ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ‘ಪವನ ವಿದ್ಯುತ್ ಕಂಪನಿ’ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಾವಣಗೆರೆ ಜಿಲ್ಲೆಯ ಜಗಳೂರಿನ ದೊಣ್ಣೆಹಳ್ಳಿ ಪಿಡಿಒ ವಿರುದ್ಧ ದೂರು ದಾಖಲಾಗಿದೆ.
ಹಿರೇಮಲ್ಲನಹೊಳೆ ಗ್ರಾಮದ ಪವನ ವಿದ್ಯುತ್ ಕಂಪನಿ ಸಿಎಂಇಎಸ್ ಜೂಪಿಟರ್ ರಿನ್ಯೂವಬಲ್ ಸ್ಟೇಷನ್ ಉದ್ಯೋಗಿ ಉಮಾ ಮಹೇಶ್ವರ ರಾವ್ ಸುರಪನೇನಿ ಅವರು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ದೊಣೆಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಕೊಟ್ರೇಶ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕೊಟ್ರೇಶ್ ಮಾತ್ರವಲ್ಲದೆ, ಇತರ 30 ಮಂದಿ ವಿರುದ್ಧವೂ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಮಹೇಶ್ವರ ರಾವ್ ಅವರ ದೂರಿನಲ್ಲಿ; ಪವನ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದಂತೆ 2021 ರಿಂದ 2025ರವರೆಗೂ ತೆರಿಗೆ ಪಾವತಿಸಲಾಗಿದೆ. 2025–2026ನೇ ಸಾಲಿನಲ್ಲಿ ಪಂಚಾಯತಿಯು ಹೊಸ ನಿಯಮ ರೂಪಿಸಿದ್ದರಿಂದ, ಅದರ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದ ಕಾರಣ ತೆರಿಗೆ ಪಾವತಿಸಿಲ್ಲ. ಆದರೂ, ದೊಣೆಹಳ್ಳಿ, ಹನುಮಂತಾಪುರ, ಹಿರೇಮಲ್ಲನಹೊಳೆ ಪಂಚಾಯಿತಿಗಳ ಪಿಡಿಒಗಳು ಮತ್ತು ಸದಸ್ಯರು ತೆರಿಗೆ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಣೆಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಕೊಟ್ರೇಶ್ ಅವರು ಮದ್ಯಪಾನ ಮಾಡಿ, ಸುಮಾರು 30 ಮಂದಿಯ ಗುಂಪು ಕಟ್ಟಿಕೊಂಡು ಹಿರೇಮಲ್ಲನಹೊಳೆಯಲ್ಲಿರುವ ಇಂಧನ ಘಟಕಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಘಟಕವನ್ನು ಸುಟ್ಟು ಹಾಕುವುದಾಗಿಯೂ, ಸಿಬ್ಬಂದಿಗಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.





