ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರೈತರಲ್ಲಿ ಕೊಂಚ ನಿರಾಳತೆ ಭಾವ ಮೂಡಬಹುದು. ಇದರಿಂದ ಉತ್ತಮ ನಿರ್ವಹಣೆಗೆ ಒಂದು ಮಾರ್ಗದರ್ಶನವಾಗಬೇಕು, ಸರ್ಕಾರ ರೈತರ ಕಲ್ಯಾಣವನ್ನು ಪರಿಗಣಿಸಿ ಮೊದಲ ಆದ್ಯತೆ ನೀಡಬೇಕು.
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ರೈತರು ಶಿಗ್ಲಿ ಕ್ರಾಸ್ನಲ್ಲಿ 17 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರು. ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಕೆಲ ಹೊತ್ತಿನಲ್ಲೇ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ರೈತರು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದಿದ್ದಾರೆ. ಆದರೆ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿ ವಿಳಂಬವಾದಲ್ಲಿ ರಾಜ್ಯಾದ್ಯಂತ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
“ಸದ್ಯ ಒಬ್ಬ ರೈತರಿಂದ ಐದು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಹೆಚ್ಚಳವಾಗಿ ಖರೀದಿ ಮಾಡಬೇಕೆಂದು ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೀಗ ಈ ಪ್ರಮಾಣವನ್ನು ಹೆಚ್ಚಿಸಿದ್ದು, ಒಬ್ಬರಿಂದ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಭರವಸೆ ನೀಡಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲಾ ರೈತ ಮುಖಂಡ ಮಲ್ಲಿಕಾರ್ಜುನ್ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತವು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿಯೂ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಖರೀದಿ ಕೇಂದ್ರ ತೆರೆಯಲು ಇನ್ನಷ್ಟು ವಿಳಂಬ ಮಾಡಿದಲ್ಲಿ, ಡಿಸೆಂಬರ್ 8ರಂದು ಮೂಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಗಂಭೀರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ಈಗ ಪ್ರತಿ ರೈತರಿಂದ ಬೆಂಬಲ ಬೆಲಗೆ ಕೇವಲ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಆದೇಶ ನೀಡಿರುವುದು ತರವಲ್ಲವೆರಂದು ಹೋರಾಟ ಮಾಡಿದ ಬಳಿಕ ನಿನ್ನೆ ರಾತ್ರಿ 20 ಕ್ವಿಂಟಲ್ ಖರೀದಿಸುವುದಾಗಿ ಆದೇಶ ನೀಡಿದ್ದಾರೆ. ಕೊನೆಪಕ್ಷ ಪ್ರತಿ ರೈತರಿಂದ 100 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಬೇಕು. ಅಲ್ಲದೆ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು” ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲೆಯಲ್ಲಿ 8 ತಾಲೂಕುಗಳಿವೆ. ಆದರೆ 6 ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯುವುದಾಗಿ ಹೇಳಿದ್ದಾರೆ. ಮೂರು ಖರೀದಿ ಕೇಂದ್ರಗಳು ಒಂದೆಡೆ, ಮತ್ತೆ ಮೂರು ಖರೀದಿ ಕೇಂದ್ರಗಳು ಇನ್ನೊಂದೆಡೆ ತೆರೆಯಲು ಆದೇಶದಲ್ಲಿ ತಿಳಿಸಿದೆ. ಆದರೆ ಖರೀದಿ ಕೇಂದ್ರಗಳಿಗೂ ದೂರದ ರೈತರಿಗೂ 70ರಿಂದ 80 ಕಿಮೀ ದೂರವಾಗುತ್ತದೆ. ಇದರಿಂದ ರೈತರಿಗೆ ಬಾಡಿಗೆ ಹೊರೆ ಬೀಳುತ್ತದೆ. ಹಾಗಾಗಿ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದರೆ ಒಳ್ಳೆಯದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ರೈತರಾದ ಮೇಘರಾಜ ಬಾವಿ ಸವಡಿ ಮಾತನಾಡಿ, “ಬೆಂಬಲ ಬೆಲೆ ನೀಡಬೇಕೆಂದು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ. ಎಲ್ಲಿಯೂ ಖರೀದಿ ಕೇಂದ್ರಗಳನ್ನೂ ತೆರೆದಿಲ್ಲ, ನೋಂದಣಿ ಪ್ರಕ್ರಿಯೆಯೂ ಆರಂಭವಾಗಿಲ್ಲ. ಕೆಲವು ಪತ್ರಿಕೆಗಳು, ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಗಳನ್ನು ಬಿತ್ತರಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಹೇಗೆ ಆರಂಭವಾಗುತ್ತದೆ, ಎಲ್ಲಿ ನೋಂದಾಯಿಸಿಕೊಳ್ಳಬೇಕು ಎನ್ನುವ ಮಾಹಿಗಳೇ ತಿಳಿದಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
“ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದಲ್ಲಿ ಇದೇ 8ನೇ ತಾರೀಖಿನಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಲಾಗಿದೆ” ಎಂದು ಎಚ್ಚರಿಕೆ ನೀಡಿದರು.
“ಖರೀದಿ ಕೇಂದ್ರ ತೆರೆಯಲು ಸಿದ್ಧತೆ ನಡೆದಿದ್ದು, ಖರೀದಿ ಸ್ಥಳ ಹಾಗೂ ಖರೀದಿದಾರರ ಜತೆಗೆ ಒಪ್ಪಂದ ಮಾಡಿಕೊಂಡು ಸರ್ಕಾರದ ನಿಯಮಾವಳಿಯಂತೆ ಖರೀದಿ ಪ್ರಕ್ರಿಯೆ ಶುರುವಾಗಲಿದೆ” ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
“ಮೆಕ್ಕೆಜೋಳ ಖರೀದಿ ವಿಷಯವು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಿದೆ. ಸಂಸತ್ತಿನ ಅಧಿವೇಶನ ನಡೆದರೂ ರಾಜ್ಯದ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಸಂಸದ ಬಸವರಾಜ ಬೊಮ್ಮಾಯಿಯವರು ರೈತರ ಜತೆ ಪ್ರತಿಭಟಿಸುತ್ತಾರೆ. ಆದರೆ ಲೋಕಸಭೆಯಲ್ಲಿ ಏಕೆ ವಿಷಯ ಪ್ರಸ್ತಾಪಿಸುವುದಿಲ್ಲ” ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪ್ರಶ್ನಿಸಿದ್ದಾರೆ.
“ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಉತ್ಪಾದನೆಯಾಗಿದೆ. ಇದೇ ವರ್ಷ ಅಕ್ಟೋಬರ್ನಲ್ಲೇ ಪತ್ರ ಬರೆದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಮಾತುಕತೆಗೂ ಕರೆದಿಲ್ಲ. ಮೆಕ್ಕೆಜೋಳ ಖರೀದಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿದ್ದೀರಾ? ರೈತರ ಪ್ರತಿಭಟನೆಗೆ ಫಲ: ಕೆಎಂಎಫ್ನಿಂದ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿ
ರಾಜ್ಯದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ(MSP) ಘೋಷಣೆಯಾಗಿದ್ದರೂ, ಖರೀದಿ ಕೇಂದ್ರಗಳನ್ನು ತೆರೆಯದಿರುವುದು ರೈತರಲ್ಲಿ ಗಮನಾರ್ಹ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯವು ಕೇವಲ ಸ್ಥಳೀಯ ಸಮಸ್ಯೆಯಲ್ಲ. ಬದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ನಿರ್ವಹಣಾ ಕೊರತೆ, ಆರ್ಥಿಕ ನೀತಿಗಳ ಕೊರತೆಗಳ ಸಂಕೀರ್ಣತೆಯನ್ನು ತೋರಿಸುತ್ತಿದೆ.
ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರೈತರಲ್ಲಿ ಕೊಂಚ ನಿರಾಳತೆ ಭಾವ ಮೂಡಬಹುದು. ಇದರಿಂದ ಉತ್ತಮ ನಿರ್ವಹಣೆಗೆ ಒಂದು ಮಾರ್ಗದರ್ಶನವಾಗಬೇಕು, ಸರ್ಕಾರ ರೈತರ ಕಲ್ಯಾಣವನ್ನು ಪರಿಗಣಿಸಿ ಮೊದಲ ಆದ್ಯತೆ ನೀಡಬೇಕು.





