ಕೇಂದ್ರ ಸರ್ಕಾರ ಈ ಮೊದಲು ಇದ್ದಂತಹ ರೈತ ಮತ್ತು ಕಾರ್ಮಿಕರ ಪರವಾದ ಕಾನೂನುಗಳನ್ನು ಕಿತ್ತುಹಾಕುತ್ತಿದೆ, ರೈತ ವಿರೋಧಿಯಾದ ಕೃಷಿ ಮಸೂದೆಯನ್ನು ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲಮಾಡಿ ಕೊಟ್ಟಿದೆ ಎಂದು ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ ಉಮೇಶ್ ಕಿಡಿಕಾರಿದ್ದಾರೆ.
ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳವಳಿಯ ದಿನದಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಹಮ್ಮಿಕೊಂಡಿದೆ. ದಾವಣಗೆರೆಯಲ್ಲಿ ಹೋರಾಟದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕಾನೂನುಗಳನ್ನು ರೂಪಿಸಿ, ದೇಶದ ರೈತ-ಕಾರ್ಮಿಕರನ್ನು ಶೋಷಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೆಹಲಿಯ ಹೊರವಲಯದಲ್ಲಿ ನಡೆದ ರೈತರ ರಾಜಿರಹಿತ ಹೋರಾಟದಿಂದಾಗಿ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿತ್ತು. ಇದೀಗ, ಅವುಗಳನ್ನು ಮತ್ತೆ ಜಾರಿಗೊಳಿಸಲು ಹೊರಟಿದೆ. ಇದಲ್ಲದೇ ಕಾರ್ಮಿಕ ವಿರೋಧಿ ನಾಲ್ಕು ನೀತಿಗಳನ್ನು ಜಾರಿಗೊಳಿಸಿದ್ದು, ಕಾರ್ಖಾನೆ ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಕೆ ಮಾಡಲಾಗುತ್ತಿದೆ. ಆ ಮೂಲಕ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿದೆ” ಎಂದು ಕಿಡಿಕಾರಿದರು.
ಪೋಸ್ಟರ್ ಬಿಡುಗಡೆಯ ಸಮಯದಲ್ಲಿ ಎ.ಬಿ ರಾಮಚಂದ್ರಪ್ಪ, ಕೆ.ಹೆಚ್ ಆನಂದರಾಜ್, ಶ್ರೀನಿವಾಸ್, ಸತೀಶ್ ಅರವಿಂದ, ಮಧು ತೊಗಲೇರಿ, ಐರಣಿ ಚಂದ್ರು, ಅಭಿಷೇಕ್, ತಿಪ್ಪೇಶ್ ಅವರಗೆರೆ, ಪವಿತ್ರಾ ಆದಿಲ್ ಖಾನ್, ಬಾನಪ್ಪ, ದಿವಾಕರಚಾರಿ ಇತರರು ಹಾಜರಿದ್ದರು.




