ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಆಯೋಜನೆಗೊಂಡಿರುವ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಇದೀಗ ನ್ಯಾಯಾಲಯದ ಕಟಕಟೆಯನ್ನು ಏರಿದ್ದು, ಪ್ರಚಾರ ಸಾಮಗ್ರಿಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಸಮ್ಮೇಳನದ ಆಯೋಜನೆಗೆ ಸಂಬಂಧಿಸಿದ ಅನುಮತಿ ಮತ್ತು ದೇಣಿಗೆ ಸಂಗ್ರಹದಲ್ಲಿನ ಅಕ್ರಮಗಳ ಬಗ್ಗೆ ಸದಸ್ಯರು ಸಲ್ಲಿಸಿದ ದೂರಿನನ್ವಯ ಈ ಬೆಳವಣಿಗೆ ನಡೆದಿದೆ.
ಸಮ್ಮೇಳನದ ಆಯೋಜಕರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಜೀವ ಸದಸ್ಯರಾದ ಅಕ್ರಮ್ ಖಾನ್, ಸಂದೀಪ್ ಭಂಡಾರಿ ಹಾಗೂ ಪ್ರವೀಣ್ ಕೊಠಾರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಕಸಾಪ ಘಟಕವು ರಾಜ್ಯ ಅಧ್ಯಕ್ಷರ ಅನುಮತಿಯನ್ನು ಪಡೆಯದೆ ಕಾರ್ಯಕ್ರಮದ ಪ್ರಚಾರದಲ್ಲಿ ತೊಡಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವಂತೆ ಫ್ಲೆಕ್ಸ್, ಬ್ಯಾನರ್ ಮತ್ತು ಕಟೌಟ್ಗಳನ್ನು ಅಳವಡಿಸಲಾಗಿದೆ. ಜೊತೆಗೆ, ಕಸಾಪ ನಿಯಮಗಳನ್ನು ಉಲ್ಲಂಘಿಸಿ ದೇಣಿಗೆ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ದೂರನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರಕರಣವು ಗುರುವಾರ ವಿಚಾರಣೆಗೆ ಬಂದಾಗ, ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ಅವರಿಗೆ ಯಾವುದೇ ಸಮನ್ಸ್ ಜಾರಿಯಾಗದಿದ್ದರೂ, ಅವರು ತಮ್ಮ ವಕೀಲರೊಂದಿಗೆ ನ್ಯಾಯಾಲಯದಲ್ಲಿ ಹಾಜರಾಗಿದ್ದು ವಿಶೇಷ ಘಟನೆಗೆ ಕಾರಣವಾಯಿತು. ಇದನ್ನು ಗಮನಿಸಿದ ನ್ಯಾಯಾಧೀಶರು, “ನೋಟಿಸ್ ಜಾರಿಗೂ ಮುನ್ನವೇ ನೀವು ಯಾಕೆ ಹಾಜರಾಗಿದ್ದೀರಿ?” ಎಂದು ಪ್ರಶ್ನಿಸಿದರು. ನಂತರ ಬೊಮ್ಮಯ್ಯ ನಾಯಕರ ಪರ ವಕೀಲರು ಮನವಿ ಮಂಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಣಕು ಕಾರ್ಯಾಚರಣೆ ಯಶಸ್ವಿ: ಜಿಲ್ಲಾಡಳಿತದಿಂದ ತುರ್ತು ಕ್ರಮಗಳ ಪ್ರದರ್ಶನ
ಅಜೀವ ಸದಸ್ಯರ ಪರ ವಾದ ಮಂಡಿಸಿದ ವಕೀಲ ರಾಘವೇಂದ್ರ ಗಡೆಪ್ಪನವರ ಅವರು, ಕಸಾಪದ ನಿಯಮಾವಳಿ (ಬೈಲಾ) ಪ್ರಕಾರ ಯಾವುದೇ ಸಮ್ಮೇಳನ ನಡೆಸಲು ರಾಜ್ಯ ಘಟಕದ ಅಧ್ಯಕ್ಷರು ಅಥವಾ ಆಡಳಿತಾಧಿಕಾರಿಯ ಸ್ಪಷ್ಟ ಅನುಮತಿ ಕಡ್ಡಾಯ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ತಕ್ಷಣವೇ ಆದೇಶ ಹೊರಡಿಸಿತು. ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ ಅವರಿಗೆ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಅಳವಡಿಸಲಾದ ಎಲ್ಲಾ ಫ್ಲೆಕ್ಸ್, ಬ್ಯಾನರ್ ಮತ್ತು ಕಟೌಟ್ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಆದೇಶ ನೀಡಿದೆ. ಆದೇಶ ಪಾಲಿಸದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಎಚ್ಚರಿಕೆಯನ್ನೂ ನೀಡಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ (ಇಂದು) ಮುಂದೂಡಲಾಗಿದೆ. ಇದರಿಂದಾಗಿ ಬಹುನಿರೀಕ್ಷಿತ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಿಗದಿತ ಸಮಯದಲ್ಲಿ ನಡೆಯುತ್ತದೆಯೇ ಅಥವಾ ರದ್ದಾಗಲಿದೆಯೇ ಎಂಬ ಆತಂಕ ಕನ್ನಡ ಸಾಹಿತ್ಯ ಪರಿಷತ್ ವಲಯದಲ್ಲಿ ಮನೆ ಮಾಡಿದೆ. ಜಿಲ್ಲಾ ಮಟ್ಟದ ಸಾಹಿತ್ಯಾಸಕ್ತರು ಹಾಗೂ ಸ್ಥಳೀಯ ಜನತೆ ಈ ಬೆಳವಣಿಗೆಯನ್ನು ತೀವ್ರ ಕುತೂಹಲದಿಂದ ಗಮನಿಸುತ್ತಿದ್ದಾರೆ.





