ಪರಿಶಿಷ್ಟ ಜಾತಿ ಮತ್ತು ಪಂಗಡ ಉಪಯೋಜನೆ (ಎಸ್ಸಿಪಿ-ಟಿಎಸ್ಪಿ), ಅಬಕಾರಿ ಇಲಾಖೆ ಸೇರಿ ಎಲ್ಲಾ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರದ ಖಜಾನೆ ಲೂಟಿ ಮಾಡಲಾಗುತ್ತಿದೆ. ಮದ್ಯದಂಗಡಿಗೆ ಕೋಟಿ ಕೋಟಿ ನಿಗದಿಗೊಳಿಸಿ ಹರಾಜು ಪ್ರಕ್ರಿಯೆ ನಡೆಸಿರುವುದೇ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡಿದ ಹೊಸವರ್ಷದ ಕೊಡುಗೆಯಾಗಿದೆ” ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಖಾಸಗಿ ಭೇಟಿಗಾಗಿ ಬೆಳಗ್ಗೆ 11.30 ರ ಸುಮಾರಿಗೆ ದಾವಣಗೆರೆಗೆ ಆಗಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮದ್ಯದಂಗಡಿ ಹರಾಜಿಗೆ ಪ್ರತಿ ಪರವಾನಗಿಗೆ 1 ಕೋಟಿ 95 ಲಕ್ಷ ರೂಪಾಯಿವರೆಗೆ ದರ ನಿಗದಿ ಮಾಡಿರುವುದು ರಾಜ್ಯ ಸರ್ಕಾರದ ಇಲಾಖೆಗಳ ದುರ್ಬಳಕೆ, ಲೂಟಿಗೆ ಸಾಕ್ಷಿ. ಇಲಾಖೆಗಳಲ್ಲಿ ಕೋಟಿ ಕೋಟಿ ದರ ನಿಗದಿಪಡಿಸಿ ರಾಜ್ಯ ಸರ್ಕಾರದ ಪ್ರತಿ ಇಲಾಖೆಯನ್ನು ಲೂಟಿ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.


“ಜನರು ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಸರ್ಕಾರ ರಚನೆಯಾದ ಆರಂಭದಿಂದಲೂ ಅಧಿಕಾರ ಹಂಚಿಕೆಯ ಕಿತ್ತಾಟ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಇನ್ನೂ ಎಷ್ಟು ದಿನ ಹೀಗೆ ಕಾಲ ಕಳೆಯುತ್ತೀರಿ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಾವಣಗೆರೆ | ಲಿಂಗಾಪುರ ರೈತ ಘಟಕದಿಂದ ರೈತ ದಿನಾಚರಣೆ ಸಂಭ್ರಮ ಬೈಕ್ ರ್ಯಾಲಿ
“ಸಾವಿರಾರು ಕೋಟಿ ಹಣ ಸರ್ಕಾರದ ಖಜಾನೆಯಿಂದ ಬಿಡುಗಡೆಯಾಗಿರುವುದು ಆರ್ಥಿಕ ಸಚಿವ, ತಜ್ಞರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇಂತಹ ಆರ್ಥಿಕ ತಜ್ಞರನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದರು.
ಭೇಟಿ ವೇಳೆ ಜೆಡಿಎಸ್ ಮುಖಂಡ ಹರಿಹರ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ಬೋಜೇಗೌಡ, ಮುಖಂಡರಾದ ಅಮಾನುಲ್ಲಾ ಖಾನ್ ಸೇರಿದಂತೆ ಇತರರು ಹಾಜರಿದ್ದರು.





