ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಘಾತವಾದ ಕಾರಣ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಸಂರಿಸಿದ ಕಾರು ಮೂರು ಬೈಕ್, ಆಟೋ ಸೇರಿದಂತೆ ರಸ್ತೆ ಬದಿಯ ನಾಲ್ವರಿಗೆ ಢಿಕ್ಕಿ ಹೊಡೆದ ಘಟನೆ ದಾವಣಗೆರೆ ನಗರದ ಕೆ ಬಿ ಬಡಾವಣೆಯ ಸಿದ್ಧಮ್ಮ ಪಾರ್ಕ್ ಬಳಿ ಶನಿವಾರ ರಾತ್ರಿ ನಡೆದಿದೆ.
ಕೆ ಬಿ ಬಡಾವಣೆಯ ಸಿದ್ಧಮ್ಮ ಪಾರ್ಕ್ನ ಬಡಾವಣೆಯ ವನಜಾಕ್ಷಮ್ಮ, ಸಂಪತ್, ಪುಟ್ಟ ಬಾಲಕಿ ಸೇರಿದಂತೆ ನಾಲ್ಕು ಮಂದಿ ಅಧಿಕ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿದೆ, ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಶನಿವಾರ ರಾತ್ರಿ ನೇರ್ಲಗಿ ಗ್ರಾಮದ ಕುಟುಂಬವೊಂದು ದಾವಣಗೆರೆಗೆ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಸಿದ್ಧಮ್ಮ ಪಾರ್ಕ್ನ ಸರ್ಕಲ್ ಬರುವ ಮುನ್ನವೇ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿದೆ. ಪಕ್ಕದಲ್ಲಿದ್ದ ಆತನ ಪತ್ನಿ ಏನಾಯಿತೆಂದು ಎಚ್ಚರಿಸುವ ಹೊತ್ತಿಗೆ ಕಾರು ಮೊದಲು ಆಟೋಗೆ ಢಿಕ್ಕಿ ಹೊಡೆದಿದೆ. ಬಳಿಕ ಅಲ್ಲಿಯೇ ನಿಂತಿದ್ದ ಪೊಲೀಸರ ಬೈಕ್ಗೆ ಗುದ್ದಿದ್ದು, ಸಂಪತ್ ಅವರಿಗೂ ಢಿಕ್ಕಿ ಹೊಡೆದಿದೆ ನಂತರ ವನಜಾಕ್ಷಮ್ಮರ ಮೇಲೆ ಕಾರು ಹರಿದಿದೆ. ವನಜಾಕ್ಷಮ್ಮರ ಎರಡು ಕಾಲುಗಳು ಮುರಿದಿದ್ದು, ಸಂಪತ್ ಅವರಿಗೆ ಗಾಯಗಳಾಗಿವೆ. ಸಂಪತ್ ಅವರ ಪುತ್ರಿಗೆ ಕಾರು ಢಿಕ್ಕಿ ಹೊಡೆದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾರು ಚಾಲಕ ಢಿಕ್ಕಿ ಹೊಡೆದ ಬಳಿಕ ಕಾರು ನಿಂತಿದ್ದು, ಈ ವೇಳೆ ವ್ಯಕ್ತಿಯು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಅವರಿಗೆ ನೀರು ಚುಮುಕಿಸಿದಾಗ ಎಚ್ಚರವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಜಖಂ ಆಗಿದ್ದು, ಕಾರಿನೊಳಗಿದ್ದ ಮಹಿಳೆ ಹಾಗೂ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಈ ಘಟನೆ ನೋಡಿದ ಜನರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಸಿನಿಮಾದಲ್ಲಿ ನೋಡುತ್ತಿದ್ದ ದೃಶ್ಯದಂತೆ ನೈಜವಾಗಿ ಸಿನಿಮಾ ಶೈಲಿಯಲ್ಲಿ ಎರಗಿ ಬಂದ ಕಾರನ್ನು ನೋಡುತ್ತಿದ್ದಂತೆ ಜನ ಒಮ್ಮೆಲೆ ಭಯಭೀತರಾಗಿದ್ದಾರೆ. ಪಾರ್ಕ್ನಲ್ಲಿನ ವಾಯು ವಿಹಾರಿಗಳು, ಅಕ್ಕಪಕ್ಕದ ನಿವಾಸಿಗಳು, ಸ್ಥಳೀಯರು ಒಮ್ಮೆಲೆ ಬೆಚ್ಚಿ ಬಿದ್ದಿದ್ದಾರೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಆಟೋ ಹಾಗೂ ನಾಲ್ಕು ಬೈಕ್ಗಳು ಜಖಂಗೊಂಡಿವೆ. ರಸ್ತೆಯಲ್ಲಿ ಸಾವಿರಾರು ಬೈಕ್ಗಳು, ಕಾರು, ಲಾರಿ ಸೇರಿದಂತೆ ವಾಹನಗಳು ಓಡಾಡುತ್ತವೆ. ಆದರೆ, ಈ ರಸ್ತೆಯಲ್ಲಿ ಹೋಗುವವರಿಗೆ ಯಾವುದೇ ಹಾನಿ ಆಗಿಲ್ಲ. ಶಿವಪ್ಪನಾಯಕ ವೃತ್ತದಿಂದ ತ್ರಿಶೂಲ್ ಥಿಯೇಟರ್ ಮೂಲಕ ಪಿ ಬಿ ರಸ್ತೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಿದ್ಧಮ್ಮ ಪಾರ್ಕ್ನ ರಸ್ತೆ ಸಮೀಪ ನಿಲ್ಲಿಸಿದ್ದ ಆಟೋ ಸಂಪೂರ್ಣ ಜಖಂಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಗದಗದಲ್ಲಿ ಡೆಂಘೀ ಜ್ವರಕ್ಕೆ ಶಿರುಂಜ ಗ್ರಾಮದ ಬಾಲಕ ಮೊದಲ ಬಲಿ
ಸಧ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಹೃದಯಾಘಾತವಾದ ಕಾರು ಚಾಲಕ ಸೇರಿದಂತೆ ಎಲ್ಲರಿಗೂ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





