ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯಡಿ ಕರ್ನಾಟಕ ರಾಜ್ಯ ಗೃಹ ಮಂಡಳಿ ಕಳೆದ ಎಂಟು ವರ್ಷಗಳಿಂದ ದಾಂಡೇಲಿಯ ಅಂಬೇವಾಡಿಯಲ್ಲಿ ಒಟ್ಟು 1106 ಜಿ+2 ಮನೆಗಳ ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಕೆಲಸವನ್ನು 12 ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಇಂದಿನವರೆಗೆ ಕೇವಲ 100 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇನ್ನು 84 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದರೂ ವಿತರಣೆಯಾಗದೆ ಉಳಿದಿವೆ. ಉಳಿದ 914 ಮನೆಗಳ ನಿರ್ಮಾಣ ಪ್ರಕ್ರಿಯೆ ನಿಧಾನಗೊಂಡಿದ್ದು, ಕೆಲಸ ತ್ವರಿತಗೊಳಿಸಲು ಹಾಗೂ ಮನೆಗಳನ್ನು ಶೀಘ್ರ ವಿತರಿಸಲು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ನೇತೃತ್ವದಲ್ಲಿ ಫಲಾನುಭವಿಗಳು ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ–ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಗೃಹ ಮಂಡಳಿ ಮನೆ ನೀಡುವ ಭರವಸೆಯೊಂದಿಗೆ ಫಲಾನುಭವಿಗಳಿಂದ ₹50,000 ರಿಂದ ₹70,000ರವರೆಗೆ ಮೊತ್ತವನ್ನು ಸಂಗ್ರಹಿಸಿತ್ತು. ಆದರೆ ಎಂಟು ವರ್ಷಗಳಾದರೂ ಮನೆ ಹಸ್ತಾಂತರವಾಗಿಲ್ಲ. ಒಟ್ಟು ₹53 ಕೋಟಿ ವೆಚ್ಚದ ಯೋಜನೆಯ ಪೈಕಿ ಸುಮಾರು ₹38 ಕೋಟಿ ಹಣ ಗುತ್ತಿಗೆದಾರರಿಗೆ ಪಾವತಿಯಾಗಿರುವುದಾಗಿ ತಿಳಿದುಬಂದಿದೆ. ಯೋಜನೆಯ ಬಾಕಿ ಕಾಮಗಾರಿಗೆ ಇದೀಗ ಹಣದ ಕೊರತೆ ಉಂಟಾಗಿದ್ದು, ಗುತ್ತಿಗೆದಾರರು ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮುರುಡೇಶ್ವರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ಸ್ಥಾಪನೆ: ಸಚಿವ ಮಂಕಾಳ ವೈದ್ಯ ಹೇಳಿಕೆ
ಫಲಾನುಭವಿಗಳು ಸಾಲ ಪಡೆದು ಮನೆಗಾಗಿ ಹಣ ಪಾವತಿಸಿದರೂ ಮನೆ ಸಿಗದೆ ವಂಚನೆಗೊಳಗಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಶಾಸಕರು, ನಗರಸಭೆ ಹಾಗೂ ಗೃಹ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.





