ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ಪಕ್ಕದ ಖಾಸಗಿ ಜಮೀನಿನ ನಷ್ಟದ ಪರಿಹಾರವಾಗಿ ಗುತ್ತಿಗೆದಾರರು ಮತ್ತು ಮಾಲೀಕರ ನಡುವೆ ಏರ್ಪಟ್ಟ ವಿವಾದವು ಈಗ ರಸ್ತೆಯಲ್ಲಿ ಸಂಚರಿಸುವವರ ಪ್ರಾಣಕ್ಕೆ ಕುತ್ತಾಗಿ ಸಂಭವಿಸಿದ್ದು, ಪ್ರತಿದಿನ ಈ ದಾರಿಯಲ್ಲಿ ಸಂಚರಿಸುವ ಚಿಕ್ಕ ಚಿಕ್ಕ ವಾಹನಗಳ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಆದರೂ ಈ ಹೆದ್ದಾರಿ ವಿವಾದದಲ್ಲಿ ಸರ್ಕಾರ ಮಾತ್ರ ಮೌನ ಮುರಿಯುತ್ತಿಲ್ಲ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದ ರಾಮನಕೆರೆ ದಂಡೆ ಮೇಲೆ, ಶಿವಮೊಗ್ಗ-ಹರಿಹರಕ್ಕೆ ಸಂಪರ್ಕ ಕಲ್ಪಿಸುವ 650 ಮೀ. ಉದ್ದದ ರಸ್ತೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಹಾಗಾಗಿ ಇದರಿಂದ ಹೊರ ಹೊಮ್ಮುವ ಧೂಳಿನಿಂದಾಗಿ ಅಪಘಾತವಾಗುತ್ತದೆಂಬ ಭಯದಿಂದ ಸಂಚರಿಸುವಂತಾಗಿದೆ.
ಇದು ಉತ್ತರದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಭಾಗಗಳನ್ನು ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಒಂದೇ ರಸ್ತೆ ಇದ್ದು, ಎರಡೂ ಕಡೆಯ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಇದು ರಾಜ್ಯ ಹೆದ್ದಾರಿ ಸಂಖ್ಯೆ-25 ಹೊಸಪೇಟೆಯಿಂದ ಹರಿಹರ ಹೊನ್ನಾಳಿಯ ಮಾರ್ಗವಾಗಿ ಶಿವಮೊಗ್ಗಕ್ಕೆ ಸಾಗುವ ರಸ್ತೆಯಾಗಿದೆ. ಆದರೆ, ಇದರ ಸ್ಥಿತಿ ಅಯೋಮಯವಾಗಿದ್ದು, ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಿತ್ತುಹೋಗಿರುವ, ಡಾಂಬರ್ ಮೆತ್ತಿದ ರಸ್ತೆ, ಆಗಾಗ್ಗೆ ಮಾಡುವ ಪ್ಯಾಚಿಂಗ್ ವರ್ಕ್ಗಳಿಂದ ಕಿತ್ತುಬಂದಿರುವ ಕಲ್ಲುಗಳು ರಾರಾಜಿಸುತ್ತವೆ. ಹರಿಹರದಿಂದ ಶಿವಮೊಗ್ಗ ಜಿಲ್ಲೆಯ ಗಡಿಯವರೆಗೂ ಬಹುತೇಕ ಈ ದುಃಸ್ಥಿತಿ ಸರ್ವೇಸಾಮಾನ್ಯವಾಗಿದೆ. ಇತ್ತೀಚೆಗೆ ಈ ರಸ್ತೆಗೆ ಕಾಯಕಲ್ಪ ತರಲು ಬಹುತೇಕ ಕಿತ್ತುಹೋಗಿದ್ದ ಕೆಲವೆಡೆ ರಸ್ತೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಕೆರೆ ಏರಿಗಳ ಮೇಲಿರುವ ರಸ್ತೆಗಳನ್ನು ದುರಸ್ತಿಪಡಿಸುವ ತುಂಡು ಕಾಮಗಾರಿ ನಡೆಯುತ್ತಿದ್ದು, ಇದರಡಿಯಲ್ಲಿ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮಕ್ಕೆ ಹೊಂದಿಕೊಂಡಿರುವ ರಾಮನಕೆರೆ ದಂಡೆಯ ಮೇಲೆ 650 ಮೀ. ರಸ್ತೆ ಕಾಮಗಾರಿ ಪ್ರಾರಂಭವಾಗಿತ್ತು. ರಸ್ತೆಗೆ ಹೊಂದಿಕೊಂಡಂತಿರುವ ಖಾಸಗಿ ರೈಸ್ ಮಿಲ್ ಮಾಲೀಕರ ಜಮೀನಿದ್ದು, ರಸ್ತೆ ಅಗಲೀಕರಣದ ವೇಳೆ ಜಮೀನು ಒತ್ತುವರಿಯಾಗಿದೆ ಎಂದು ಪರಿಹಾರದ ಸಲುವಾಗಿ ಕೆಂಗಣ್ಣಿಗೆ ಗುರಿಯಾಗಿ ಇದು ವಿವಾದಕ್ಕೆ ಕಾರಣವಾಗಿದೆ. ಇದರಿಂದಾಗಿ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಹೋಗಿದ್ದು, ರಸ್ತೆಗೆ ಹಾಕಿದ್ದ ಕಲ್ಲುಗಳು ಹಾಗೂ ಮಣ್ಣು ಧೂಳಿನ ರೂಪದಲ್ಲಿ ಮೇಲೇಳುತ್ತಿದೆ. ಕಲ್ಲುಗಳು ಕಿತ್ತುಬಂದಿದ್ದು, ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಇತ್ತೀಚೆಗೆ 15 ದಿನಗಳಿಂದ ಆಗಾಗ್ಗೆ ಬಿದ್ದು ಅಪಘಾತಕ್ಕೀಡಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ರಾಮನಕೆರೆ ಏರಿಯ ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳು ಮೇಲೆ ಬಂದಿದ್ದು, ಅಲ್ಲಲ್ಲಿ ಉಬ್ಬು-ತಗ್ಗು ಗುಂಡಿಗಳು ಬಿದ್ದಿದ್ದು. ಇವುಗಳಿಂದಾಗಿ ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಪ್ರತಿ ಬಾರಿಯೂ ಜೀವ ಕೈಯಲ್ಲಿಡಿದು ಸಾಗುವಂತಾಗಿದೆ. ನಿತ್ಯವೂ ಬಸ್ಸು ಲಾರಿ ಸೇರಿದಂತೆ ಸಾವಿರಾರು ದೊಡ್ಡ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿರುತ್ತವೆ. ಆರು ಚಕ್ರದ ಲಾರಿಗಳಿಂದ ಹಿಡಿದು 14-20 ಚಕ್ರದ ಲಾರಿಗಳವರೆಗೆ ಅತಿ ಭಾರ ಹೊತ್ತ ಸರಕು ಸಾಗಣೆ ವಾಹನಗಳು ಸಾಗುತ್ತಿರುತ್ತವೆ. ಇಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಶಾಲಾ ಮಕ್ಕಳ ವಾಹನಗಳು ಕೂಡ ಸಂಚರಿಸುತ್ತವೆ. ಇವುಗಳಿಂದ ಏಳುವ ಧೂಳು ಮತ್ತು ಸಿಡಿಯುವ ಕಲ್ಲುಗಳು ಅಕ್ಕಪಕ್ಕದ ವಾಹನಗಳಿಗೆ ಅಪ್ಪಳಿಸಿ ಸಂಚಾರ ಕಷ್ಟವಾಗಿದೆ.
ರಸ್ತೆ ಮತ್ತು ಜಮೀನಿನ ವಿವಾದವನ್ನು ಸೂಕ್ತವಾಗಿ ಬಗೆಹರಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕಾಗಿದ್ದ ಲೋಕೋಪಯೋಗಿ ಅಧಿಕಾರಿಗಳು ಈ ಕಡೆ ಗಮನ ಹರಿಸದೆ ನಿರ್ಲಕ್ಷ ವಹಿಸಿದ್ದಾರೆ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳೂ ಕೂಡ ಈ ಬಗ್ಗೆ ಗಮನ ಹರಿಸದಿರುವುದು ಅಪಘಾತಗಳು ಇನ್ನಷ್ಟು ಹೆಚ್ಚಾಗಲು ಹಾಗೂ ರಸ್ತೆ ದುರಸ್ತಿ ನೆನೆಗುದಿಗೆ ಬೀಳಲು ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ.

ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಹಾಕಿರುವ ಸಣ್ಣ ಜಲ್ಲಿ, ಕಲ್ಲಿನ ಪೌಡರ್ ವಾಹನ ಸವಾರರಿಗೆ ಧೂಳು ದಟ್ಟವಾಗಿ ಆವರಿಸಿಕೊಂಡು ಧೂಳಿನಿಂದಾಗಿ ಎರಡು ಮಾರ್ಗವಾಗಿ ಹೋಗುವ ವಾಹನಗಳು ಕಾಣುವುದೇ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ತಾನೇ ಇಂತಹ ಅವಘಡದಿಂದ ಎರಡು ಅಪಘಾತಗಳು ಸಂಭವಿಸಿದ್ದು, ಒಬ್ಬ ಬೈಕ್ ಸವಾರನ ಜೀವ ಹೋಗಿದೆ ಮತ್ತು ಇನ್ನೊಬ್ಬ ವ್ಯಕ್ತಿಯ ಕಾಲು ತುಂಡಾಗಿ ಅಂಗವೈಕಲ್ಯ ಉಂಟಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಪ್ರತಿದಿನ ಬಿದ್ದು ಆಗಿರುವ ಸಣ್ಣ ಪುಟ್ಟ ಗಾಯಗಳ ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ದಿನಂಪ್ರತಿ ಐದಾರು ಜನ ಬೈಕ್ ಸವಾರರು ಬಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ, ಮನೆಗೆ ತೆರಳುವುದು ಸಾಮಾನ್ಯ ಸಂಗತಿಯಾಗಿದೆ.
ಈ ಬಗ್ಗೆ ಈ ದಿನ ಡಾಟ್ ಕಾಮ್ನೊಂದಿಗೆ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾಧ್ಯಕ್ಷ ಕುಮಾರ್ ಚೀಲೂರು, “ಅಮಾಯಕ ಸಾರ್ವಜನಿಕರು ಈ ದಟ್ಟವಾದ ಧೂಳಿನಿಂದ ಪ್ರಾಣ ಕಳೆದುಕೊಳ್ಳುವ ದುಃಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು. ಇದಕ್ಕೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ನ್ಯಾಮತಿ ಹೊನ್ನಾಳಿ ತಾಲೂಕಿನ ಶಾಸಕ ಡಿಜೆ ಶಾಂತನಗೌಡ ಈ ಕಡೆ ಗಮನ ಹರಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಕೂಡಲೇ ವಿವಾದವನ್ನು ಬಗೆಹರಿಸಿ ರಸ್ತೆಯ ನಿರ್ಮಾಣವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅನುವುಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

“ಇಲ್ಲವಾದಲ್ಲಿ ಈ ರಸ್ತೆಯಲ್ಲಿ ಇನ್ನು ಮುಂದೆ ಯಾವುದೇ ಅಪಘಾತ ಸಂಭವಿಸಿದರೆ ನೇರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಣೆಯಾಗುತ್ತಾರೆ. ಅನಾಹುತ ಸಂಭವಿಸಿದ ಸ್ಥಳದಲ್ಲಿ ಸಂತ್ರಸ್ತ ವ್ಯಕ್ತಿಗಳ, ಕುಟುಂಬದ ಜತೆಗೆ ಬೃಹತ್ ರಸ್ತೆತಡೆ ಹೋರಾಟ ಮಾಡಲಾಗುವುದು. ಇದರ ನಷ್ಟ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆಗಾರರಾಗುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಇಲ್ಲಿ ಕೆಲಸ ವಿಳಂಬವಾಗಲು ಕಾರಣ ಇಲ್ಲಿನ ಗುತ್ತಿಗೆದಾರರು ಮತ್ತು ಪಕ್ಕದ ಜಮೀನು ಮಾಲೀಕ, ರೈಸ್ ಮಿಲ್ ಮಾಲೀಕರಾದ ಡಾ. ಜಗದೀಶ್ ಹುಲಿಕೇರಿ ಮತ್ತು ಮಗ ಜಯದೇವ್ ಇವರ ಜಮೀನು ನಷ್ಟದ ಪರಿಹಾರ ಎಂದು ತಿಳಿದು ಬಂದಿದೆ. ಕೆಲಸ ಮಾಡಲು ಬಂದ ರಸ್ತೆ ಕಾಮಗಾರಿಯ ಕೆಲಸಗಾರರನ್ನು ಜಮೀನಿನವರು ತಗಾದೆ ತೆಗೆದು ವಾಪಸ್ ಕಳಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇವರ ಮಧ್ಯೆ ಏರ್ಪಟ್ಟ ಜಗಳ ಹಾಗೂ ಇದನ್ನು ಪರಿಹರಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ರಸ್ತೆಯಲ್ಲಿ ಓಡಾಡುವ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.
ಈ ರಸ್ತೆಯ ಮೇಲ್ಮೈ ಸಂಪೂರ್ಣ ಹಾಳಾಗಿದ್ದು, ಸಣ್ಣ ಗಾಳಿ ಬೀಸಿದರೂ ಧೂಳು ಮೇಲೆದ್ದು ರಸ್ತೆ ಮಸುಕಾಗುತ್ತದೆ. ಈ ಧೂಳು ಊರಿನ ಬದಿಯಲ್ಲೂ ಕೂಡ ಆವರಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೆ, ವೃದ್ಧರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಗಡಿ ಭಾಗದ ಮನೆಗಳೊಳಗೆ ಧೂಳು ನುಗ್ಗಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಅಲರ್ಜಿ, ಶೀತ ಹಾಗೂ ಕಣ್ಣಿನ ಉರಿ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
“ಪ್ರಮುಖ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ರಸ್ತೆ ಅಗೆಯಲ್ಪಟ್ಟಿದ್ದರೂ, ರಸ್ತೆ ಕಾಮಗಾರಿ ಮತ್ತು ಸಮತಟ್ಟುಗೊಳಿಸುವ ಕೆಲಸ ಪೂರ್ಣಗೊಳ್ಳದೆ ಉಳಿದಿದೆ. ಪರಿಣಾಮವಾಗಿ ವಾಹನ ಸಂಚಾರದ ವೇಳೆ ಅಪಾರ ಪ್ರಮಾಣದಲ್ಲಿ ಧೂಳು ಏಳುವ ಮೂಲಕ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ರಾತ್ರಿ, ಸಂಜೆ ವೇಳೆ ಧೂಳಿನಿಂದಾಗಿ ಎದುರುಗಡೆ ಬರುವ ವಾಹನಗಳು ದ್ವಿಚಕ್ರ ವಾಹನವೋ ಅಥವಾ ಕಾರು, ಲಾರಿ, ಬಸ್ ಯಾವ ವಾಹನವೆಂದು ತಿಳಿಯದೆ ಆತಂಕ ಉಂಟಾಗುತ್ತದೆ” ಎಂದು ಪ್ರತಿನಿತ್ಯ ಸಂಚರಿಸುವ ಬೈಕ್ ಸವಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಪಕ್ಕದಲ್ಲಿರುವ ರಾಮನಕೆರೆ ಆಳವಿದ್ದು, ಅಪಘಾತದ ಸಮಯದಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸಿದರೆ ಕೆರೆಯ ಗುಂಡಿಗಳೊಳಗೆ ಬಿದ್ದು ಪ್ರಾಣಾಪಾಯ ಹೆಚ್ಚುವ ಸಾಧ್ಯತೆಗಳೂ ಕೂಡ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳುವ ಅವಶ್ಯಕತೆ ಹೆಚ್ಚಾಗಿದೆ.
ಇದನ್ನೂ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು- ವಸು ಮಳಲಿ
ರಾಜ್ಯದಲ್ಲಿ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ, ಅಲ್ಲದೆ ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸುವ ಸಮಯದಲ್ಲಿ ಪ್ರಾರಂಭವಾಗಿರುವ ರಸ್ತೆ ಕಾಮಗಾರಿ ಪರಿಹಾರದ ಸಲುವಾಗಿ ಕೆಂಗಣ್ಣಿಗೆ ಗುರಿಯಾಗಿ ಸ್ಥಗಿತಗೊಳಿಸಲಾಗಿದೆ. ಇದನ್ನು ಪರಿಹರಿಸಬೇಕಾದ ಅಧಿಕಾರಿಗಳು ಗಮನಹರಿಸಿದೆ ಕೈಕಟ್ಟಿ ಕುಳಿತಿದ್ದಾರೆ. ಇದರ ಪರಿಣಾಮವನ್ನು ಸ್ಥಳೀಯರು, ಸಾರ್ವಜನಿಕರು, ಬೈಕ್ ಮತ್ತು ವಾಹನ ಸವಾರರು ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಇದಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಮೂಲಕ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಆ ಮೂಲಕ ಅಪಘಾತ, ಜೀವಹಾನಿ ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




