ರಾಜಕೀಯದ ಅಜಾತಶತ್ರು ಎಂದೆನಿಸಿದ್ದ, ಬೆಂಗಳೂರಿನಲ್ಲಿ ನಿಧನರಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರ, ದೇಶದ ಅತ್ಯಂತ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯ, ವಿಧಿ ವಿಧಾನಗಳೊಂದಿಗೆ ಇಂದು ಸಂಜೆ 4.30ರ ಸಮಯಕ್ಕೆ ಆನೆಕೊಂಡ ಬಳಿಯ ಕಲ್ಲೇಶ್ವರ ಅಕ್ಕಿ ಗಿರಣಿ ಆವರಣದಲ್ಲಿ ಧರ್ಮಪತ್ನಿ ಪಾರ್ವತಮ್ಮನವರ ಸಮಾಧಿಯ ಪಕ್ಕದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರ ಪಾರ್ಥಿವ ಶರೀರವನ್ನು ಬೆಂಗಳೂರಿನ ವೀರಶೈವ ಲಿಂಗಾಯತ ಮಹಾಸಭೆಯ ಕಛೇರಿಯಿಂದ ಸೋಮವಾರ ಬೆಳಗಿನ ವೇಳೆ ಹಿರಿಯ ಪುತ್ರ ಬಕ್ಕೇಶ್ ಅವರ ಮನೆಗೆ ತರಲಾಯಿತು.

ನಂತರ ಪುತ್ರರಾದ ಗಣೇಶ್, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಪೂಜೆ ನಡೆಸಿ ಅಂತಿಮ ದರ್ಶನಕ್ಕೆ ಮನೆ ಆವರಣದಲ್ಲಿ ಇರಿಸಲಾಗಿತ್ತು . ಮಧ್ಯಾಹ್ನ 1 ಗಂಟೆಗೆ ಪಾರ್ಥಿವ ಶರೀರವನ್ನು ನಗರದ ಹೈಸ್ಕೂಲ್ ಆವರಣಕ್ಕೆ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ಅವಕಾಶ ನೀಡಲಾಗಿದೆ.
ಮಧ್ಯ ಕರ್ನಾಟಕದ ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರಾಜಕೀಯ ನಾಯಕರು, ಜನರು ಆಗಮಿಸುವ ಹಿನ್ನೆಲೆಯಲ್ಲಿ ನಗರದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಬಸ್ ಗಳನ್ನು ಹೊರಭಾಗದಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ಹೆಚ್ಚುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಎಂಸಿಸಿ ಬ್ಲಾಕ್ ನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಬಂಧಿಕರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಈಗಾಗಲೇ ವಿರಕ್ತ ಮಠದ ಬಸವಪ್ರಭು ಶ್ರೀ, ಮುರುಘಾ ಶರಣರು ಸೇರಿದಂತೆ ವಿವಿಧ ಮಠಾಧೀಶರು, ದಾವಣಗೆರೆ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಿಂದ ಆಗಮಿಸಿ ಸಂಜೆ ನಾಲ್ಕು ಗಂಟೆಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಎಂಬಂತಿದ್ದ ಶಾಮನೂರು ಶಿವಶಂಕರಪ್ಪ ನಿಧನ
‘ಎಸ್ಎಸ್, ಶಂಕರಜ್ಜ’ ಎಂದೇ ಜನಪ್ರಿಯರಾಗಿದ್ದ ಶಾಮನೂರು ಸದಾ ಲವಲವಿಕೆಯಿಂದಿರುತ್ತಿದ್ದರು. ಮಹಾನ್ ದೈವಭಕ್ತ ಹಾಗೂ ಜನಾನುರಾಗಿಯಾಗಿದ್ದು, ಜನಸಾಮಾನ್ಯರ ಸಂಕಷ್ಟಕ್ಕೆ ಸದಾ ಸ್ಪಂದಿಸುವ ದಾನಿಯಾಗಿದ್ದರು ಎಂದು ಬಹುತೇಕರು ನೆನಪಿಸಿಕೊಳ್ಳುತ್ತಾರೆ. ಜನಸಾಮಾನ್ಯನಾಗಿ ಹುಟ್ಟಿ, ಅಕ್ಕಿ ವ್ಯಾಪಾರದ ಮೂಲಕ ಪ್ರಾರಂಭಿಸಿ, ಅನೇಕ ಉದ್ಯಮ, ಶಿಕ್ಷಣ, ವೈದ್ಯಕೀಯ ಸೇವೆ ಸೇರಿದಂತೆ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಅಸಾಮಾನ್ಯರಾಗಿ ಜೀವಿಸಿದ್ದರು. ನೇರ ನುಡಿಗೆ ಹೆಸರಾಗಿದ್ದರೂ ಯಾರೊಂದಿಗೂ ದ್ವೇಷವಿಲ್ಲದೇ ಅಜಾತಶತ್ರು ಎನಿಸಿದ್ದರು.





