ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಕೆಎಸ್ಎಫ್ಐಸಿ (KSFIC) ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ 172 ಮನೆಗಳಲ್ಲಿ ವಾಸಿಸುತ್ತಿರುವ ನಿವೃತ್ತ ಹಾಗೂ ಹಾಲಿ ಕಾರ್ಮಿಕರ ಕುಟುಂಬಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು
ಮತ್ತು ಅವರಿಗೆ ಖಾಯಂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಜಿಲ್ಲಾ ಸಮಿತಿಯು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ. ದೇಶಪಾಂಡೆ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ದಾಂಡೇಲಿ ನಗರಸಭೆ ವ್ಯಾಪ್ತಿಗೆ ಸೇರಿದ ಸುಮಾರು 1850 ಎಕರೆ ಜಮೀನು 1958 ರಿಂದ 1977ರ ಅವಧಿಯಲ್ಲಿ ಅರಣ್ಯ ಇಲಾಖೆಯಿಂದ ನಗರಸಭೆಗೆ ಹಸ್ತಾಂತರವಾಗಿದೆ. ಆದರೆ, ಇದರಲ್ಲಿ ಇಂದಿಗೂ 50 ಎಕರೆ ಜಮೀನು ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಉಳಿದುಕೊಂಡಿದೆ.
ಈ ಜಮೀನನ್ನು ತಕ್ಷಣವೇ ನಗರಸಭೆಗೆ ಹಸ್ತಾಂತರಿಸಿದರೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ. ಆದ್ದರಿಂದ ಶಾಸಕರು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಅರಣ್ಯ ಇಲಾಖೆಯಿಂದ ಜಮೀನು ಬಿಡುಗಡೆಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಈ ಹಿಂದೆ ಕಟ್ಟಿಗೆ ಉದ್ದಿಮೆಯಾಗಿದ್ದ ಕೆಎಸ್ಎಫ್ಐಸಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಅರಣ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ 172 ಮನೆಗಳನ್ನು ನಿರ್ಮಿಸಿ ಬಾಡಿಗೆ ಆಧಾರದ ಮೇಲೆ ನೀಡಲಾಗಿತ್ತು. 1972ರ ನಂತರ ಈ ಪ್ರದೇಶವು ಸಂಪೂರ್ಣವಾಗಿ ನಗರಸಭೆಯ ಸುಪರ್ದಿಗೆ ಬಂದಿರುವುದರಿಂದ, ಈ ಮನೆಗಳ ಉಸ್ತುವಾರಿಯೂ ನಗರಸಭೆಯದ್ದೇ ಆಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಉಪನೋಂದಣಿ ಕಚೇರಿಯಲ್ಲಿ ಕಿತ್ತಾಟ: ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿ ನಿಂದಿಸಿದ ಹಿರಿಯ ಅಧಿಕಾರಿ!
ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಹಾಗೂ ಕೆಎಸ್ಎಫ್ಐಸಿ ಅಧಿಕಾರಿಗಳು ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ಮೌಖಿಕವಾಗಿ ಸೂಚಿಸುತ್ತಿರುವುದು ಮತ್ತು ಬಾಡಿಗೆ ಸ್ವೀಕರಿಸಲು ನಿರಾಕರಿಸುತ್ತಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಈ ಕುಟುಂಬಗಳನ್ನು ತೆರವುಗೊಳಿಸಿದರೆ ಅವರು ಬೀದಿಪಾಲಾಗುವ ಭೀತಿ ಎದುರಾಗಿದೆ.
ಕಾರ್ಮಿಕರ ಹಿತರಕ್ಷಣೆ ಮಾಡುವುದು ನಗರಸಭೆಯ ಆದ್ಯ ಕರ್ತವ್ಯವಾಗಿದ್ದು, ಅವರಿಗೆ ಈಗಿರುವ ಮನೆಗಳನ್ನೇ ಖಾಯಂ ವಸತಿಯನ್ನಾಗಿ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ. ಸ್ಯಾಮ್ಸನ್ ಅವರು ಪತ್ರದ ಮೂಲಕ ಆರ್ ವಿ ದೇಶಪಾಂಡೆ ಅವರಿಗೆ ಮತ್ತು ದಾಂಡೇಲಿ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.





