ಕಳೆದ ವರ್ಷ ಬೆಳೆಗಳಿಗೆ ನೀರುಣಿಸಲು ಹರಸಾಹಸಪಟ್ಟಿದ್ದ ಭದ್ರಾ ಜಲಾಶಯ ರೈತರಿಗೆ ಈ ಬಾರಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಂತ ತಲುಪಿರುವುದು ನಿಟ್ಟುಸಿರು ಬಿಡುವಂತಾಗಿದೆ. ಭದ್ರಾ ಡ್ಯಾಂನಿಂದ ಇಂದಿನಿಂದಲೇ ಎಡ-ಬಲದಂಡೆ ನಾಲೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದ್ದು, ಸಂತಸ ತಂದಿದೆ. ಕಾಡಾ ಕಚೇರಿಯಲ್ಲಿ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
“ಕಳೆದ ಬಾರಿ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದರು. ಈ ಬಾರಿ ಜಿಲ್ಲೆಯ ಎಲ್ಲ ಡ್ಯಾಂಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಕಳೆದ ಬಾರಿ ಕೆಲವೊಂದು ಅಂಚಿನ, ಕೊನೆ ಹಂತದ ಪ್ರದೇಶಗಳಿಗೆ ನೀರು ತಲುಪಿಲ್ಲವೆಂಬ ಆರೋಪದ ಹಿನ್ನಲೆಯಲ್ಲಿ ಇಂದಿನಿಂದಲೇ ನಿರಂತರವಾಗಿ ನೀರು ಬಿಡಲು ಎಲ್ಲಾ ಸದಸ್ಯರು ಸೇರಿ ತೀರ್ಮಾನಿಸಿದ್ದಾರೆ. ರೈತರ ಜೊತೆ ಈಗಾಗಲೇ ಚರ್ಚೆ ಮಾಡಿದ್ದು, ಅನೇಕ ಕಡೆ ಭತ್ತವನ್ನು ನಿಲ್ಲಿಸಿ ಅಡಿಕೆ ಬೆಳೆ ಮಾಡಲಾಗಿದೆ. ಬೇಸಿಗೆಯಲ್ಲಿ ಅಡಿಕೆಗೆ ಹೆಚ್ಚು ನೀರು ಬೇಕಾಗುತ್ತದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಾವರಿ ಎಂಜಿನಿಯರ್ಗಳು ಸೂಕ್ತಕ್ರಮ ಕೈಗೊಳ್ಳಬೇಕು” ಎಂದು ಚರ್ಚೆಯಾಗಿದೆ.
“ಚಾನಲ್ನಿಂದ ಅನಧಿಕೃತ ಪಂಪ್ಸೆಟ್ಗಳ ಮೂಲಕ ನೀರು ಪಡೆಯುತ್ತಿದ್ದು, ಅದನ್ನು ನಿಲ್ಲಿಸಲು ಆ ಜಿಲ್ಲೆಯ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದ್ದೇವೆ. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬೆಳೆಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮಳೆಗೆ ಅನುಗುಣವಾಗಿ ನೀರು ಹರಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಸಲಹ ಸಮಿತಿಯಲ್ಲಿ ತೀರ್ಮಾನಿಸಿದಂತೆ ನೀರು ಬಿಡುವುದಾಗಿ ತೀರ್ಮಾನಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿ ಯೋಜನೆಯ ಹೆಸರಿನಲ್ಲಿ ಹಣ ವಸೂಲಿ: ಪಿಡಿಒ ಶಂಶುದ್ದೀನ್ ವಿರುದ್ಧ ಆರೋಪ
ಈ ಸಭೆಯಲ್ಲಿ ಕಾಡಾ ಅಧ್ಯಕ್ಷ ಡಾ. ಅಂಶುಮಾನ್, ಹರಿಹರ ಶಾಸಕ ಹರೀಶ್, ಹೊನ್ನಾಳಿ ಶಾಸಕ ಶಾಂತನಗೌಡ, ಮಾಯಕೊಂಡ ಶಾಸಕ ಬಸವಂತಪ್ಪ, ಹಾಗೂ ಕಾಡಾದ ಇತರ ಅಧಿಕಾರಿಗಳು ಇದ್ದರು.





