ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ಕಲ್ಪಿಸಬೇಕು, ಇಲ್ಲದಿದ್ದರೆ ಪರಿಣಾಮಗಳು ಸರಿಯಾಗಿರುವುದಿಲ್ಲ ಎಂದು ನೂರಾರು ಮರಳು ಸಾಗಿಸುವವರು ತಮ್ಮ ನಿವಾಸಕ್ಕೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ್ ಆರೋಪಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಕ್ರಮ ಮರಳು ದಂಧೆಯವರು ಕಳೆದ ರಾತ್ರಿ ಏಕಾಏಕಿ ನಮ್ಮ ನಿವಾಸಕ್ಕೆ ಬಂದು, ಮರಳು ಸಾಗಾಣಿಕೆಗೆ ಹಾಗೂ ರಾಯಲ್ಟಿ ಇಲ್ಲದೆ ಸಾಗಿಸುವ ಅವಕಾಶ ನೀಡಬೇಕು ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ ಎಂದರು.
ಅಕ್ರಮ ಮರಳು, ಮಟ್ಕಾ, ಗಾಂಜಾ, ಅಕ್ರಮ ಮದ್ಯ ಸಾಗಾಣಿಕೆಗೆ ನಾನು ಬೆಂಬಲಿಸಲ್ಲ ಹಾಗೂ ಅನುಮತಿ ಕೂಡ ನೀಡಲ್ಲವೆಂದು ಖಡಕ್ ಸೂಚಿಸಿದರು ಕೂಡ ನೂರಾರು ಜನ ಮನೆಯೇ ಮುಂದೆಯೇ ಇದ್ದರು. ದೇವದುರ್ಗ ತಾಲೂಕಿನಲ್ಲಿ ಮರಳು ಮಾಫಿಯಾದವರ ಅಟ್ಟಹಾಸ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಾಣಿಕೆ ಅನುಮತಿಗೆ ಹಾಗೂ ನನ್ನ ಮನೆಗೆ ಬಂದು ನನಗೆ ಜೀವ ಬೆದರಿಕೆ ಹಾಕುವ ಗೂಂಡಗಳ ರೀತಿಯಲ್ಲಿ ವರ್ತಿಸುವ ಉದ್ದೇಶದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅಕ್ರಮ ಮರಳು ಸಾಗಣಿಕೆಯನ್ನು ತಡೆ ಗಟ್ಟುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇಲಾಖೆಯೇ ಅಕ್ರಮ ಸಹಕಾರ ನೀಡುತ್ತಿರುವುದರಿಂದ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ನೂರಾರು ಕೋಟಿ ಕಾಮಗಾರಿಗಳು ತಾಲೂಕಿನಲ್ಲಿ ನಡೆಯುತ್ತಿವೆ. ನಮಗೂ ಮರಳಿನ ಅವಶ್ಯಕತೆ ಇದೆ. ಕಾಮಗಾರಿಗಳಿಗೆ ಟ್ರ್ಯಾಕ್ಟರ್ ಮೂಲಕ ಮರಳನ್ನು ಪಡೆಯುತ್ತಿದ್ದೇವೆ. ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸಿದರೆ ಯಾರಿಗೂ ಆಭ್ಯಂತರವಿಲ್ಲ ದೊಡ್ಡ ಟಿಪ್ಪರ್ ಗಳ ಮೂಲಕ ಮರಳನ್ನು ಬೇರೆ ರಾಜ್ಯಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ರಾಯಲ್ಟಿ ಇಲ್ಲದೆ ಮರಳು ಸಾಗಿಸುವುದು ಕಾನೂನು ಬಾಹಿರ. ರಾಯಲ್ಟಿ ಇಲ್ಲದೆ ಮರಳು ಸಾಗಣಿಕೆಗೆ ಕಡಿವಾಣ ಹಾಕಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಅಕ್ರಮ ಮರಳು,ಮಟ್ಕಾ,ಗಾಂಜಾ,ಅಕ್ರಮ ಮದ್ಯ ಮಾರಾಟ ಮಾಡುವವರ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಲಾರಿ ಹರಿದು 08 ಕ್ಕೂ ಹೆಚ್ಚು ಕುರಿಗಳು ಸಾವು
ಇದೇ ಸಂದರ್ಭದಲ್ಲಿ ಶರಣಪ್ಪ ಬಳೆ, ಅಮರೇಶ ಪಾಟೀಲ್, ಬಸನಗೌಡ ದೇಸಾಯಿ, ಇಸಾಕ್ ಮೇಸ್ತ್ರಿ, ಗೋವಿಂದ ರಾಜ್ ನಾಯಕ್,ಶಾಲಂ ಉದ್ದಾರ್ ಮತ್ತಿತರಿದ್ದರು.





