ಹೆಚ್ಚು ಜನರು ಪ್ರಯಾಣಿಸುವ ಸಮಯದಲ್ಲಿ (ಪೀಕ್ ಹವರ್) ದಾವಣಗೆರೆ ನಗರಕ್ಕೆ ಲಾರಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅರುಣ್ ಕೆ ತಿಳಿಸಿದ್ದಾರೆ.
“ಪ್ರತಿ ದಿನ ಬೆಳಿಗ್ಗೆ 9 ರಿಂದ 11 ಮತ್ತು ಸಂಜೆ 4 ರಿಂದ 6ರವರೆಗೆ ಲಾರಿಗಳ ನಗರ ಪ್ರವೇಶಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಅಗತ್ಯ ವಸ್ತು ಪೂರೈಕೆಯ ಗ್ಯಾಸ್, ಪೆಟ್ರೋಲ್ ಮತ್ತು ಜಿಲ್ಲಾಧಿಕಾರಿಯಿಂದ ವಿಶೇಷ ಅನುಮತಿ ಪಡೆದ ಲಾರಿಗಳಿಗೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ, ದಾವಣಗೆರೆಯ ಹಳೇಕುಂದುವಾಡದಲ್ಲಿ ಅಂಗನವಾಡಿಯಿಂದ ಮನೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಟಿಪ್ಪರ್ ಹರಿದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಗರದಲ್ಲಿ ಪೀಕ್ ಹವರ್ನಲ್ಲಿ ಲಾರಿ ಸಂಚಾರ ನಿಷೇಧಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಜಾರಿಯಾಗಿದೆ ಎನ್ನಲಾಗಿದೆ.




