ಸಂಸದ ಜಿ.ಎಂ ಸಿದ್ದೇಶ್ವರ್ ಅವರ ಕುಟುಂಬಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿದ್ದ ವಿರೋಧಿ ಬಣದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರ ನಿವಾಸಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ತು ಸದಸ್ಯ ಎನ್ ರವಿಕುಮಾರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಭೇಟಿ ನೀಡಿ ಚರ್ಚಿಸಿದರು.
ದಾವಣಗೆರೆಯಲ್ಲಿ ಎಂ.ಪಿ ರೇಣುಕಾಚಾರ್ಯ ಅವರ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ್ ನಿರಾಣಿ, “ಅಸಮಾಧಾನ ಏನೇ ಇದ್ದರೂ ಸರಿಪಡಿಸಿಕೊಂಡು ರೇಣುಕಾಚಾರ್ಯ ಮತ್ತು ಅವರ ಟೀಂ ಸೇರಿಕೊಂಡು ಬಿಜೆಪಿ ಅಭ್ಯರ್ಥಿ ಜಿ ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬೆಂಬಲ ಕೊಟ್ಟು ಗೆಲ್ಲಿಸುವಂತೆ ಚರ್ಚೆ ನಡೆಸಿ ಮನವಿ ಮಾಡಿದ್ದೇನೆʼ ಸಮಸ್ಯೆಗಳು ಏನೇ ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳೋಣ. ಈ ಬಾರಿ ಅವರಿಗೆ ಬೆಂಬಲ ಕೊಡಲು ಹೇಳಿದ್ದೇನೆ. ಇದೊಂದು ಕುಟುಂಬದ ವೈಮನಸ್ಸು, ಬಹಳ ದಿನ ಇರುವುದಿಲ್ಲ. ಎಲ್ಲವೂ ಸರಿ ಹೋಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತುಕತೆ ವಿಫಲದ ಸೂಚನೆ: ಮುರುಗೇಶ್ ನಿರಾಣಿ ಹೋದ ಬಳಿಕ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಮಾತನಾಡಿ, “ಮುರುಗೇಶ್ ನಿರಾಣಿ ಅವರು ನನ್ನೊಂದಿಗೆ ಮಾತನಾಡಿ ಬೆಂಬಲ ನೀಡುವಂತೆ ಕೋರಿದರು. ಆದರೆ ನಾನು ಯಾವುದೇ ಕಾರಣಕ್ಕೂ ಆಗುವುದಿಲ್ಲವೆಂದು ಅವರಿಗೆ ತಿಳಿಸಿದ್ದೇನೆ. ಅಭ್ಯರ್ಥಿ ಬದಲಾಗಬೇಕೆಂದು ಹೇಳಿದ್ದೇನೆ. ಅದೂ ಅಲ್ಲದೆ ಈ ವಿಷಯ ನನ್ನ ನಿರ್ಧಾರ ಅಲ್ಲ. ಎಲ್ಲರೂ ಸೇರಿ ನಿರ್ಧಾರ ಮಾಡಿರುವುದರಿಂದ ನಾನು ಒಬ್ಬನೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ದಯಮಾಡಿ ಬೇಜಾರಾಗಬೇಡಿರೆಂದು ಹೇಳಿ ಕಳುಹಿಸಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ತಪಾಸಣೆ ವೇಳೆ ದಾಖಲೆ ಇಲ್ಲದ ಮೂರು ಲಕ್ಷ ರೂ. ನಗದು ಪತ್ತೆ
ಇದೇ ವೇಳೆ ನೂತನ ಜಿಲ್ಲಾಧ್ಯಕ್ಷ ರಾಜಶೇಖರ್ ಹುಟ್ಟು ಹಬ್ಬವನ್ನು ರೇಣುಕಾಚಾರ್ಯ ಅವರ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ನೂತನ ಅಧ್ಯಕ್ಷರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾರುತಿನಾಯ್ಕ, ಶಿವು ಹುಡೇದ್, ಗಿರೀಶ್, ಮಂಜುನಾಥ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶ್ರೀನಿವಾಸ್ ಇತರರು ಹಾಜರಿದ್ದರು.





