ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶೀಘ್ರ ಪಾವತಿ ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿ ಬಾಲಗಕೋಟೆ ಜಿಲ್ಲಾಡಳಿತ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಮುಧೋಳ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕಬ್ಬು ರೈತರು ಸಕ್ಕರೆ ಕಾರ್ಖಾನೆಗಳ ವಿರುದ್ಧ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೈತ ಮುಖಂಡರೊಂದಿಗೆ ಮಾತುಕತೆ ನಡೆಯಿತು. ಅಧಿಕಾರಿಗಳು ರೈತರಿಗೆ ಶೀಘ್ರದಲ್ಲೇ ಬಾಕಿ ಪಾವತಿ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಡಳಿತ ಭವನದ ಗೇಟ್ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು. ಬ್ಯಾರಿಕೇಡ್ ತಳ್ಳಿ ಆವರಣಕ್ಕೆ ತೆರಳಲು ರೈತರು ಯತ್ನಿಸಿದಾಗ ಪೊಲೀಸರು ತಡೆದರು. ಕೋಪಗೊಂಡ ರೈತ ಮುಖಂಡರು “ಜಿಲ್ಲಾಡಳಿತ ಭವನಕ್ಕೆ ಮನವಿ ನೀಡಲು ತೆರಳುತ್ತಿರುವ ನಮಗೆ ಗೌರವವಿಲ್ಲವೇ? ನಾವೇನು ಭಯೋತ್ಪಾದಕರಾ? ಜಿಲ್ಲಾಡಳಿತ ಪದೇ ಪದೆ ರೈತರ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿದೆ. ನಮಗೆ ಒಳಗೆ ಹೋಗಲು ಅವಕಾಶ ಕೊಡಿ ಕೊಡಿ” ಎಂದು ಆಕ್ರೋಶಗೊಂಡರು. ಪೊಲೀಸರು ಹಾಗೂ ರೈತರ ಮದ್ಯೆ ವಾಗ್ವದ ನಡೆಯಿತು. ಕೊನೆಗೆ ಪೊಲೀಸರು ರೈತರು ಒಳಗೆ ಹೋಗಲು ಅವಕಾಶ ಕೊಟ್ಟರು.

ಸಭೆಯಲ್ಲಿ ಮಾತನಾಡಿದ ಆಹಾರ, ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ”ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಹಂಗಾಮಿಗೆ ಕಬ್ಬು ನುರಿಸಿವೆ. ಏ.23 ರಂದು ನಡೆಸಿದ ಸಭೆ ಸಂದರ್ಭದಲ್ಲಿ ಅಂದಾಜು 498 ಕೋಟಿ ರೂ. ಬಾಕಿ ಇತ್ತು. ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ನೋಟಿಸ್ ನೀಡಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ 98 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಈ ಮಧ್ಯೆ 4 ಕಾರ್ಖಾನೆಗಳು ಬಾಕಿ ಪಾವತಿಗೆ ಕಾಲಾವಕಾಶ ಕೋರಿ ಹೈಕೋರ್ಟ್ ಮೊರೆಹೋಗಿವೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಾಗಲಕೋಟೆ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಶಿಕ್ಷಕ ಬಂಧನ
ಮುಖಂಡರಾದ ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಯಲ್ಲಪ್ಪ ಹೆಗಡೆ, “ಬಾಕಿ ಪಾವತಿಸಬೇಕಾದ ಕಾರ್ಖಾನೆಗಳು ಹೈಕೋರ್ಟ್ ಮೊರೆ ಹೋದರೆ ರೈತರಿಗೆ ಯಾವಾಗ ಹಣ ದೊರೆಯಬೇಕು? ಕುಟುಂಬ ನಿರ್ವಹಣೆ ಕಷ್ಟಕರವಾಗಿರುವಾಗ ಬಾಕಿ ಕೊಡದಿದ್ದರೆ ಕೃಷಿ ಕೈಗೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕು. ನಿಯಮದ ಪ್ರಕಾರ 14 ದಿನದಲ್ಲಿ ಬಾಕಿ ಕೊಡದಿದ್ದರೆ ಬಡ್ಡಿ ಪಾವತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಗಮನ ಸೆಳೆಯಬೇಕು. ನಾವು ಕಾರ್ಖಾನೆಗಳ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಕಬ್ಬು ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ 20 ದಿನದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಕೊಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಎಂ ಮಾತನಾಡಿ, ”ಕಾನೂನಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನಹರಿಸಲಾಗುತ್ತದೆ. ತಡೆಯಾಜ್ಞೆ ತೆರವುಗೊಳಿಸಲು ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಲಿದ್ದಾರೆ. ಕಬ್ಬು ಆಯುಕ್ತರೊಂದಿಗೆ ಮಾತನಾಡಿ ಶೀಘ್ರದಲ್ಲಿ ಸಭೆ ಆಯೋಜಿಸಲಾಗುತ್ತದೆ. ನಮಗೆ 20 ದಿನ ಕಾಲಾವಕಾಶ ನೀಡಬೇಕು. ರೈತರ ಪರವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಎಸ್ಪಿ ಅಮರನಾಥ ರೆಡ್ಡಿ ಹಾಗೂ ಅಧಿಕಾರಿಗಳು ಇದ್ದರು.





