ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ವಾಭಿಮಾನಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ, ನಾಮಪತ್ರ ಸಲ್ಲಿಸಿ, ನಂತರ ಅದನ್ನು ವಾಪಸ್ಸು ತೆಗೆದುಕೊಳ್ಳುವ ಪ್ರಶ್ನೆಯೇ ಇರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಜಿ.ಬಿ. ವಿನಯಕುಮಾರ ಪುನರುಚ್ಛರಿಸುವ ಮೂಲಕ ಸ್ಪರ್ಧೆ ಖಚಿತಗೊಳಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಸುದ್ದಿಮಾದ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸುತ್ತೇನೆ. ನಾಮಪತ್ರ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ವಾಪಸ್ಸು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಂದಲೂ ನನಗೆ ಫೋನ್ ಬರುತ್ತಿದೆ. ನಾನು ಈಗಾಗಲೇ ಕ್ಷೇತ್ರಾದ್ಯಂತ ಸುತ್ತಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ತಪ್ಪಿರಬಹುದು. ಆದರೆ, ನಾನು ಪಕ್ಕಾ ಕಾಂಗ್ರೆಸ್ಸಿಗ ಎಂದು ಅವರು ಹೇಳಿದರು.
ಕಾಂಗ್ರೆಸ್ಸನ್ನು ಸೋಲಿಸುವುದು, ಬಿಜೆಪಿಯನ್ನು ಗೆಲ್ಲಿಸುವುದು ನನ್ನ ಗುರಿಯಂತೂ ಅಲ್ಲ. ನಾನು ಗೆಲ್ಲಬೇಕು. ಅದಕ್ಕಾಗಿ ಗೆಲ್ಲುವ ಕಡೆಗೆ ನನ್ನೆಲ್ಲಾ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಯೆಂದೇ ಪ್ರಚಾರ ಮಾಡಿ, ಅಹಿಂದ ಮತಗಳನ್ನು ಒಟ್ಟುಗೂಡಿಸುತ್ತೇನೆ ಎಂದರು.
ಎಲ್ಲಾ ಅಹಿಂದ ಮುಖಂಡರು, ಜಿಲ್ಲೆ, ರಾಜ್ಯ ಮುಖಂಡರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ನೂರಾರು ಹಳ್ಳಿಗಳ ಜನ ಸಾಮಾನ್ಯರು, ಮತದಾರರು ನನ್ನನ್ನು ಒಪ್ಪಿಕೊಂಡಿದ್ದಾರೆ. ಅವರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿ, ಸ್ಪರ್ಧಿಸುವುದಂತೂ ಖಚಿತ ಎಂದು ಜಿ.ಬಿ. ವಿನಯಕುಮಾರ ಸ್ಪಷ್ಟವಾಗಿ ಖಚಿತಪಡಿಸಿದರು.





