ರಾಜ್ಯದಲ್ಲಿ ಸುಮಾರು 20-25 ಲಕ್ಷ ಜನಸಂಖ್ಯೆ ಹೊಂದಿರುವ ಕುಂಬಾರ ಸಮಾಜವು ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಮತ್ತು ರಾಜಕೀಯವಾಗಿ ಅತೀ ಹಿಂದುಳಿದ ಸಮುದಾಯವಾಗಿದ್ದು, ಕಳೆದ 15-20 ವರ್ಷಗಳಿಂದ ಕುಂಬಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಕುಂಬಾರ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲಾ ಕುಂಬಾರ ಸಮಾಜ ಹಾಗೂ ಕರ್ನಾಟಕ ಕುಂಬಾರರ ಯುವ ಸೈನ್ಯಯ ಕಾರ್ಯಕರ್ತರು ಬೆಣ್ಣೂರ(ಬಿ) ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಕುಂಬಾರ ಸಮುದಾಯದ ಅಭಿವೃದ್ದಿಗಾಗಿ ಕಳೆದ ಅವಧಿಯ ರಾಜ್ಯ ಸರ್ಕಾರ ಅಭಿವೃದ್ದಿ ನಿಗಮ ಘೋಷಿಸಿದೆ, ಆದರೆ ಇಲ್ಲಿಯವರೆಗೂ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಿಲ್ಲ. ಕುಂಬಾರಿಕೆ ವೃತ್ತಿ ಮುಂದುವರೆಸಿಕೊಂಡು ಬರುವ ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದ ಕಾರಣ ಸಮಾಜ ಎಲ್ಲಾ ರೀತಿಯಲ್ಲೂ ತೀರ ಹಿಂದುಳಿದ ಸಮಾಜವಾಗಿಯೇ ಉಳಿದಿದೆ” ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
“ಚಳಿಗಾಲ ಅಧಿವೇಶನದಲ್ಲಿ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ಮೀಸಲಿಡಬೇಕು. ಕುಂಬಾರ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಭು ಸಿ. ಬೆಣ್ಣೂರ್ ಅವರನ್ನು ನಿಗಮ ಅಧ್ಯಕ್ಷರನ್ನಾಗಿ ನೇಮಿಸಬೇಕು” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಸಿಕಲ್ನಲ್ಲಿ ಕಚೇರಿಗೆ ತೆರಳಿ ಗಮನ ಸೆಳೆದ ಡಿಸಿ, ಎಸ್ಪಿ
ಈ ಸಂದರ್ಭದಲ್ಲಿ ಜಿಲ್ಲಾ ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಕರ್ನಾಟಕ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ, ಬಸವರಾಜ ಕುಂಬಾರ್ ಯಡ್ರಾಮಿ, ಸಾಬಣ್ಣ ಕುಂಬಾರ ಇಟಗಿ, ತಿಪ್ಪಣ್ಣ ಕುಂಬಾರ ಭಂಕೂರ, ಸದಾನಂದ ಕುಂಬಾರ ಶಹಾಬಾದ, ಸುನೀಲ ಕುಂಬಾರ ಗುಲ್ಬರ್ಗ, ಚನ್ನು ಕುಂಬಾರ, ಪ್ರವೀಣ ಕುಂಬಾರ ಹಾಗೂ ಕುಂಬಾರ ಸಮಾಜದ ಹಲವು ಮುಖಂಡರು ಇದ್ದರು.





