ಹಸಿವು ಮತ್ತು ಬಿಸಿಲಿನ ಪ್ರಖರತೆಯಿಂದ ಜ್ಞಾನತಪ್ಪಿ ಬಿದ್ದಿದ್ದ ವೃದ್ಧ ಭಿಕ್ಷುಕನೋರ್ವರಿಗೆ ಪೊಲೀಸ್ ಪೇದೆಯೊಬ್ಬರು ಮರುಜೀವ ನೀಡಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಜರುಗಿದೆ.
ತಾಲೂಕಿನ ಕುಂದೂರಿನ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಪಕ್ಕ ಭಿಕ್ಷುಕನೊಬ್ಬ ಎಚ್ಚರತಪ್ಪಿ ಬಿದ್ದಿರುವುದನ್ನು ಕಂಡ ಕುಂದೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ ಎಸ್ ಷಣ್ಮುಖ ಅವರು ಸಮೀಪದ ಕೂಲಂಬಿ ಉಪಠಾಣೆಯ ಪೊಲೀಸ್ ಮುಖ್ಯಪೇದೆ ಕೆ ರಾಜು ಮತ್ತು ಕುಂದೂರು ಗ್ರಾಮ ಪಂಚಾಯಿತಿಯ ಪಿಡಿಒ ವಿಜಯಗೌಡ ಅವರಿಗೆ ಮಾಹಿತಿ ಮುಟ್ಟಿಸುತ್ತಾರೆ.
ಮುಖ್ಯಪೇದೆ ಕೆ ರಾಜು ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರೀಶೀಲಿಸಿ, ಷಣ್ಮುಖ ಮತ್ತು ಪಿಡಿಒ ವಿಜಯಗೌಡ ಹಾಗೂ ಕೆಲವರ ಸಹಾಯದಿಂದ, ಬಹಳ ದಿನಗಳಿಂದ ಆಹಾರ ಸೇವಿಸದೆ ಬಿಸಿಲಿನ ತೀವ್ರತೆಗೆ ಜ್ಞಾನತಪ್ಪಿ ನಿತ್ರಾಣಗೊಂಡು ಬಿದ್ದಿದ್ದ ಭಿಕ್ಷುಕನಿಗೆ ನೀರು ಕುಡಿಸಿದರು. ಅವರು ಸ್ವಲ್ಪ ಚೇತರಿಸಿಕೊಂಡ ಬಳಿಕ ಊಟ ಮಾಡಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ದೇವರಾಜ ಅರಸು ಜನಸಾಮಾನ್ಯರು ಸ್ಮರಿಸುವಂತಹ ನಾಯಕ: ಎಂಎಲ್ಸಿ ವಿಶ್ವನಾಥ್
“ಅನಾಮಧೇಯ ಭಿಕ್ಷುಕನ ಹೆಸರು ಮತ್ತು ಊರನ್ನು ಕೇಳಲು ಪ್ರಯತ್ನಿಸಿದಾಗ, ಆತ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದವರೆಂದು ತಿಳಿದುಬಂದಿದ್ದು, ಹೆಸರು ರಾಮ ಎಂಬುದು ಅಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.
“ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಹೊನ್ನಾಳಿಯ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗಿತ್ತು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಂಡಿದ್ದಾರೆ” ಮುಖ್ಯಪೇದೆ ಕೆ.ರಾಜು ಮಾಹಿತಿ ನೀಡಿದ್ದು, ಮಾನವೀಯತೆ ಮೆರೆದಿದ್ದಾರೆ.




