ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿರುವ ಶಾಸಕ ಬಿ.ಪಿ. ಹರೀಶ್, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ್ದಾರೆ. ನೀರಿನ ಸಮಸ್ಯೆಯನ್ನು ನೀಗಿಸಲು ಭದ್ರಾ ಜಲಾಶಯದಿಂದ ನದಿಗೆ ಏಪ್ರಿಲ್ 3ರಿಂದ ನೀರು ಹರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಾರ್ಡ್ಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “10 ದಿನಗಳ ಹಿಂದೆ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಅಂದಿನಿಂದಲೇ ನಗರಕ್ಕೆ ಕುಡಿಯುವ ನೀರಿನ ಸರಬರಾಜು ನಿಂತಿದೆ. ಏ.3ರ ಬದಲು ಮಾ.27ರಿಂದಲೇ ನದಿಗೆ ನೀರು ಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಆಗ್ರಹಿಸಿದ್ದೇನೆ” ಎಂದರು.
ದೇವರಬೆಳೆಕೆರೆ ಪಿಕ್ಅಪ್ನಿಂದ ಹಳ್ಳಕ್ಕೆ ನೀರು ಹರಿಸಲು ಮನವಿ ಮಾಡಿದ್ದೇನೆ. ಹಿರಿಯ ಅಧಿಕಾರಿಗಳು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಲಿಖಿತ ಆದೇಶ ಕೇಳುತ್ತಿದ್ದಾರೆ ಎಂದ ಅವರು, ದೇವರಬೆಳೆಕೆರೆ ಪಿಪ್ಅಪ್ನಿಂದ ಶೀಘ್ರ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಕೇಳಿಕೊಂಡರು.
ನಗರದ ಎಲ್ಲಾ ವಾರ್ಡುಗಳಲ್ಲಿಯೂ ಕೊಳವೆಬಾವಿ, ಕಿರುನೀರು ಸರಬರಾಜು ಕೇಂದ್ರಗಳಿವೆ. ಆದರೆ, ಅವುಗಳಲ್ಲಿ ಗಣನೀಯ ಸಂಖ್ಯೆಯ ಕೊಳವೆಬಾವಿಗಳಿಗೆ ದುರಸ್ತಿಯ ಅಗತ್ಯವಿದೆ. ನಗರಸಭೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಸಮರೋಪಾದಿಯಲ್ಲಿ ದುರಸ್ತಿ ಹಾಗೂ ಪೈಪ್ಲೈನ್ ಅಳವಡಿಕೆ ಕಾರ್ಯ ಕೈಗೊಂಡು ನೀರಿಗಾಗಿ ಜನರು ಪರದಾಡುತ್ತಿರುವುದನ್ನು ನಿವಾರಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.
ಅವರು ಗುತ್ತೂರು, ಹಳೆ ಹರ್ಲಾಪುರ, ದೇವಸ್ಥಾನ ರಸ್ತೆ , ಗಂಗಾನಗರ, ಹಳ್ಳದಕೇರಿ, ವಿದ್ಯಾನಗರ, ಜೈ ಭೀಮನಗರ ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.
ಧೂಡಾ ಮಾಜಿ ಸದಸ್ಯ ರಾಜು ರೋಖಡೆ, ನಗರಸಭೆ ಪೌರಾಯುಕ್ತ ಬಸವರಾಜ್ ಐಗೂರು, ಎಇಇ ತಿಪ್ಪೇಶಪ್ಪ ಜಿ.ಟಿ., ಎಇಗಳಾದ ಮಂಜುನಾಥ್, ಮಂಜುಳಮ್ಮ ಇದ್ದರು.




