ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಆರೋಪಿ ಶಿವಾಜಿರಾವ್ ಜಾಧವ್ ಇದೂವರೆಗೂ ಸುಮಾರು 100ಕ್ಕೂ ಹೆಚ್ಚು ಪತ್ರಗಳನ್ನು ಬರೆದ್ದಾಗಿ ಸಿಸಿಬಿ ಪೊಲೀಸರು ಎದುರು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣದಲ್ಲಿ ಆರೋಪಿ, ಹಿಂದು ಜಾಗರಣ ವೇದಿಕೆ ಸಹ ಸಂಚಾಲಕ ಜಾಧವ್ನನ್ನು ಸಿಸಿಬಿ ಪೊಲೀಸರು ದಾವಣಗೆರೆಯ ಜಾಲಿನಗರ ಇಡ್ಲೂಎಸ್ ಕಾಲೋನಿಯಲ್ಲಿ ಬಂಧಿಸಿದ್ದರು.
ಆತನನ್ನು ಪೊಲೀಸರು ವಿಚಾರಣೆಗೆ ಒಳಪಿಡಿಸಿದ್ದು, ಆತ ಇದೂವರೆಗೂ 100 ಬೆದರಿಕೆ ಪತ್ರ ಬರೆದಿದ್ದು, ಅವುಗಳನ್ನು ವಿವಿಧ ಅಂಚೆ ಕಚೇರಿಗಳ ಮೂಲಕ ಪೋಸ್ಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಶಿವಾಜಿರಾವ್ ಜಾಧವ್ 8ನೇ ತರಗತಿವರೆಗೆ ಓದಿದ್ದಾನೆ. ಆತನಿಗೆ ಪತ್ರ ಬರೆಯಲು ಹಲವರು ಸಾಥ್ ನೀಡಿದರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಯು ತಾನು ಬರೆದ ಪತ್ರಗಳನ್ನು ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಸೇರಿದಂತೆ ವಿವಿಧ ಪಟ್ಟಣಗಳಿಗೆ ತೆರಳಿ, ಅಲ್ಲಿಂದ ಪೋಸ್ಟ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಬೆಂಗಳೂರಿನ ಸಂಜಯನಗರ, ಬಸವೇಶ್ವರನಗರ, ಹಾರೋಹಳ್ಳಿ, ಚಿತ್ರದುರ್ಗ ಹಾಗೂ ಕೊಟ್ಟೂರಿನಲ್ಲಿ ದೂರುಗಳು ದಾಖಲಾಗಿವೆ.




