ಮುಂಬರುವ 2024-25ರ ಸಾಲಿನ ಬಜೆಟ್ನಲ್ಲಿ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಘೋಷಣೆಗೆ ಆಗ್ರಹಿಸಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಸಂಯೋಜಿತ ಹುಮನಾಬಾದ್ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ಹುಮನಾಬಾದ್ ಕ್ಷೇತ್ರದ ಶಾಸಕ ಸಿದ್ದಲಿಂಗಪ್ಪಾ ಪಾಟೀಲ್ ಬರೆದ ಹಕ್ಕೊತ್ತಾಯ ಪತ್ರವನ್ನು ಶಾಸಕರ ಆಪ್ತ ಸಹಾಯಕರಿಗೆ ಸಲ್ಲಿಸಿದರು.
ರಾಜ್ಯದ ಕಾಂಗ್ರೇಸ್ ಸರ್ಕಾರ ಚುನಾವಣೆಯಲ್ಲಿ ಘೋಷಿಸಿದ ಮಹತ್ವದ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ಶೇ. 20 ರಷ್ಟು ಇರುವ ಭೂ ರಹಿತ ಕೃಷಿ ಕೂಲಿಕಾರರನ್ನು ಈ ಹಿಂದಿನ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ. ಆದ್ದರಿಂದ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ಮಂಡನೆಯಲ್ಲಿ ಕೃಷಿ ಕೂಲಿಕಾರರ ಪರವಾಗಿ ಘೋಷಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
“ಕೃಷಿ ಕೂಲಿಕಾರರು ಆರ್ಥಿಕ, ಸಾಮಾಜಿಕವಾಗಿ ತುಳಿತಕ್ಕೆ ಒಳಪಟ್ಟವರಾಗಿದ್ದಾರೆ. ಕೃಷಿ ಬಿಕ್ಕಟ್ಟು ತೀವ್ರವಾಗುತ್ತಿದ್ದು ಕೃಷಿ ಕೂಲಿಕಾರರಿಗೆ ಹಳ್ಳಿಗಳಲ್ಲಿ ಮೊದಲಿನಂತೆ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಸಮರ್ಪವಾಗಿ ಜಾರಿಯಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಇವರನ್ನು ತೀವ್ರವಾಗಿ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಅನಿವಾರ್ಯವಾಗಿ ನಗರಗಳಿಗೆ ಗುಳೆ ಹೋಗುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕೇರಳ, ತಮಿಳುನಾಡು ಮುಂತಾದ ಕೆಲವು ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲಿಯು ಕೃಷಿ ಕೂಲಿಕಾರರಿಗಾಗಿ ಒಂದು ಸಮಗ್ರವಾದ ಕಲ್ಯಾಣ ಕಾಯ್ದೆಯನ್ನು ಮತ್ತು ಅದರ ನಿರ್ವಹಣೆಗಾಗಿ ಕೃಷಿ ಕೂಲಿಕಾರರ ಕಲ್ಯಾಣ ನಿಧಿ ಸ್ಥಾಪಿಸಿ ಐತಿಹಾಸಿಕ ಘೋಷಣೆಯನ್ನು ಮಾಡಬೇಕೆಂದು ಆಗ್ರಹಿಸಿದರು.
ಮನರೇಗಾ ಕಾರ್ಮಿಕರಿಗೆ ಆಧಾರ್ ಅಡಿಯಲ್ಲಿ ವೇತನ ನೀಡುವ ಪದ್ಧತಿಯನ್ನು ಕೈಬಿಡಬೇಕು. ನರೇಗಾ ಯೋಜನೆ ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ವಸತಿ ರಹಿತ ಕೂಲಿಕಾರರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಮನೆ ನಿವೇಶನಗಳನ್ನು ಉಚಿತವಾಗಿ ನೀಡಬೇಕು. ಅಗತ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬಜೆಟ್ನಲ್ಲಿ ಗರಿಷ್ಠ ಪ್ರಮಾಣದ ಮೊತ್ತವನ್ನು ಮೀಸಲಿಡಬೇಕು. ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಕೂಲಿಕಾರರನ್ನು ಒಕ್ಕಲೆಬ್ಬಿಸಬಾರದು. ತಲಾ 4 ಎಕರೆಯಂತೆ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಿ ಸಾಗುವಳಿ ಚೀಟಿ ಕೊಡಬೇಕು ಸೇರಿದಂತೆ ಒಟ್ಟು 13 ಬೇಡಿಕೆಗಳು ಈಡೇರಿಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇಂದ್ರದ ತಾರತಮ್ಯ ವಿರುದ್ಧ ದೆಹಲಿ ಧರಣಿಯಲ್ಲಿ ಭಾಗಿಯಾಗುವಂತೆ ರಾಜ್ಯದ ಸಂಸದರಿಗೆ ಸಿಎಂ ಪತ್ರ
ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಇಸಾಮೋದ್ದಿನ್ ಮೀರಾಸಾಬ್, ಜಿಲ್ಲಾ ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಕಾರ್ಯದರ್ಶಿ ಸೂರ್ಯಕಾಂತ ಸಂತೋಷ್ಕರ್, ತಾಲೂಕಾಧ್ಯಕ್ಷ ಲಖನ್ ಮಹಾಜನ್, ಜಿಲ್ಲಾ ಉಪಾಧ್ಯಕ್ಷ ಮಹೇಶ ಕಾಟೆ, ಬಸವಕಲ್ಯಾಣ ತಾಲೂಕು ಕಾರ್ಯದರ್ಶಿ ಸಚಿನ್ ಗುಂಡೆ ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ಇದ್ದರು.




