ಹಳೆಯ ಇಪಿಎಸ್-95 ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದ ಇಪಿಎಸ್ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸಿದ ದಬ್ಬಾಳಿಕೆ ಖಂಡಿಸಿ ದಾವಣಗೆರೆ ನಗರದ ಕೆಬಿ ಬಡಾವಣೆಯಲ್ಲಿನ ಕಾರ್ಮಿಕ ಮಂತ್ರಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರ್ಯಕರ್ತರು ಜಿಲ್ಲಾ ಕಚೇರಿ ಬಳಿ ಇಪಿಎಸ್-95 ರಾಷ್ಟ್ರೀಯ ಆಂದೋಲನ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಕೆ ಎಂ ಮರುಳ ಸಿದ್ದಯ್ಯ ಮಾತನಾಡಿ, “ದೇಶದ ಕೈಗಾರಿಕಾ, ಸಾರ್ವಜನಿಕ, ಸಹಕಾರಿ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸಿದ 70 ಲಕ್ಷ ನಿವೃತ್ತ ನೌಕರರು ಅಂದರೆ ಇಪಿಎಸ್-95 ಪಿಂಚಣಿದಾರರು ಅತಿ ಅಲ್ಪ ಮೊತ್ತದ ಪಿಂಚಣಿ ಪಡೆಯುತ್ತಿದ್ದು, ನಮ್ಮ ಬೆವರಿನ ಹನಿಯ ಹಣವನ್ನು ಕೊಡಲು ಭವಿಷ್ಯ ನಿಧಿ ಕಚೇರಿಯ ಅಧಿಕಾರಿಗಳು ನಮಗೆ ಸೇರಬೇಕಾದ ಪಿಂಚಣಿ ನೀಡುತ್ತಿಲ್ಲ” ಎಂದು ಆರೋಪಿಸಿದರು.
“ಪಿಂಚಿಣಿದಾರರು ಅತ್ಯಂತ ಹೀನ ಸ್ಥತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿಯಲ್ಲಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿನ ಪೊಲೀಸರು ಅವರ ಮೇಲೆ ಅಮಾನುಷವಾಗಿ ವರ್ತಿಸಿ, ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿವೃತ್ತ ಸೇನಾಧಿಕಾರಿ, ಹಿರಿಯ ನಾಗರಿಕ ಅಶೋಕ ರಾವುತ್ ಅವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಆ ಮೂಲಕ ಸಂವಿಧಾನದ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ದೆಹಲಿ ಘಟನೆ ಖಂಡಿಸಿ, ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು” ಎಂದು ಆಗ್ರಹಿಸಿದರು.
ಇಪಿಎಸ್ ಪಿಂಚಣಿ ಪಡೆಯುವ ನೌಕರರಿಗೆ ಕನಿಷ್ಠ ₹7,500 ಪಿಂಚಣಿ, ತುಟ್ಟಿಭತ್ಯೆ, ವೈದ್ಯಕೀಯ ಚಿಕಿತ್ಸೆಯ ವೆಚ್ಚ, ಪೂರ್ಣ ಪ್ರಮಾಣದ ಪಿಂಚಣಿ ಜೊತೆ ಇತರೆ ಸವಲತ್ತುಗಳನ್ನು ನೀಡಬೇಕು. ಇಪಿಎಫ್ ಅಧಿಕಾರಿಗಳ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಇಪಿಎಸ್-95 ಪಿಂಚಣಿದಾರರ ಬೇಡಿಕೆಗಳು ಈಡೇರುತ್ತಿಲ್ಲ. ಈ ಕುರಿತು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾರ್ಮಿಕ ಮಂತ್ರಾಲಯ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಅಧಿಕಾರಿಗಳು ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸೌಜನ್ಯ ಪ್ರಕರಣ | ಮರು ತನಿಖೆಗೆ ಆಗ್ರಹಿಸಿ ಆ.20ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಪ್ರತಿಭಟನೆಯಲ್ಲಿ ಎಂ ಬಿ ಸಿದ್ದಲಿಂಗಯ್ಯ, ಪಿ ನಿಜಗುಣ, ಟಿ ಮಂಜುನಾಥ್, ಗಂಗಾಧರ, ಮಲ್ಲಿಕಾರ್ಜುನ ತಂಗಡಗಿ, ಕೆ ವಿರೂಪಾಕ್ಷಪ್ಪ, ದತ್ತಪ್ಪ ಶೆಟ್ಟರ್, ಚಂದ್ರಪ್ಪ, ಸೋಮಶೇಖರ್, ಎಂ ಬಸವರಾಜ್, ಮಹೇಶ್ವರಪ್ಪ, ಪ್ರಭಾಕರ್, ಮಂಜುನಾಥ್ ಸೂಡಂಬಿ ಸೇರಿದಂತೆ ಇತರರು ಇದ್ದರು.




