ಬಿಜೆಪಿಯ ಸಿದ್ದೇಶ್ವರ್ ಕುಟುಂಬವನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮತದಾರರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.
ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಬ್ಲಾಕ್ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದಾಗ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದರು. ಆದರೆ ಇದೀಗ ಒಂದು ಎಂಜಿನ್ ಕಳಚಿಹೋಗಿದೆ. ಈಗಾಗಲೇ ಸಚಿವ ಮಲ್ಲಿಕಾರ್ಜುನ, ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರ ಎರಡು ಎಂಜಿನ್ಗಳಿವೆ. ನಾನು ಸಂಸದೆಯಾದರೆ ತ್ರಿಬಲ್ ಎಂಜಿನ್ ಸರ್ಕಾರವಾಗಲಿದೆ. ಹೀಗಾದರೆ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ” ಎಂದರು.
“ಜಗಳೂರು ತಾಲೂಕು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ನೀರಾವರಿ ಕಲ್ಪಿಸುವ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿಯನ್ನು ಪರಿಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಮಾತನಾಡಿ, “ಜಿಲ್ಲೆಯ ಈಶ್ಯಾನ್ಯ ದಿಕ್ಕಿನಿಂದ ಮತ ಪ್ರಚಾರ ಆರಂಭವಾಗಿದೆ. ನಮ್ಮ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ್ ಅವರ ಮುಖದಲ್ಲಿ ವಿಜಯದ ಕಳೆ ಕಾಣುತ್ತಿದೆ. ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿ ಜೂನ್ 4ರಂದು ದಿಲ್ಲಿಗೆ ಕಳುಹಿಸೋಣ. ಉದ್ಯೋಗ ಸೃಷ್ಟಿಸಲು ಗಾರ್ಮೆಂಟ್ಸ್, ಯುವಕರಿಗೆ ಉದ್ಯೋಗಕ್ಕೆ ನವೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಕನಸು ಕಂಡಿದ್ದಾರೆ. ಬಿಜೆಪಿಯವರಿಗೆ ಮೂರು ಬಾರಿ ಅವಕಾಶ ಕೊಟ್ಟಿದ್ದೀರಿ. ವಿದ್ಯಾವಂತರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೂ ಈ ಬಾರಿ ಅವಕಾಶ ಕೊಡಿ. ಅವರು ಈ ಕ್ಷೇತ್ರದ ಋಣ ತೀರಿಸುತ್ತಾರೆ” ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ, ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಡಿ ಕೀರ್ತಿಕುಮಾರ್, ಕೆಪಿಸಿಸಿ ವಕ್ತಾರ ಬಸವರಾಜ್, ಕೊಟ್ರೇಶ್, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕಂಬತ್ತಹಳ್ಳಿ ಮಂಜುನಾಥ್ ಮಾತನಾಡಿದರು.
ಇದೇ ವೇಳೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆದ್ದು ಬರಲಿ ಎಂದು ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದ ಮುಖಂಡರಾದ ವೀರಣ್ಣಗೌಡ ಮತ್ತು ಪುತ್ರ ಅರ್ಜುನ್ ಗೌಡ್ರು 1 ಲಕ್ಷ ರೂ. ದೇಣಿಗೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕುಡಿಯುವ ನೀರಿಗೆ ಹಾಹಾಕಾರ; ಚುನಾವಣಾ ಪ್ರಚಾರದಲ್ಲಿ ಮಗ್ನರಾದ ಜನಪ್ರತಿನಿಧಿಗಳು
ಈ ಸಂದರ್ಭದಲ್ಲಿ ಅರಸೀಕೆರೆ ಕೊಟ್ರೇಶ್, ಯಶವಂತಗೌಡ, ಶಿವನಗೌಡ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಎಸ್ಸಿ ಘಟಕ ಅಧ್ಯಕ್ಷ ಬಿ ಮಹೇಶ್ವರಪ್ಪ, ಗುರುಸಿದ್ದಪ್ಪ, ಸುರೇಶ್ ಗೌಡ್ರು, ತಿಪ್ಪೇಸ್ವಾಮಿಗೌಡ, ರಮೇಶ್ ರೆಡ್ಡಿ, ಯರಬಳ್ಳಿ ಉಮಾಪತಿ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.




