ಜನರೇ ಸರ್ಕಾರದ ಆಸ್ತಿ ಮತ್ತು ಜಾಗಗಳನ್ನು ಒತ್ತುವರಿ ಮಾಡುತ್ತಾರೆ ಎನ್ನುವುದು ಸರ್ವೆ ಸಾಮಾನ್ಯವಾದ ಆರೋಪವಾಗಿದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಸಾರ್ವಜನಿಕ ಸಂಸ್ಥೆಯೊಂದರ ಪ್ರತಿನಿಧಿಗಳು ಅಥವಾ ಸಾರ್ವಜನಿಕ ಸಂಸ್ಥೆಯೊಂದರ ಪರವಾಗಿ ಹಿರಿಯ ರೈತರ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆಂಬ ಆರೋಪವಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜ್ಜಪ್ಪ ಒಡೆಯರಹಳ್ಳಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ವೃದ್ಧ ರೈತ ಮೇಘರಾಜಪ್ಪನವರ ಪೂರ್ವ ಪಶ್ಚಿಮ 137 ಅಡಿ ಉತ್ತರ ದಕ್ಷಿಣ 80 ಅಡಿ ವಿಸ್ತೀರ್ಣದ ಗ್ರಾಮಠಾಣ ಆಸ್ತಿಯನ್ನು ತಮ್ಮದೆಂದು ಹೊರಟಿರುವ ಗ್ರಾಮ ಪಂಚಾಯಿತಿ ಮತ್ತು ರೈತರ ನಡುವೆ ಜಟಾಪಟಿ ನಡೆದಿದೆ.
“ಸರ್ಕಾರಿ ಶಾಲೆಯ ಜಮೀನಿನ ಪಕ್ಕದಲ್ಲಿ ಸುಮಾರು 14 ಜನರ ನಿವೇಶನದ ಕಣಗಳಿದ್ದು, ಇಲ್ಲಿ ರೈತರು ಹುಲ್ಲು ಬಣವೆ, ಸೌದೆ, ದನಕರಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ರೈತರು ಬಹಳಷ್ಟು ಜನ ಅವರ ಹೆಸರಿನಲ್ಲಿ ಸುಮಾರು 50 ವರ್ಷಗಳಿಂದ ಅನುಭವದಲ್ಲಿ ಇದ್ದು ನಿವೇಶನಗಳನ್ನು ಅನುಭವಿಸಿದ್ದಾರೆ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಆದರೆ ಯಾವುದೇ ದಾಖಲೆ ಮತ್ತು ಆಧಾರವಿಲ್ಲದ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿಯವರು ಏಕಾಏಕಿ 2021-22ರಿಂದ ಈ 14 ಜನರಿಗೂ ನೋಟಿಸ್ ಜಾರಿ ಮಾಡಿ ಇದು ಗ್ರಾಮ ಪಂಚಾಯಿತಿ ಆಸ್ತಿಗೆ ಸೇರಿದ್ದು, ಶಾಲೆಯ ಜಾಗ ತೆರವು ಮಾಡಬೇಕು ಎಂಬುದಾಗಿ ತಿಳಿಸಿದೆ. ಆದರೆ ಜನ ಇದರ ವಿರುದ್ದ ತಿರುಗಿ ಬಿದ್ದಾಗ ಸುಮ್ಮನೆ ಇದ್ದ ಗ್ರಾಮ ಪಂಚಾಯಿತಿಯವರು ಮತ್ತು ಕೆಲವು ಪ್ರತಿನಿಧಿಗಳು ಕೇವಲ ವೃದ್ಧ ರೈತ ಮೇಘರಾಜಪ್ಪನವರ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಹೊರಟಿದೆ” ಎನ್ನುವುದು ಸ್ಥಳೀಯರ ಆರೋಪ.
“ಮೇಘರಾಜಪ್ಪ ಮತ್ತು ಅವರ ಧರ್ಮಪತ್ನಿ ಹಿರಿಯರಾಗಿದ್ದು, ಇಬ್ಬರೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ತೊಂದರೆ ಕೊಡುತ್ತಿದ್ದಾರೆ” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹಿರಿಯ ರೈತ ಮೇಘರಾಜಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನನಗೆ ಕೇವಲ ಒಂದು ಎಕರೆ ಜಮೀನಿದ್ದು, ಅದರಲ್ಲಿ ನಾವು ದುಡಿದು ತಿನ್ನುತ್ತಿದ್ದೇವೆ. ಅದರ ಹೊರತಾಗಿ ಶಾಲೆಯ ಮುಂಭಾಗದ ಜಾಗವಿದ್ದು, ಶಾಲೆಯ ಮುಂಭಾಗದಲ್ಲಿ ಸುಮಾರು 70-80 ವರ್ಷಗಳಿಂದಲೂ ನಮ್ಮ ತಂದೆಯವರು ಖರೀದಿಸಿದ್ದ ಪಿತ್ರಾರ್ಜಿತ ಜಮೀನಿದೆ. ಅದನ್ನು ನಾವು ಅನುಭವಿಸಿಕೊಂಡು ಬರುತ್ತಿದ್ದೇವೆ. ಈ ಹಿಂದೆ 1994ರಿಂದ 99ರ ಅವಧಿಯಲ್ಲಿ ನ್ಯಾಯಾಲಯದಲ್ಲಿ ಈ ಬಗ್ಗೆ ವ್ಯಾಜ್ಯ ನಡೆದು 99ರಲ್ಲಿ ನ್ಯಾಯಾಲಯವು ಈ ಜಮೀನಿನ ಸಂಪೂರ್ಣ ಹಕ್ಕುದಾರರು ನಾವೇ ಎಂದು ಆದೇಶ ನೀಡಿದೆ. ಈ ಬಗ್ಗೆ ಯಾವುದೇ ತಕರಾರು ಇಲ್ಲದೇ ಸುಮ್ಮನಿದ್ದ ಗ್ರಾಮ ಪಂಚಾಯಿತಿ 2021ರಲ್ಲಿ ಈ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿನವರಲ್ಲಿ ಕೇಳಿಕೊಂಡಾಗ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಮತ್ತು ಆಗಿನ ಕೆಲ ಪ್ರತಿನಿಧಿಗಳು ₹50,000 ಲಂಚವನ್ನು ಕೇಳಿದ್ದು, ಅದನ್ನು ನಾವು ಕೊಡುವುದಿಲ್ಲ ಎಂದಾಗ ಈ ರೀತಿ ನಮ್ಮ ಜಮೀನನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“2021ರಲ್ಲಿ ಇ-ಸ್ವತ್ತು ಮಾಡಿಕೊಡಲು ಲಾಗಿನ್ ಕೂಡ ಮಾಡಿಕೊಂಡಿದ್ದು, ಅಳತೆ ಸೇರಿದಂತೆ ಎಲ್ಲ ಅವಶ್ಯಕ ಕಾನೂನು ಕ್ರಮಗಳನ್ನು ಮುಗಿಸಿದ್ದು ಕೇವಲ ಲಂಚ ನೀಡಲು ನಿರಾಕರಿಸಿದರಿಂದ ಇ-ಸ್ವತ್ತು ಖಾತೆ ಕೊಡುವುದು ಬಾಕಿ ಉಳಿದಿದೆ” ಎನ್ನುತ್ತಾರೆ ಹಿರಿಯ ರೈತ ಮೇಘರಾಜಪ್ಪ.

“ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು, ನಮಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ನಮ್ಮ ಖಾಸಗಿ ಆಸ್ತಿಯನ್ನು ಒತ್ತುವರಿ ಮಾಡುವುದು ಮತ್ತು ಕಬಳಿಸುವುದನ್ನು ತಡೆದು ನ್ಯಾಯ ನೀಡಬೇಕು” ಎಂದು ಹಿರಿಯ ರೈತ ಮೇಘರಾಜಪ್ಪ ಮನವಿ ಮಾಡಿದರು.
ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ಮಾತನಾಡಿ, “ಈ ಮುಂಚೆ ಈ ಜಾಗದಲ್ಲಿ ಇವರು ಸುತ್ತಾ ತಂತಿ ಬೇಲಿ ಮಾಡಿಕೊಂಡಿದ್ದು, ದನ ಕರುಗಳ ಕೊಟ್ಟಿಗೆ ಇತ್ತು. ಇತ್ತೀಚೆಗೆ ಏಕಾಏಕಿ ಗ್ರಾಮ ಪಂಚಾಯಿತಿಯವರು 2022ರ ಡಿಸೆಂಬರ್ 3ರಂದು ಏಕಾಏಕಿ ಮೇಘರಾಜ್ ಅವರ ನಿವೇಶನದಲ್ಲಿ ಹುಲ್ಲು ಬಣವೆ, ತಂತಿ ಕಂಬಗಳನ್ನು ತೆರವುಗೊಳಿಸಿ ಹತ್ತಿರದ ಬಾವಿಯೊಂದಕ್ಕೆ ತಳ್ಳಿದ್ದು, ನೋಟಿಸ್ ನೀಡಿದ್ದಾರೆ. ಆದರೆ ಉಳಿದ 13 ಜನರ ನಿವೇಶನದಲ್ಲಿ ಏನನ್ನೂ ತೆರವುಗೊಳಿಸಿಲ್ಲ. ಇವರು ಕೋರ್ಟಿಗೆ ಹೋಗಿದ್ದು, ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಅಸಮಾಧಾನ ತಂದಿದೆ” ಎನ್ನುತ್ತಾರೆ
ಮೇಘರಾಜಪ್ಪ ಅವರ ಧರ್ಮ ಪತ್ನಿ ಮತ್ತು ಕುಟುಂಬದವರು ಮಾತನಾಡಿ, “ಈ ಬಗ್ಗೆ ಸ್ಥಳೀಯ ಬಿಳಿಚೋಡು ಪೊಲೀಸ್ ಠಾಣೆಗೆ ದೂರು ನೀಡಿದರೆ, ಅವರು ನಮ್ಮನ್ನು ಕೇವಲ ಇಬ್ಬರನ್ನು ಬರಲು ಹೇಳಿ ಗ್ರಾಮ ಪಂಚಾಯಿತಿ ಮತ್ತು ಅವರ ಪಟ್ಟಭದ್ರ ಹಿತಾಸಕ್ತಿಗಳ 40ರಿಂದ 50ಮಂದಿ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ನಮ್ಮ ಮೇಲೆ ಠಾಣೆಯಲ್ಲಿ ದ್ದೌರ್ಜನ್ಯ ಮಾಡಿದರೂ ಕ್ರಮ ಕೈಗೊಳ್ಳದೆ ನಮ್ಮನ್ನೇ ಹೆದರಿಸಿ ಕಳುಹಿಸುತ್ತಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವಲತ್ತುಕೊಂಡರು.
ಮೇಘರಾಜಪ್ಪ ಅವರ ಪುತ್ರ ಸಿದ್ದೇಶ್ ಮಾತನಾಡಿ, “ಗ್ರಾಮ ಪಂಚಾಯಿತಿಯವರು ನಮ್ಮ ಜಾಗವನ್ನು ಅತಿಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇದರಲ್ಲಿ ಕೆಲವರು ಶಾಲೆಯ ಅಭಿವೃದ್ಧಿಗಾಗೆಂದು ಹೇಳಿಕೊಂಡು ಕಾಂಪೌಂಡ್ ನಿರ್ಮಿಸಿ, ಅದರಲ್ಲಿ ಹಣ ದೋಚಲು ಹೊಂಚು ಹಾಕುತ್ತಿದ್ದಾರೆ. ಅವರು ಹೇಳುವ ಪ್ರಕಾರ ಇದು ಶಾಲೆಯ ಜಾಗವಾಗಿದ್ದರೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು ಅಥವಾ ಸಲ್ಲಿಸಬೇಕು. ಸರ್ಕಾರಿ ಶಾಲೆಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಕೇಳಬೇಕು. ಹೊರತಾಗಿ ಕೇವಲ ಗ್ರಾಮ ಪಂಚಾಯಿತಿಯ ಕೆಲವು ಅಧಿಕಾರಿಗಳಿಗೆ ಮತ್ತು ಕೆಲವು ಸದಸ್ಯರಿಗೆ ಏಕೆ ಆಸಕ್ತಿ. 80 ವರ್ಷಗಳಿಂದಲೂ ನಮ್ಮ ಅನುಭವದಲ್ಲಿ ಇರುವ ಈ ಆಸ್ತಿಯನ್ನು ಕೋರ್ಟ್ ನಮ್ಮದೇ ಎಂದು ತೀರ್ಪು ನೀಡಿದರೂ ಕೂಡ ಇವರು ಊರಿನಲ್ಲಿರುವ ನನ್ನ ತಂದೆ-ತಾಯಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದರು
ಮಾಹಿತಿಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿದಾಗ, “ಆ ಜಾಗಕ್ಕೂ ನಮಗೂ ಸಂಬಂಧವಿಲ್ಲ. ಅದು ನಮ್ಮದೆನ್ನುವ ಅಧಿಕೃತ ದಾಖಲೆ ಯಾವುದು ಇಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ತಾಲೂಕು ಪಂಚಾಯತ್ ನಿರ್ವಹಣಾಧಿಕಾರಿ ಕರಿಬಸಪ್ಪ ಅವರನ್ನು ಪ್ರಶ್ನಿಸಿದಾಗ, “ನಾವು ಅತಿಕ್ರಮಣ ಮಾಡಿಲ್ಲ. ಶಾಲೆಯ ಸುತ್ತಮುತ್ತ ಜಾಗವನ್ನು ಸ್ವಚ್ಛಗೊಳಿಸಿರಬಹುದು ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ” ಎಂದು ಪ್ರತಿಕ್ರಿಯಿಸಿದರು.
ಗ್ರಾಮಸ್ಥರೊಬ್ಬರು ಮಾತನಾಡಿ, “ಇದೇ ಗ್ರಾಮ ಪಂಚಾಯಿತಿಯವರು 2021ರಲ್ಲಿ ಆಸ್ತಿ ಸಂಖ್ಯೆ 151200600100200166 ಎಂದು ಮೇಘರಾಜಪ್ಪ ಅವರ ಇ-ಸ್ವತ್ತಿಗೆ ಆಸ್ತಿಯನ್ನು ಖಾತೆ ಮಾಡಿಕೊಡಲು ಹಿಂಬರಹಗಳನ್ನು ಕೊಟ್ಟಿದ್ದಾರೆ. ಸುಮಾರು 30 ವರ್ಷಗಳಿಂದಲೂ ಅವರು ಇದೇ ಜಾಗಕ್ಕೆ ಕಂದಾಯವನ್ನೂ ಕಟ್ಟಿಸಿಕೊಂಡಿದ್ದು, ಈಗ ಶಾಲೆಗೆ ಸೇರಿದ ಜಾಗವೆಂದು ಹೇಳುತ್ತಿರುವುದು ಅನುಮಾನ ಮೂಡಿಸುವಂತಿದೆ” ಎನ್ನುತ್ತಾರೆ.
ಇದನ್ನೂ ಓದಿದ್ದೀರಾ? ಬಳ್ಳಾರಿ | ಎಸ್ಟಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಜಿದ್ದಾಜಿದ್ದಿ ಜೋರು
“ಇತ್ತೀಚೆಗೆ ಗ್ರಾಮದ ಅಥವಾ ಶಾಲೆ ಉಪಯೋಗಕ್ಕೆಂದು ಬೋರ್ವೆಲ್ ಕೊಡಿಸಲು ಬಂದಿದ್ದು, ಸ್ಥಳೀಯರ ಸಹಾಯದಿಂದ ಅದನ್ನು ತಡೆಯಲಾಗಿದೆ. ಹಾಗೂ ನ್ಯಾಯಾಲಯದೊಂದಿಗೆ ಈ ಜಾಗದಲ್ಲಿ ನೆಟ್ಟಿದ್ದ ಬೋರ್ಡನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತೆರವುಗೊಳಿಸಿದ್ದಾರೆ” ಎಂದು ಮಾಹಿತಿ ತಿಳಿದುಬಂದಿದೆ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಈ ದಿನ.ಕಾಮ್ ಎರಡ್ಮೂರು ದಿನಗಳು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




