ದಾಂಡೇಲಿ: “ನಾವು ಹಣ ಕೇಳುವುದಿಲ್ಲ, ಅವರೇ ಕೊಟ್ಟರೆ ತೆಗೆದುಕೊಳ್ಳುತ್ತೇವೆ” ಎಂಬ ವೈದ್ಯರ ಉಡಾಫೆ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು, ಬಡ ರೋಗಿಗಳಿಂದ ಹಣ ವಸೂಲಿ ಮಾಡುವ ವೈದ್ಯರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ ಘಟನೆ ನಗರದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ದಾಂಡೇಲಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಬಡ ಕುಟುಂಬಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆರೋಗ್ಯ ಆಸ್ಪತ್ರೆಯ ‘ಆರೋಗ್ಯ ರಕ್ಷಾ ಸಮಿತಿ’ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಆಸ್ಪತ್ರೆಯ ಸೌಲಭ್ಯಗಳು, ರೋಗಿಗಳ ಸೇವೆ ಮತ್ತು ಔಷಧಿ ಲಭ್ಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಬಡ ರೋಗಿಗಳಿಂದ ಹಣ ಪಡೆಯುತ್ತಿರುವ ಭ್ರಷ್ಟಾಚಾರದ ವಿಷಯ ಪ್ರಸ್ತಾಪವಾಯಿತು.
ಈ ಸುದ್ದಿ ಓದಿದ್ದೀರಾ? ಕಾರವಾರ | ನೌಕಾಬಲಕ್ಕೆ ಆನೆಬಲ: ಕಲ್ವರಿ ಸಬ್ಮೆರಿನ್ ನಿರ್ವಹಣಾ ಕೇಂದ್ರ ಲೋಕಾರ್ಪಣೆ
ಆಸ್ಪತ್ರೆಯ ವೈದ್ಯರಾದ ಡಾ. ಅಖಿಲ ಕಿತ್ತೂರ ಮತ್ತು ಡಾ. ಕೀರ್ತಿ ಎಂಬುವವರು ಹೆರಿಗೆ ಮತ್ತು ಸಿಜೇರಿಯನ್ ನಂತರ ರೋಗಿಗಳಿಂದ ಸುಮಾರು 15,000 ದಿಂದ 20,000 ರೂಪಾಯಿ ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಶಾಸಕರು ವೈದ್ಯರನ್ನು ಪ್ರಶ್ನಿಸಿದಾಗ, “ನಾವು ಯಾರಿಂದಲೂ ಕೇಳಿ ಪಡೆಯುವುದಿಲ್ಲ, ಅವರಾಗಿ ಕೊಟ್ಟಿದ್ದನ್ನು ಮಾತ್ರ ಸ್ವೀಕರಿಸುತ್ತೇವೆ” ಎಂದು ವೈದ್ಯರು ವಿಚಿತ್ರವಾಗಿ ಸಮರ್ಥಿಸಿಕೊಂಡರು.ವೈದ್ಯರ ಈ ಸಮರ್ಥನೆಯಿಂದ ಕುಪಿತಗೊಂಡ ದೇಶಪಾಂಡೆ ಅವರು, “ನಾವು ಕೇಳುವುದಿಲ್ಲ, ಕೊಟ್ಟಷ್ಟು ತೆಗೆದುಕೊಳ್ಳುತ್ತೇವೆ ಎಂದರೆ ಏನರ್ಥ?” ಎಂದು ಗುಡುಗಿದರು.
ಮುಂದೆ ಯಾರಿಂದಾದರೂ ಹಣ ಸ್ವೀಕರಿಸಿದರೆ ನೇರವಾಗಿ ಪೊಲೀಸ್ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಶಾಸಕರು, ಇದುವರೆಗೆ ಯಾರಿಂದೆಲ್ಲಾ ಹಣ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದರು.
“ಬಡವರ ಹತ್ತಿರ ಸುಲಿಗೆ ಮಾಡಿದರೆ ಹುಷಾರ್, ನನ್ನ ಮೇಲೆ ಪ್ರಕರಣ ದಾಖಲಾದರೂ ಸರಿ, ಇಂತಹ ಭ್ರಷ್ಟಾಚಾರವನ್ನು ನಾನು ಸಹಿಸುವುದಿಲ್ಲ” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು. ಈ ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.





