ಮೂಲಭೂತ ಸೌಲಭ್ಯಗಳೇ ಇಲ್ಲದ ಕಾಲಘಟ್ಟದಲ್ಲಿ ತುಮಕೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಂತರ ತುಮಕೂರು ವಿವಿ ಬೆಳವಣಿಗೆಗೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಅವಿರತವಾಗಿ ಶ್ರಮಿಸಿ, ಭದ್ರ ಬುನಾದಿ ಹಾಕಿದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪರವರ ಹೆಸರನ್ನು ತುಮಕೂರು ವಿವಿ ನೂತನ ಕ್ಯಾಂಪಸ್ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ನಮೂದಿಸದೆ ಇರುವುದು ತುಮಕೂರು ಜಿಲ್ಲೆಗೆ ಮಾಡಿದ ಅಪಮಾನವಾಗಿದ್ದು ಅವರನ್ನು ಗೌರವಯುತವಾಗಿ ಅಧಿಕೃತವಾಗಿ ಆಹ್ವಾನಿಸಬೇಕು ಎಂದು ಆಗ್ರಹಿಸಿ ತುಮಕೂರು ವಿವಿ ಕುಲಪತಿ ಪ್ರೊ, ಎಂ. ವೆಂಕಟೇಶ್ವರಲು ರವರಿಗೆ ಡಿ.ವೈ.ಎಫ್.ಐ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕುಲಪತಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ದಿನಾಂಕ : 07-11-2025 ರಂದು ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿರುವ ಸಮಾರಂಭದಲ್ಲಿ ಉದ್ಘಾಟನೆಯಾಗುತ್ತಿರುವುದು ಸಂತೋಷದ ಸಂಗತಿ. ಆದರೆ ಆಹ್ವಾನ ಪತ್ರಿಕೆಯಲ್ಲಿ ತುಮಕೂರು ವಿವಿಗೆ ಮೂಲ ಕಾರಣವಾದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇಂದಿಗೂ ವಿವಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರ ಹೆಸರನ್ನು ನಮೂದಿಸದೆ ಇರುವುದು ಯಾವ ಶಿಷ್ಠಾಚಾರ ಎಂದು ತುಮಕೂರು ವಿವಿ ಕುಲಪತಿ ಹಾಗೂ ಆಡಳಿತ ಮಂಡಳಿ ಸ್ಪಷ್ಟಪಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಶಿಷ್ಠಾಚಾರದ ಹೆಸರಿನಲ್ಲಿ ಆಹ್ವಾನ ಪತ್ರಿಕೆಯಲ್ಲಿ ತುಮಕೂರು ವಿವಿ ಬೆಳವಣಿಗೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣಕರ್ತರಲ್ಲದ ಅಧಿಕಾರಿಗಳು, ರಾಜಕಾರಣಿಗಳ ಹೆಸರನ್ನು ಹಾಕಿರುವುದು ಕಾನೂನು ಪ್ರಕಾರ ಸರಿಯಷ್ಠೇ. ಆದರೆ ನಿಜಕ್ಕೂ ತುಮಕೂರು ವಿವಿ ಕಟ್ಟಿ ಬೆಳೆಸಲು ಸಮಗ್ರ ಬೆಳವಣಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಇಂದಿಗೂ ಸಹಕರಿಸುತ್ತಿರುವ ನಾಡೋಜ ಬರಗೂರು ರಾಮಚಂದ್ರಪ್ಪನವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕದೆ ಇರುವುದು ಯಾವ ಶಿಷ್ಠಾಚಾರ ಎಂದು ಪ್ರಶ್ನಿಸಿರುವ ಹೋರಾಟಗಾರರು ಇದು ತುಮಕೂರು ವಿವಿಯ ಬೌದ್ಧಿಕ ಮಟ್ಟವನ್ನು ತೋರಿಸುತ್ತದೆ ಎಂದರು.
ಒಂದು ಕಟ್ಟಡಕ್ಕೆ ಬುನಾದಿ ಅಥವಾ ತಳಪಾಯ ಎಷ್ಟು ಮುಖ್ಯವೋ, ಒಂದು ಸಂಸ್ಥೆ ನಿರ್ಮಾಣ ಮಾಡಲು ಮೊದಲಿಗೆ, ಮೂಲದಲ್ಲಿ ಶ್ರಮಿಸಿದವರು ಕೂಡ ಅಷ್ಠೇ ಮುಖ್ಯ ಎಂಬುದು ಸಾರ್ವಜನಿಕ ಜೀವನ ಬಲ್ಲವರಿಗೆ ಹೇಳುವ ಅಗತ್ಯವಿಲ್ಲ. ಆದರೆ ತುಮಕೂರು ವಿವಿ ಇದಕ್ಕೆ ತದ್ವಿರುದ್ದವಾಗಿ ನಡೆದುಕೊಂಡು ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಬರಗೂರು ಹಾಗೂ ತುಮಕೂರು ವಿವಿ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರನ್ನೂ ಕಡೆಗಣಿಸಿರುವುದು ಜಿಲ್ಲೆಯ ಜನತೆಗೆ, ಶೈಕ್ಷಣಿಕ ಕ್ಷೇತ್ರದ ಹೋರಾಟಗಾರರಿಗೆ ಬೇಸರ ತರಿಸಿದೆ ಎಂದು ಕುಲಪತಿಗಳಿಗೆ ಮನವರಿಕೆ ಮಾಡಿದರು.
ತುಮಕೂರು ವಿವಿಯ ಬೆಳವಣಿಗೆಗೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಬುದ್ದಿಜೀವಿಗಳು, ರೈತ ಸಂಘಟನೆಗಳು, ವಿದ್ಯಾರ್ಥಿ-ಯುವಜನ ಸಂಘಟನೆಗಳು ಶ್ರಮಿಸಿರುವುದಕ್ಕೆ ಇತಿಹಾಸವೇ ಸಾಕ್ಷಿ. ಈ ಸಂಬಂಧ ತುಮಕೂರು ವಿವಿಯ ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ವಿವಿ ಅಭಿವೃದ್ಧಿಗೆ ಶ್ರಮಿಸಿದವರನ್ನು ಗೌರವಿಸುವ ನಿಟ್ಟಿನಲ್ಲಿ ಆಹ್ವಾನ ಪತ್ರಿಕೆ ನೀಡುವುದು ನಿಜಕ್ಕೂ ಶಿಷ್ಠಾಚಾರ ಹಾಗೂ ಸೌಜನ್ಯವಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಪ್ರತಿಭಟನೆಯಲ್ಲಿ ಸ್ಲಂ ಜನಾಂದೋಲನದ ಎ. ನರಸಿಂಹಮೂರ್ತಿ, ಡಿವೈಎಫ್ಐನ ಮಾಜಿ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ಸಮುದಾಯದ ಅಶ್ವತ್ಥಯ್ಯ, ನಾಗೇಂದ್ರ, ಎಸ್.ಎಫ್ಐ ನ ಇ. ಶಿವಣ್ಣ, ಎಐಟಿಯುಸಿಯ ಕಂಬೇಗೌಡ, ಗಿರೀಶ್, ಡಿ.ವೈ.ಎಫ್.ಐನ ಪ್ರವೀಣ್ ಕುಮಾರ್, ಶ್ರೀನಿವಾಸ್, ಉಪಸ್ಥಿತರಿದ್ದರು.





