ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಸೇರಿ ಎಲ್ಲಾ ಆರೋಪಿಗಳ ವಿರುದ್ಧ ಬೆಂಗಳೂರು ಕೋರ್ಟ್ನ ನ್ಯಾಯಾಧೀಶರಾದ ಐ ಪಿ ನಾಯ್ಕ್ ಅವರು ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸಿದ್ದು ಎಲ್ಲ ಆರೋಪವನ್ನು ದರ್ಶನ್ ನಿರಾಕರಿಸಿದ್ದಾರೆ. ಆದ್ದರಿಂದ ನವೆಂಬರ್ 10ಕ್ಕೆ ಸಾಕ್ಷಿದಾರರ ವಿಚಾರಣೆ ನಡೆಯಲಿದೆ.
ಎಲ್ಲಾ ಆರೋಪಿಗಳು ಖುದ್ದು ಹಾಜರಾಗಬೇಕು ಎಂದು ಬೆಂಗಳೂರಿನ 64 ಸಿಸಿಹೆಚ್ ಕೋರ್ಟ್ಗೆ ಹೇಳಿದ್ದ ಕಾರಣ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 6 ಆರೋಪಿಗಳನ್ನು ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದರು. ಜತೆಗೆ ಜಾಮೀನಿನ ಮೇಲೆ ಹೊರಗಿದ್ದ 11 ಮಂದಿ ನೇರವಾಗಿ ಕೋರ್ಟ್ನಲ್ಲಿ ಹಾಜರಾಗಿದ್ದರು.
ಇದನ್ನು ಓದಿದ್ದೀರಾ? ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ದರ್ಶನ್ ಮೇಲೆ ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ, ಕ್ರಿಮಿನಲ್ ಒಳಸಂಚು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಈ ಬಗ್ಗೆ ದೋಷಾರೋಪಗಳನ್ನು ನ್ಯಾಯಾಧೀಶರು ಓದಿ ಹೇಳಿದ್ದಾರೆ. ಆದರೆ ದರ್ಶನ್ ಆರೋಪವನ್ನು ನಿರಾಕರಿಸಿದ್ದು ಕೋರ್ಟ್ ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.
ಇನ್ನು ಕೋರ್ಟ್ನಲ್ಲಿ ಜನದಟ್ಟಣೆ ಸೇರಿತ್ತು ಎಂದು ಹೇಳಲಾಗಿದೆ. ಒಂದು ವೇಳೆ ದರ್ಶನ್ ಆರೋಪವನ್ನು ಒಪ್ಪಿಕೊಂಡಿದ್ದರೆ ಕೋರ್ಟ್ ಶಿಕ್ಷೆ ಪ್ರಕಟಕ್ಕೆ ದಿನ ನಿಗದಿ ಮಾಡುವ ಸಾಧ್ಯತೆಯಿತ್ತು.





