ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಘೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಳೆದ 30 ವರ್ಷಗಳಿಂದ ನೀರಾವರಿ ಹೋರಾಟ ನಡೆಯುತ್ತಿದೆ. ಈ ಬಯಲುಸೀಮೆಯ ನೀರಿನ ಸಮಸ್ಯೆಯನ್ನು ಸರ್ಕಾರವು ಆದ್ಯತೆಯಾಗಿ ಪರಿಗಣಿಸಬೇಕಿದೆ. ಅದಕ್ಕಾಗಿ, ಗುರುವಾರ (ಜೂನ್ 19)ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಬಯಲುಸೀಮೆಯ ನೀರಿನ ಸಮಸ್ಯೆಯನ್ನು ಸೇರಿಸಿಕೊಳ್ಳಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಆಗ್ರಹಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಹೋರಾಟ ಸಮಿತಿಯ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ, “ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 15 ತಾಲೂಕುಗಳು, 3,870 ಗ್ರಾಮಗಳು ಹಾಗೂ ಸುಮಾರು 2,537 ವಸತಿ ಪ್ರದೇಶಗಳು ನಿರಂತರ ಬರಗಾಲಕ್ಕೆ ತುತ್ತಾಗಿವೆ. ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಎಲ್ಲ ನದಿಗಳು ಬರಿದಾಗಿವೆ. ಕರೆ, ಕಟ್ಟೆ, ಕೊಳಗಳೂ ಒಣಗಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗಳ ನೀರಿನ ಸಮಸ್ಯೆಯನ್ನು ಪರಿಹರಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಬೇಕು” ಎಂದು ಹೇಳಿದ್ದಾರೆ.
“ಜಿಲ್ಲೆಗಳಲ್ಲಿ ಸಾವಿರಾರು ಅಡಿಗಳಷ್ಟು ಆಳಕ್ಕೆ ಬಾವಿಗಳನ್ನು ತೋಡಿ, ನೀರು ಮೇಲೆತ್ತಲಾಗುತ್ತಿದೆ. ಆದರೆ, ಆ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಯುರೇನಿಯಂ ಹಾಗೂ ಅರ್ಸೆನಿಕ್ ಮುಂತಾದ ವಿಷಕಾರಿ ಅಂಶಗಳಿವೆ. ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಸುರಕ್ಷಿತ ನೀರು ಸೇವಿಸುತ್ತಿರುವುದರಿಂದ ಮಾರಣಾಂತಿಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈ ನೀರು ಕುಡಿಯುತ್ತಿರುವುದರಿಂದ ತಾಯಿಯ ಎದೆ ಹಾಲು ಕೂಡ ಫ್ಲೋರೈಡ್ ಪೂರಿತವಾಗಿರುವ ಪರಿಸ್ಥಿತಿ ಎದುರಾಗಿದೆ” ಎಂದು ಸಮಿತಿಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಯೋಜನೆಗಳ ಅನುಷ್ಠಾನ ಮಾಡುತ್ತಿರುವ ನಿಗಮ/ನೀರಾವರಿ ಇಲಾಖೆಗಳು ವೈಜ್ಞಾನಿಕ ಸಂಸ್ಥೆಗಳು ನೀಡಿರುವ ಅಧ್ಯಯನ ವರದಿಗಳನ್ನು ನಿರ್ಲಕ್ಷಿಸಿವೆ. ಆ ಅಧ್ಯಯನ ವರದಿಗಳನ್ನು ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕು. ಎತ್ತಿನಹೊಳೆ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆಯ ಭರವಸೆ ಕೊಟ್ಟು 15 ವರ್ಷಗಳು ಕಳೆದುಹೋಗಿವೆ. ಆದರೆ, ಬೊಗಸೆಯಷ್ಟೂ ನೀರು ಜಿಲ್ಲೆಗಳಿಗೆ ಬಂದಿಲ್ಲ. ಎತ್ತಿನಹೊಳೆ ಯೋಜನೆ ನೀರು ಕೊಡುತ್ತೇವೆಂದು ಸುಳ್ಳು ಹೇಳುವುದನ್ನು ಬಿಟ್ಟು, ಪರ್ಯಾಯ ಯೋಜನೆ ಮತ್ತು ಮಾರ್ಗಗಳನ್ನು ಕಂಡುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಬರಪೀಡಿತ ಜಿಲ್ಲೆಗಳ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು, ಅವುಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಯಾವೆಲ್ಲ ಕಾರ್ಯ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಜಿಲ್ಲೆಗಳ ಜನರಿಗೆ ತಿಳಿಸಬೇಕು. ಕೃಷ್ಣ-ಪೆನ್ನಾರ್ ನದಿಗಳನ್ನು ಜೋಡಿಸುವ ಬಗ್ಗೆ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸಬೇಕು. ಈ ಎಲ್ಲ ವಿಚಾರಗಳನ್ನು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆಯಾಗಿ ಚರ್ಚಿಸಬೇಕು. ನಿರ್ಣಯಗಳನ್ನು ಜನರ ಮುಂದಿಸಬೇಕು” ಎಂದು ಸಮಿತಿಯು ಒತ್ತಾಯಿಸಿದೆ.




