ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಶೇ.40ರಷ್ಟು ಲಂಚ ಆರೋಪದ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದನ್ನು ಟೀಕಿಸಿ ಸಿ ಟಿ ರವಿ ನೀಡಿರುವ ಹೇಳಿಕೆಯು ಬಾಲಿಶವಾದದ್ದು ಎಂದು ಪೀಪಲ್ ಲಾಯರ್ಸ್ ಗಿಲ್ಡ್ ಮುಖಂಡ, ಕಾಂಗ್ರೆಸ್ ಮುಖಂಡ ವಕೀಲ ಅನೀಸ್ ಪಾಷಾ ದಾವಣಗೆರೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
“ಕರ್ನಾಟಕ ಸರ್ಕಾರ ಇತ್ತೀಚೆಗೆ ಶೇ.40ರಷ್ಟು ಲಂಚ ಆರೋಪದ ತನಿಖೆಗೆ ನ್ಯಾಯಮೂರ್ತಿ ನಾಗಮೋಗನ್ ದಾಸ್ ಸಮಿತಿ ರಚನೆ ಮಾಡಿ ವರದಿ ನೀಡಲು ಶಿಫಾರಸು ಮಾಡಿದೆ. ಇದರಿಂದ ಭಯ ಭೀತರಾಗಿರುವ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಲು ಪ್ರಾರಂಭಿಸಿದ್ದಾರೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಾಗಿದೆ. ನ್ಯಾಯಮೂರ್ತಿಗಳ ಬಗ್ಗೆ, ಭಾರತ ದೇಶದ ಉನ್ನತ ಘನತೆವೆತ್ತ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳ ಬಗ್ಗೆ ಕೀಳಾಗಿ ನಾಲಿಗೆ ಹರಿಬಿಡಲು ಭ್ರಷ್ಟಾಚಾರಿಗಳಿಗೆ ಯಾವುದೇ ಅರ್ಹತೆ ಇಲ್ಲ” ಎಂದು ಕಿಡಿಕಾರಿದರು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣನವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ಶೇ.40ರಷ್ಟು ಕಮಿಷನ್ಗೆ ಸರ್ಕಾರದ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆಂದು ದೂರು ಸಲ್ಲಿಸಿದರೂ ಕೂಡ ಪ್ರಧಾನ ಮಂತ್ರಿಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಂದಿನ ರಾಜ್ಯ ಬಿಜೆಪಿ ಸರ್ಕಾರ ಕೂಡ ದೂರಿನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ದೂರಿನ ಸತ್ಯತೆ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ತನಿಖೆ ಕೈಗೆತ್ತಿಕೊಂಡ ಕೂಡಲೇ ಭಯ ಭೀತರಾಗಿರುವುದನ್ನು ಕಂಡರೆ ಹಿಂದಿನ ಸರ್ಕಾರ ಮಾಡಿರುವ ತಪ್ಪುಗಳು ಜಗಜ್ಜಾಹೀರಾಗುವುದೆಂಬ ಭಯದಿಂದ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ನಾಯಕ, ರೌಡಿ ಶೀಟರ್ ಮಣಿಕಂಠ ರಾಠೋಡ್ ಪೊಲೀಸ್ ವಶಕ್ಕೆ
“ವಾಸ್ತವದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಈವರೆಗೆ ಸರ್ಕಾರಕ್ಕೆ ಸುಮಾರು ಆರು ವರದಿಗಳನ್ನು ಸಲ್ಲಿಸಿದ್ದಾರೆ. ಎಲ್ಲ ವರದಿಗಳನ್ನೂ ಸರ್ಕಾರ ಅಂಗೀಕರಿಸಿ ಅವುಗಳನ್ನು ಜಾರಿಗೆ ತಂದಿದೆ. ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ನೀಡಿರುವಂತಹ ವರದಿಯನ್ನು ಇದೇ ಬಿಜೆಪಿ ಸರ್ಕಾರ ಸತ್ಯಾಸತ್ಯತೆಯನ್ನು ಪರಿಗಣಿಸಿ ಸದರಿ ವರದಿಯನ್ನು ಅಂಗೀಕರಿಸಿ ಜಾರಿಗೆ ತಂದಿದೆ. ಹೀಗಿದ್ದೂ ತಮ್ಮ ತಪ್ಪುಗಳು ಎಲ್ಲಿ ಬಹಿರಂಗವಾಗುತ್ತದೆ ಎಂದು ತಮ್ಮ ತಪ್ಪುಗಳನ್ನು ಮರೆಮಾಚಲು ಈ ರೀತಿ ಮಾತನಾಡುತ್ತಿರುವುದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.




