ದಾಂಡೇಲಿ: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸಲು ಉದ್ದೇಶಿಸಿರುವ ಹೈಟೆಕ್ ‘ವಂದೇ ಭಾರತ್’ ರೈಲನ್ನು ಕಾರವಾರದವರೆಗೂ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.
ಶನಿವಾರ ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದಾಂಡೇಲಿಯಿಂದ ಅಳ್ನಾವರದವರೆಗೆ ಸಂಚರಿಸುವ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯದ ರೈಲ್ವೆ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗವನ್ನು 17,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಶೀಘ್ರದಲ್ಲೇ ಅಗತ್ಯ ಅನುಮತಿಗಳು ದೊರೆಯಲಿವೆ. ಸದ್ಯಕ್ಕೆ ಚಾಲನೆ ನೀಡಿರುವ ಅಳ್ನಾವರ-ದಾಂಡೇಲಿ ರೈಲನ್ನು ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯವರೆಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ 52,952 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಸುಮಾರು 3,840 ಕಿ.ಮೀ ಉದ್ದದ ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು, 707 ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, 61 ರೈಲ್ವೆ ನಿಲ್ದಾಣಗಳ ನವೀಕರಣ ಮತ್ತು ಉನ್ನತೀಕರಣ ಪ್ರಕ್ರಿಯೆ ನಡೆಯುತ್ತಿದೆ.
ಈ ಹಿಂದೆ ಸಂಚರಿಸುತ್ತಿದ್ದು, ಈಗ ಸ್ಥಗಿತಗೊಂಡಿರುವ ರೈಲುಗಳನ್ನು ಆದ್ಯತೆಯ ಮೇರೆಗೆ ಪುನಾರಂಭಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಆರ್. ವಿ. ದೇಶಪಾಂಡೆ ಅವರು ಮಾತನಾಡಿ, “ಹಿಂದಿನ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ಶ್ರಮದಿಂದ ಈ ರೈಲು ಮಾರ್ಗ ಆರಂಭಗೊಂಡಿದೆ. ಇದನ್ನು ನಿರಂತರವಾಗಿ ನಡೆಸಲು ಹುಬ್ಬಳ್ಳಿ ಅಥವಾ ಬೆಳಗಾವಿಗೆ ಸಂಪರ್ಕ ಕಲ್ಪಿಸಬೇಕು ಮತ್ತು ಭಾನುವಾರವೂ ರೈಲು ಚಲಿಸುವಂತಾಗಬೇಕು,” ಎಂದು ಮನವಿ ಮಾಡಿದರು.
ಇದೇ ವೇಳೆ ಸ್ಥಗಿತಗೊಂಡಿರುವ ಹುಬ್ಬಳ್ಳಿ-ಪಂಡರಾಪುರ ನೇರ ರೈಲು ಹಾಗೂ ಮಿರಜ್-ಕ್ಯಾಸಲ್ ರಾಕ್ ಪ್ರಯಾಣಿಕ ರೈಲು ಸೇವೆಯನ್ನು ಕೂಡಲೇ ಪುನಾರಂಭಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಸರಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತೆಯ ಆತ್ಮಹತ್ಯೆ ಯತ್ನ; ಆಸ್ಪತ್ರೆಗೆ ದಾಖಲು
ಇದೇ ಸಂದರ್ಭದಲ್ಲಿ ಅವರು ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸಿವೆ ಎಂದು ಶ್ಲಾಘಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ತಾಳಗುಪ್ಪ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ಪ್ರಸ್ತುತ ಡಿಪಿಆರ್ ಹಂತದಲ್ಲಿದೆ ಎಂದರು. ದಾಂಡೇಲಿ ರೈಲ್ವೆ ನಿಲ್ದಾಣಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಮಾರಂಭದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆ, ರೂಪಾಲಿ ನಾಯ್ಕ, ಮತ್ತು ಘೋಟ್ನೆಕರ್ ಅವರು ಭಾಗವಹಿಸಿದ್ದರು. ಇವರೊಂದಿಗೆ ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಬೇಲಾಮೀನಾ, ಕೊಂಕಣ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಆಶಾ ಶೆಟ್ಟಿ, ಮುಖ್ಯ ವಾಣಿಜ್ಯ ಮ್ಯಾನೇಜರ್ ಎಸ್. ಪಿ. ಶಾಸ್ತ್ರಿ, ತಹಸೀಲ್ದಾರ್ ಶೈಲೇಶ್ ಪರಮಾನಂದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





