ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಮುಚ್ಚಿರುವ ಮೂರು ಸರ್ಕಾರಿ ಶಾಲೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಎಸ್ಡಿಎಂಸಿ ಸಮಿತಿಯ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ಅವರು ಶಾಸಕ ಶಾಂತನಗೌಡರಿಗೆ ಮನವಿ ಸಲ್ಲಿಸಿದರು.
ಶಿವಲಿಂಗಪ್ಪ ಮಾತನಾಡಿ, “ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷವೇ ಕಾರಣವಾಗಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕಂಚಿನಾಳ, ಸಾಸಿವೆಹಳ್ಳಿ ಸ್ವಾಮಿ ವಿವೇಕಾನಂದ, ಮಾದಾಪುರ ತಾಂಡ ಸೇರಿದಂತೆ 3 ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ನೆಪದಲ್ಲಿ ಮುಚ್ಚಲು ಮುಂದಾಗುತ್ತಿದ್ದಾರೆ. ಹಾಗಾಗಿ ತಾವು ಈ ಬಗ್ಗೆ ಗಮನ ಹರಿಸಿ, ಶಾಲೆಗಳನ್ನು ಪುನರಾರಂಭಿಸಬೇಕು” ಎಂದು ಒತ್ತಾಯಿಸಿದರು.
“ಆಯಾ ಶಾಲೆಯ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಮಾಡುವ ಅವಶ್ಯಕತೆ ಹೆಚ್ಚಿದೆ. ಈ ಮೂಲಕ ಶಾಲಾ ಪ್ರವೇಶಾತಿ ಮತ್ತು ಹಾಜರಾತಿ ಹೆಚ್ಚಿಸಬೇಕು” ಎಂದರು.
ಶಾಸಕ ಶಾಂತನಗೌಡರು ಮಾತನಾಡಿ, “ಸ್ಥಳೀಯವಾಗಿ ಶಾಲೆ ಇದ್ದರೆ ಪೋಷಕರು, ಮಕ್ಕಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕಿಸಬೇಕು. ಹಾಗಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತರಗತಿವಾರು ಲಭ್ಯವಿರದ ಪಠ್ಯಪುಸ್ತಕ ಒದಗಿಸುವಂತೆ ದಸಂಸ ಆಗ್ರಹ
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಜಿ ಎಸ್ ಪಾರ್ವತಿ, ನ್ಯಾಮತಿ ತಾಲೂಕು ಅಧ್ಯಕ್ಷ ಬಿ ವಿ ರಾಜಶೇಖರ್, ತಾಲೂಕ್ ಕಾರ್ಯದರ್ಶಿ ರಮೇಶ ಕೋಟೆ, ಮಲ್ಲೂರು ಪುಷ್ಪಲತಾ, ರುದ್ರ ನಾಯಕ್, ತಾಲೂಕು ಕಾರ್ಯದರ್ಶಿ ಸತೀಶ್ ಬನ್ನಿಕೊಡು ಇನ್ನಿತರರು ಹಾಜರಿದ್ದರು.





