ದಾಂಡೇಲಿ: ನಗರಸಭೆಯ ವ್ಯಾಪ್ತಿಯ ವಾಣಿಜ್ಯ ಸೈಟ್ ಅಕ್ರಮ ಹಂಚಿಕೆ ಪ್ರಕರಣ ಹೊಸ ತಿರುವು ಪಡೆದಿದೆ. ಆಶ್ರಯ ಮನೆ ಯೋಜನೆಯ ಅಡಿಯಲ್ಲಿ ವಾಣಿಜ್ಯ ಸೈಟೊಂದು ಅಕ್ರಮವಾಗಿ ಹಂಚಿಕೆಯಾಗಿದೆ ಎಂಬ ದೂರಿನ ಆಧಾರದ ಮೇಲೆ ಲೋಕಾಯುಕ್ತರು ದಾಂಡೇಲಿ ನಗರಸಭೆಯ ಪೌರಾಯುಕ್ತರು ಹಾಗೂ ಇಬ್ಬರು ನೌಕರರಿಗೆ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, 2019ರಲ್ಲಿ ನಗರಸಭೆಯ ವ್ಯಾಪ್ತಿಯ ಸರ್ವೇ ನಂ. 3122ರ ಸೈಟನ್ನು ಆಶ್ರಯ ಪ್ಲಾಟ್ ಎಂದು ತೋರಿಸಿ, ಜೋಯಿಡಾ ತಾಲ್ಲೂಕಿನ ಕೊಂಡಪಾ ಗ್ರಾಮದ ನಿವಾಸಿ ವೆಂಕಟೇಶ್ ಸುಬ್ಬಯ್ಯ ಎಂಬುವವರಿಗೆ ಹಂಚಲಾಗಿತ್ತು, ಆದರೆ ಕೆಲವೇ ದಿನಗಳಲ್ಲಿ ಆ ಸೈಟನ್ನು ಜಲಜಾಕ್ಷಿ ಬೊಮ್ಮಯ್ಯ ನಾಯಕ ಎಂಬುವವರ ಹೆಸರಿಗೆ ಪರಭಾರೆ ಮಾಡಲಾಗಿದೆ. ಸೈಟ್ ಸಿಕ್ಕ ಕೇವಲ ನಾಲ್ಕು ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಬೇರೆ ಅವರ ಹೆಸರಿಗೆ ನೊಂದಣಿ ಆಗಿರುವುದರಿಂದ ಈ ಪ್ರಕರಣದ ಸುತ್ತ ಅನುಮಾನ ವ್ಯಕ್ತವಾಗಿದೆ.
ಈ ಘಟನೆ ದಾಂಡೇಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ ಅವರ ಗಮನಕ್ಕೆ ಬಂದು, ಅವರು ಕಾರವಾರ ಲೋಕಾಯುಕ್ತ ಎಸ್ಪಿಗೆ ಲಿಖಿತ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ಬೆಂಗಳೂರು ಉಪ ಲೋಕಾಯುಕ್ತರು ತನಿಖೆ ಪ್ರಾರಂಭಿಸಿ, ನಗರಸಭೆಯ ಪೌರಾಯುಕ್ತರು, ಇಬ್ಬರು ಎಸ್ಡಿಎಗಳು ಮತ್ತು ಹಳಿಯಾಳ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ದೂರುದಾರರ ಪ್ರಕಾರ, 50 ಲಕ್ಷ ಮೌಲ್ಯದ ಸೈಟ್ನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಹಂಚಿ, ನಗರಸಭೆಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ. ಹಾಗೂ ಆಶ್ರಯ ಯೋಜನೆಯಡಿ ಸಿಕ್ಕ ಪ್ಲಾಟ್ ಅನ್ನು ಹದಿನೈದು ವರ್ಷಗಳವರೆಗೂ ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ. ಕೇವಲ ನಾಲ್ಕು ದಿನಗಳಲ್ಲೇ ಸೈಟ್ ಹಂಚಿಕೆಯಾಗಿ ನಂತರ ಖರೀದಿಯಾಗಿದ್ದು ಗಮನಿಸಿದರೆ ಅಕ್ರಮದ ಶಂಕೆ ಹೆಚ್ಚಿಸಿದೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ಪುರಸಭೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ! ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆ.
ಈ ಹಿನ್ನೆಲೆಯಲ್ಲಿ ಸೈಟ್ ಮಂಜೂರಾದ ವ್ಯಕ್ತಿ ವೆಂಕಟೇಶ ಸುಬ್ಬಯ್ಯ ತಾನು ಆಶ್ರಯ ಸೈಟ್ ಗೆ ಅರ್ಜಿ ಸಹ ಹಾಕಿಲ್ಲ. ತನಗೆ ಸೈಟ್ ಮಂಜೂರಾದ ಸಂಗತಿ ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ನನ್ನನ್ನು ವಂಚಿಸಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನನ್ನ ಸಹಿ ಪಡೆಯಲಾಗಿದೆ . ಸೈಟ್ ಪಡೆದವರು ನನಗೆ ಮೋಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ, ಲೋಕಾಯುಕ್ತರಿಗೆ ಅಫಿಡೆವಿಟ್ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಮಹತ್ವ ಪಡೆಯಲು ಮತ್ತೊಂದು ಕಾರಣವೆಂದರೆ, ಸೈಟ್ ಖರೀದಿಸಿದ ಜಲಾಜಾಕ್ಷಿ ನಾಯಕ ,ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬೊಮ್ಮಯ್ಯ ನಾಯಕ ವಾಸರೆ ಅವರ ಪತ್ನಿಯಾಗಿದ್ದು, ಪ್ರಕರಣ ಮಹತ್ವ ಪಡೆಯಲು ಕಾರಣವಾಗಿದೆ. ಲೋಕಾಯುಕ್ತರು ದಾಂಡೇಲಿ ನಗರಸಭೆಯ ಹಾಲಿ ಪೌರಾಯುಕ್ತರು, ಎಸ್ ಡಿಎ ಗಳಾದ ಬಿ.ಎಫ್.ಗವಾಸ್ , ಹನುಮಂತ ಉಪ್ಪಾರ ಅವರಿಂದ ಸೈಟ್ ನ ದಾಖಲೆಗಳು ಹಾಗೂ ಆಕ್ಷೇಪಣೆಯನ್ನು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿ. ಹಾಗೂ ಹಳಿಯಾಳ ಸಬ್ ರಿಜಿಸ್ಟ್ರಾರ್ ಅವರಿಂದ ಮಾಹಿತಿ ಕೇಳಿದ್ದು, ಈ ಪ್ರಕರಣದ ಬಗ್ಗೆ ಆದ ವಹಿವಾಟು, ದಾಖಲೆಗಳು ಹಾಗೂ ವಾಸ್ತವ ವರದಿಯನ್ನು ಈಗಾಗಲೇ ಅವರು ಲೋಕಾಯುಕ್ತರ ಕಚೇರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.





