ಹಬ್ಬಕ್ಕೆ ಅರಣ್ಯ ಇಲಾಖೆ ಮತ್ತು ಪಕ್ಷಿ ಪ್ರೇಮಿಗಳು ಸ್ವಾಗತ ಕೋರುತ್ತಿದ್ದಾರೆ.





