ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದ ಎಲ್ಲಾ ಪ್ರಕರಣಗಳ ಕುರಿತು ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲು ಹೋರಾಟಗಾರರನ್ನು ಒಳಗೊಂಡ ಕ್ರಿಯಾ ಸಮಿತಿಯೊಂದನ್ನು ರಚಿಸಲು ಹೋರಾಟಗಾರರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭಾನುವಾರ (ಜ.25) ರಂದು ಮಂಗಳೂರಿನಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಈ ಸಮಿತಿಗೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮುಂದಾಳುತ್ವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದು, ಅವರು ತನ್ನ ಮೇಲಿನ ಕೋರ್ಟ್ ಪ್ರಕರಣದ ಒತ್ತಡ ಮುಗಿಸಿಕೊಂಡು ಸಮಿತಿಯೊಂದಿಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಕೊಂದವರು ಯಾರು ತಂಡದ ಹಕ್ಕೊತ್ತಾಯಗಳೇನು?
ಸಭೆಯಲ್ಲಿ ಮಾತನಾಡಿದ ಮಟ್ಟಣ್ಣವರ್ ಎಲ್ಲಾ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಶ್ರಮಿಸುವುದು ನೂತನ ಸಮಿತಿಯ ಉದ್ದೇಶವಾಗಿರಲಿದೆ. ಸೌಜನ್ಯ ಪ್ರಕರಣ ಸೇರಿದಂತೆ ಎಸ್ಐಟಿಗೆ ದೂರು ನೀಡಿರುವ ಎಲ್ಲಾ ಸಂತ್ರಸ್ತರು ನ್ಯಾಯ ಪಡೆಯಬೇಕು. ಹಾಗೆಯೇ ಎಸ್ಐಟಿ ಈಗಾಗಲೇ ಸರಕಾರಕ್ಕೆ ನೀಡಿರುವ ವರದಿಯನ್ನು ಬಹಿರಂಗ ಪಡಿಸಲು ಒತ್ತಾಯಿಸಲಾಗುತ್ತದೆ. ಎಸ್ಐಟಿ ತನಿಖೆ ಇನ್ನೂ ಮುಗಿದಿಲ್ಲ, ಇನ್ನೂ ಕೂಡಾ ದೂರು ನೀಡಲು ಅವಕಾಶವಿದೆ. ಒಟ್ಟಾರೆ ಎಲ್ಲಾ ಸಂತ್ರಸ್ತರಿಗೆ ನ್ಯಾಯ ಸಿಗಬೇಕಿದೆ ಎಂದರು.
“ಕೊಂದವರು ಯಾರು? ಸಮಿತಿಯ ಮೂಲಕ ಹೋರಾಟಕ್ಕೆ ಬಲ ಸಿಕ್ಕಿದೆ. ‘ಕೊಂದವರು ಯಾರು’ ಎಂದು ಎಲ್ಲರಿಗೂ ಗೊತ್ತಿದೆ. ಅದು ಅಧಿಕೃತವಾಗಿ ಹೊರಬರಬೇಕಿದೆ. ಕೊಂದವರು ಯಾರು ಸಮಿತಿ ಕೂಡಾ ನೂತನ ಸಮಿತಿ ಜೊತೆ ಸೇರಲಿದೆ, ಅದಕ್ಕಾಗಿ ಮೊದಲಾಗಿ 1000 ಪುಟಗಳ ವರದಿಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಎಸ್ಐಟಿ ನೀಡಿದೆ. ಅದು ಬಹಿರಂಗವಾದರೆ ನಮ್ಮ ಹೋರಾಟಕ್ಕೆ ಇನ್ನಷ್ಟು ವಿವರಗಳು ತಿಳಿಯಲಿದೆ” ಎಂದು ಹೇಳಿದರು.

“ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಎಲ್ಲವೂ ಯೋಜಿತವಾಗಿ ನಡೆಯುತ್ತಿದೆ. ಆಕಡೆಯಲ್ಲಿರುವ 10-12 ಜನ ಇಡೀ ಜನಸಮುದಾಯದ ಪರವಾಗಿರುವ ಹೋರಾಟವನ್ನು ತಡೆಯಲು ಕೆಲವೊಂದು ದಾರಿತಪ್ಪಿಸುವ ಕೆಲಸಗಳಾಗುತ್ತಿದೆ. ಇದಕ್ಕಾಗಿ ಕೆಲವೊಂದು ಮಾಧ್ಯಮಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಎಸ್ಐಟಿ ನಡೆಯನ್ನು ನಾವು ಪ್ರಶ್ನೆ ಮಾಡಿದರೆ ನಮಗೆ ಮುಂದೆ ತನಿಖೆ ಮಾಡುವವರೇ ಇರಲಿಕ್ಕಿಲ್ಲ. ಹಾಗಾಗಿ ಎಸ್ಐಟಿ ಈವರೆಗೆ ಏನು ಮಾಡಿದೆ ಎಂಬುದು ನಮಗೆ ವರದಿ ಮೂಲಕ ತಿಳಿಯಬೇಕಿದೆ. ಈಗೀಗ ಎಸ್ಐಟಿ ತನಿಖೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ಸಂಪೂರ್ಣಗೊಳ್ಳಲು ಕನಿಷ್ಟ ಎರಡು ವರ್ಷ ಬೇಕಿದೆ. ಎಸ್ಐಟಿ ತನಿಖೆಯಲ್ಲಿ ಒಂದು ಹಂತಕ್ಕೆ ಬಾರದೇ ತನಿಖೆ ಮುಗಿಸುವುದಕ್ಕೆ ಅರ್ಥವಿಲ್ಲ. ಎಲ್ಲವೂ ದಾರಿ ತಪ್ಪಿಸುವ ಹೇಳಿಕೆಗಳಾಗಿವೆ. ಎಸ್ಐಟಿ ಒಂದು ಸಾವಿರಕ್ಕೂ ಮಿಕ್ಕಿ ಸ್ಯಾಂಪಲ್ ಸಂಗ್ರಹಿಸಿದೆ. ಅವನ್ನು ಸ್ವಲ್ಪ ಸ್ವಲ್ಪವೇ ಎಫ್ಎಸ್ಎಲ್ಗೆ ಕಳುಹಿಸುತ್ತಿದೆ. ಎಲ್ಲಾ ವಿಚಾರಗಳನ್ನು ಮುಚ್ಚಿಡಲಾಗುತ್ತಿದೆ” ಎಂದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಮಹಿಳಾ ಆಯೋಗಕ್ಕೆ ಸಾವಿರ ಪುಟಗಳ ವರದಿ ಸಲ್ಲಿಸಲು ಎಸ್ಐಟಿ ತಯಾರಿ?
“ಮಾಧ್ಯಮಗಳ ಮೂಲಕ ಜನರ ದಾರಿ ತಪ್ಪಿಸಲು ಭಾರೀ ಪ್ರಯತ್ನಗಳು ನಡೆದಿವೆ. ಅದರಲ್ಲಿ ಹೋರಾಟವನ್ನು ಬುರುಡೆ ಗ್ಯಾಂಗ್ ಎಂದೂ ಧರ್ಮಸ್ಥಳ ವಿರೋಧಿ ಎಂದೂ ಬಿಂಬಿಸಲಾಯಿತು. ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ವಿಟಲ್ ಕಮಿಟಿ ವಿಚಾರಣೆ ಆಗಿಲ್ಲ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭರವಸೆಗಳಿಲ್ಲ. ನ್ಯಾಯದ ಪರವಾಗಿರಬೇಕಾದವರೂ ಕೂಡಾ ಫೈರ್ವಾಲ್ ತರಹ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಂತೂ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಬಂದರೂ ಹೋರಾಟದ ಪರ ಇರುವ ಜನತೆ ಚಿಂತಿಸುತ್ತಾರೆ. ಹೀಗೆ ಎಲ್ಲವನ್ನೂ ವ್ಯವಸ್ಥಿತವಾಗಿ ಕೆಲವೇ ಕೆಲವು ಜನ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಎಲ್ಲವನ್ನು ಮೀರಿ ಹೋರಾಟ ಮುಂದುವರೆಯಬೇಕು. ಹಾಗಾಗಿ ಎಲ್ಲರನ್ನೂ ಸೇರಿಸಿಕೊಳ್ಳಬೇಕಾಗಿದೆ. ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಬೇಕು. ಹಾಗೆಯೇ ನ್ಯಾಯ ಸಿಗಬೇಕು. ಮಹೇಶ್ ಶೆಟ್ಟಿ ತಿಮರೋಡಿ ಮುಂದಾಳುತ್ವದಲ್ಲಿ ಎಲ್ಲರೂ ಹೋರಾಟವನ್ನು ಎಲ್ಲಾ ರೀತಿಯಲ್ಲಿ ಅಂದರೆ ಕಾನೂನು ಮತ್ತು ಸಾಮಾಜಿಕ ನೆಲೆಯಲ್ಲಿ ಮುಂದುವರೆಸೋಣ” ಎಂದು ಕರೆ ನೀಡಿದರು.
ಹೋರಾಟಗಾರ್ತಿ ಪ್ರಸನ್ನ ರವಿ ಮಾತನಾಡಿ, “ಅಗತ್ಯ ಕಾನೂನುಬದ್ಧ ದಾಖಲೆಗಳನ್ನು ಪಡೆಯುವ ಬಗ್ಗೆ ಇರುವ ಅಗತ್ಯತೆಯನ್ನು ವಿವರಿಸಿದರು. ಮುಂದಿನ ಹೋರಾಟಗಳು ಎಲ್ಲರ ಜೊತೆಗೂಡಿ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ” ಎಂದರು.
ಎಡಪಂಥೀಯ ನಾಯಕ, ಹೋರಾಟಗಾರ ವಿಷ್ಣುಮೂರ್ತಿ ಮಾತನಾಡಿ, “ಹೋರಾಟಕ್ಕೆ ಜನಬೆಂಬಲವಿದೆ. ಹಾಗಾಗಿ ಎಸ್ಐಟಿ ತನಿಖಾ ವರದಿ ಕೂಡಾ ನಮಗೆ ಸಿಗಬೇಕಿದೆ. ತನಿಖೆ ಹೇಗೆ ನಡೆಯುತ್ತಿದೆ ಎಂಬುದು ನಮಗೆ ಮುಖ್ಯ ಹಾಗಾಗಿ ಸರಕಾರದ ಮೂಲಕ ಈಗಾಗಲೇ ಕೊಡಲಾಗಿರುವ ವರದಿ ನಮಗೆ ತಿಳಿಯಬೇಕು. ಆಗ ನಮಗೆ ಎಸ್ಐಟಿ ಯಾವ ರೀತಿ ತನಿಖೆ ಮಾಡಿದೆ. ಇನ್ನು ಎಷ್ಟು ಪ್ರಕರಣಗಳು ತನಿಖೆಗೆ ಬಾಕಿ ಇವೆ ಎಂದೆಲ್ಲಾ ತಿಳಿಯಬೇಕಿದೆ” ಎಂದು ಹೇಳಿದರು.
ಹೋರಾಟಗಾರರಾದ ಜಯಂತ್ ಟಿ, ರಾಬರ್ಟ್ ರೊಜಾರಿಯೊ, ಮೊದಲಾದವರೂ ಮಾತನಾಡಿದರು. ಜನವರಿ ಮಾಸಾಂತ್ಯದೊಳಗೆ ಮುಂದಿನ ಸಭೆ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.





