ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖ್ಯಾತ ವಕೀಲ ಹಾಗೂ ಜನಪರ ಹೋರಾಟಗಾರ ಅಜಿತ್ ನಾಯ್ಕ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ತೀರ್ಪಿನ ವಿವರ: ಶಿರಸಿಯ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಯಲ್ಲಾಪುರ ಪೀಠದಿಂದ ಈ ತೀರ್ಪು ಪ್ರಕಟಿಸಿದ್ದಾರೆ. ಪ್ರಮುಖ ಆರೋಪಿ ದೋಷಿ ಎಂದು ಸಾಬೀತಾಗಿದ್ದರೂ, ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಘೋಷಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಆದರೆ, ಪ್ರಕರಣದಲ್ಲಿದ್ದ ಇತರ ನಾಲ್ವರು ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಅಜಿತ್ ನಾಯ್ಕ ಅವರು ಕೇವಲ ವಕೀಲರಷ್ಟೇ ಆಗಿರಲಿಲ್ಲ, ದಾಂಡೇಲಿ ತಾಲೂಕು ರಚನೆ ಹಾಗೂ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗಾಗಿ ‘ದಾಂಡೇಲಿ ಬಚಾವೋ ಆಂದೋಲನ’ ನಡೆಸಿ 45 ದಿನಗಳ ಕಾಲ ಸತ್ಯಾಗ್ರಹ ಕೂತಿದ್ದ ದಿಟ್ಟ ಹೋರಾಟಗಾರರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಪ.ಜಾತಿ–ಪಂಗಡದವರಿಗೆ ಮೊದಲ ಆದ್ಯತೆ: ಎಡಿಸಿ ಸಾಜಿದ್ ಮುಲ್ಲಾ
2018ರಲ್ಲಿ ಅವರು ತಮ್ಮ ಕಚೇರಿಯ ಮುಂಭಾಗದಲ್ಲಿದ್ದಾಗಲೇ ಭೂ ಮಾಫಿಯಾದ ಸಂಚಿನಿಂದಾಗಿ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಜಮೀನು ವಿವಾದವೊಂದರಲ್ಲಿ ಮಾಲೀಕರ ಪರವಾಗಿ ಅಜಿತ್ ನಾಯ್ಕ ಅವರು ಗಟ್ಟಿಯಾಗಿ ನಿಂತಿದ್ದೇ ಅವರ ಹತ್ಯೆಗೆ ಕಾರಣವಾಗಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಅವರು ಅಜಿತ್ ನಾಯ್ಕ ಅವರ ಪರವಾಗಿ ಪ್ರಬಲವಾಗಿ ವಾದ ಮಂಡಿಸಿದ್ದರು. ಅಂದಿನ ಸಿಪಿಐ ಅನೀಸ್ ಮುಜಾವರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರೆ, ಪಿ.ಸಿ. ಮಂಜುನಾಥ ಎಚ್. ಶೆಟ್ಟಿ ಅವರು ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ವಕೀಲ ವೃಂದದ ಹಿರಿಯ ಸದಸ್ಯರೊಬ್ಬರ ಹತ್ಯೆ ಪ್ರಕರಣದಲ್ಲಿ ಕೊನೆಗೂ ನ್ಯಾಯ ಸಿಕ್ಕಿರುವುದು ದಾಂಡೇಲಿಯ ಜನತೆ ಹಾಗೂ ನ್ಯಾಯವಾದಿಗಳಲ್ಲಿ ಸಮಾಧಾನ ತಂದಿದೆ. ಜೈಲಿನಲ್ಲಿದ್ದ ಅವಧಿಯಲ್ಲೂ ಆರೋಪಿಗಳು ವಿವಾದಿತ ಜಮೀನು ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದ್ದು, ಪಿ.ಟಿ.ಸಿ.ಎಲ್ ಕಾಯ್ದೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.





