ಅಪರಾಧ ಚಟುವಟಿಕೆಗಳಲ್ಲಿ ತೊಡಗಿ, ಸಾರ್ವಜನಿಕ ಶಾಂತಿ ಹಾಳು ಮಾಡುತ್ತಿದ್ದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಹಲಗೂರಿನ ಆರ್ ಪ್ರಮೋದ್ ಎಂಬಾತನನ್ನು ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಿ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿ ಪ್ರಮೋದ್ ವಿರುದ್ಧ ಹಲಗೂರು ಠಾಣೆಯಲ್ಲಿ ಕೊಲೆ ಆರೋಪ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆತನಿಂದಾಗಿ ಸಾರ್ವಜನಿಕ ಶಾಂತಿ ಹಾಳಾಗುತ್ತಿದೆ ಎಂದು ಠಾಣೆಯ ಪೊಲೀಸರು ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಆತನನ್ನು ಏಪ್ರಿಲ್ 2ರಿಂದ ಜುಲೈ 7ರವರೆಗೆ ಮಂಡ್ಯ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಮಂಡ್ಯ ಉಪ ವಿಭಾಗದ ಸಹಾಯಕ ಉಪ ವಿಭಾಗಾಧಿಕಾರಿ ಆದೇಶಿಸಿದ್ದರು.
ಗಡಿಪಾರು ಅದೇಶ ರದ್ದು ಮಾಡುವಂತೆ ಕೋರಿ ಪ್ರಮೋದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ವಿಚಾರಣೆ ವೇಳೆ ಪ್ರಮೋದ್ ಪರ ವಾದ ಮಂಡಿಸಿದ ವಕೀಲ ಸಿ.ಎನ್. ರಾಜು, ”ಗಡಿಪಾರು ಮಾಡುವ ಮುನ್ನ ಆರೋಪಿಯ ವಿವರಣೆ ಕೇಳಿ ಶೋಕಾಸ್ ನೋಟಿಸ್ ತಲುಪಿಸಿಲ್ಲ. ಪ್ರಮೋದ್ ಬೆಂಗಳೂರಿನಲ್ಲಿ ವಾಸವಾಗಿದ್ದು, ಪೊಲೀಸರು ಹಲಗೂರಿನಲ್ಲಿರುವ ಆತನ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಅಲ್ಲದೆ, ಆ ನೋಟಿಸ್ನಲ್ಲಿಯೂ ವಿವರಣೆ ನೀಡಲು ಉಪ ವಿಭಾಗಾಧಿಕಾರಿ ಎದುರು ಯಾವ ದಿನದಂದು ಹಾಜರಾಗಬೇಕು ಎಂಬ ದಿನಾಂಕವನ್ನೇ ನಮೂದಿಸಿಲ್ಲ. ಅವರಿಗೆ ತಿಳಿಯದಂತೆ ಗಡಿಪಾರು ಆದೇಶ ಹೊರಡಿಸಲಾಗಿದೆ” ಎಂದು ವಾದಿಸಿದ್ದಾರೆ.
ವಾದವನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, “ಆರೋಪಿ ಪ್ರಮೋದ್ಗೆ ಶೋಕಾಸ್ ನೋಟಿಸ್ ತಲುಪಿಸದೇ ಮತ್ತು ಅವರ ವಿವರಣೆಯನ್ನೂ ಕೇಳದೇ ಗಡಿಪಾರು ಮಾಡಿರುವುದು ಕಾನೂನು ಬಾಹಿರವಾಗಿದೆ. ಒಂದು ವೇಳೆ, ಅರ್ಜಿದಾರರ ವಿರುದ್ಧ ಕ್ರಮ ಜರುಗಿಸುವುದು ಅಗತ್ಯವೇ ಇದ್ದಲ್ಲಿ, ಕಾನೂನು ಪ್ರಕಾರ ನಿಯಮಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಬಹುದು” ಎಂದು ಹೇಳಿದ್ದಾರೆ.




