“ಕೇಂದ್ರ ಸರ್ಕಾರದ ಶ್ರಮನೀತಿ 2025ರ ಮಸೂದೆ ರದ್ದಾಗಬೇಕು, ಕಾರ್ಮಿಕರ ಪರವಾಗಿರುವ ಕಾನೂನುಗಳು ಜಾರಿಯಾಗಬೇಕು ಎಂದು ಆಗ್ರಹಿಸಿ ಮಜ್ದೂರ್ ಅಧಿಕಾರ ಸಂಘರ್ಷ ಅಭಿಯಾನದ ಕರೆಯ ಮೇರೆಗೆ ಅಖಿಲ ಭಾರತ ಕಾರ್ಮಿಕರ ಹಕ್ಕುಗಳ ದಿನವಾಗಿ ಹಾಗೂ ಸಾಂಕೇತಿಕ ಹೋರಾಟವನ್ನು ಕರ್ನಾಟಕ ಶ್ರಮಿಕ ಶಕ್ತಿ ದಾವಣಗೆರೆಯ ಜಿಲ್ಲಾ ಘಟಕ ಜಯದೇವ ವೃತ್ತದಲ್ಲಿ ಪ್ರತಿಭಟಿಸುವ ಮೂಲಕ ಕಾರ್ಮಿಕ ಮಸೂದೆ 2025 ಅನ್ನು ವಿರೋಧಿಸಿತು.
ಈ ವೇಳೆ ಮಾತನಾಡಿದ ಕರ್ನಾಟಕ ಶ್ರಮಿಕ ಶಕ್ತಿಯ ಜಿಲ್ಲಾ ಮುಖಂಡ ಸತೀಶ್ ಅರವಿಂದ್, “ಎಲ್ಲ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಿ ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ತಂದು ಕಾರ್ಮಿಕರನ್ನು ಹತ್ತಿಕ್ಕಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೂ ಕೂಡ ಸರಿಯಾದ ಮೂಲಭೂತ ಸೌಕರ್ಯಗಳು, ವೇತನ, ಸಾಮಾಜಿಕ ಭದ್ರತೆ ಇಲ್ಲದ 2025ರ ಮಸೂದೆಯನ್ನು ವಿರೋಧಿಸುತ್ತೇವೆ. ಮಸೂದೆ ವಿರುದ್ಧ ಮಜ್ದೂರ್ ಸಂಘದ ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಕರೆ ನೀಡಿದ್ದು ಅದರ ಭಾಗವಾಗಿ ನಾವು ಸಾಂಕೇತಿಕ ಹೋರಾಟ ನಡೆಸುತ್ತಿದ್ದು, ಕಾಯ್ದೆ ರದ್ದು ಮಾಡದೆ ಜಾರಿಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಮುಖಂಡ ಆದಿಲ್ ಖಾನ್ ಮಾತನಾಡಿ, “ಈಗಿನ ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಯಲ್ಲಿ ಕಾರ್ಮಿಕರು ಹೋರಾಟ ಕೈಗೊಳ್ಳಬೇಕು ಎಂದರೆ ಎರಡು ತಿಂಗಳು ಮುಂಚಿತವಾಗಿಯೇ ತಿಳಿಸಿ ಮನವಿ ನೀಡಬೇಕು. ಈ ರೀತಿ ಅವೈಜ್ಞಾನಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಮಸೂದೆಯಲ್ಲಿ ಅಳವಡಿಸಿದೆ. ಇವುಗಳ ಬಹಳಷ್ಟು ಅಂಶಗಳು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕಲ್ಯಾಣ ಮಂಟಪ ಕೆಲಸ, ಮನೆಗೆಲಸ, ಟೈಲರ್ ಸೇರಿದಂತೆ ಇತರ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೂ ಕೂಡ ಮಂಡಳಿ ನಿರ್ಮಾಣ ರಚಿಸಬೇಕು. ಕಾರ್ಮಿಕರಿಂದ ಈ ದೇಶದ ಜಿಡಿಪಿಗೆ ಕೊಡುಗೆ ಹೆಚ್ಚಿದೆ. ಹಾಗೂ 12 ಗಂಟೆಗೆ ಏರಿಸಿದ ಕೆಲಸದ ಅವಧಿಯನ್ನು
ಮೂರು ಪಾಳಿಗಳಲ್ಲಿ ಎಂಟು ಗಂಟೆಗೆ ಇಳಿಸಬೇಕು. 12 ಗಂಟೆ ದುಡಿಯಲು ಕಾರ್ಮಿಕರು ಕೇವಲ ದುಡಿಯುವ ವಸ್ತು ಅಲ್ಲ. ಹಾಗಾಗಿ ಈ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದು ಇದನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಮಾಡಿರದ ಕಾರ್ಮಿಕ ವಿರೋಧಿಯಾದ ಕಾನೂನುಗಳನ್ನು ಜಾರಿಗೆ ತಂದಿದೆ. ಹಲವು ದಶಕಗಳ, ಶತಮಾನಗಳ ಹೋರಾಟದಿಂದ ಕಾರ್ಮಿಕರ ತ್ಯಾಗ ಬಲಿದಾನ ಹೋರಾಟಗಳಿಂದ ಕಾರ್ಮಿಕರ ಹಕ್ಕುಗಳನ್ನು ಪಡೆಯಲಾಗಿತ್ತು. ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ತರುವ ಮೂಲಕ ಮತ್ತೆ ಅವರನ್ನು ಗುಲಾಮಗಿರಿಗೆ ತಳ್ಳುವ ನೀತಿಗಳನ್ನು ರೂಪಿಸುತ್ತಿದೆ. ಅಷ್ಟೇ ಅಲ್ಲದೆ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನರನ್ನು ಕೂಡ ಗುಲಾಮಗಿರಿಗೆ ತಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಸಾಂಕೇತಿಕ ಪ್ರತಿಭಟನೆಯನ್ನು ನಡೆಸುತ್ತಿದ್ದು ಕರ್ನಾಟಕದಲ್ಲಿ ಈ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಗಳು ಜಾರಿಯಾದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಕ್ಯಾನಿಕ್ ಸಂಘದ ಕಾರ್ಮಿಕ ಮುಖಂಡ ಸೈಯದ್ ಅಶ್ವಖ್ ಮಾತನಾಡಿ “ಕಾರ್ಮಿಕರ ಮಂಡಳಿಯಲ್ಲಿ ಹಲವು ಕಾರ್ಮಿಕರಿಗೆ ಸೌಲಭ್ಯಕ್ಕಾಗಿ ಮೀಸಲಿರುವ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಅವರಿಗೆ ಅದರ ಫಲ ತಲುಪದಂತೆ ಹಾಳು ಮಾಡುತ್ತಿದ್ದಾರೆ. ಹಣವನ್ನು ಪೋಲು ಮಾಡುವುದನ್ನು ವಸತಿ ರಹಿತ, ಸೌಲಭ್ಯರಹಿತ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು, ಇತರ ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಲು ಸಹಾಯಧನ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನರೇಗಾ ಬದಲಿಗೆ ವಿಜಿ ರಾಮ್ ಜಿ ಮಸೂದೆಗೆ ಗ್ರಾಮಿಣ ಕೂಲಿಕಾರರ ಸಂಘಟನೆ ವಿರೋಧ
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ರವೀಂದ್ರ, ಕೆ ವೈ ಚಂದ್ರಶೇಖರ್, ಜಾಫರ್, ಸಮೀರ್, ಮುರುಗೇಶ್, ಸಲ್ಮಾನ್ ಖಾನ್, ಅಂಜಿನಪ್ಪ, ಸಾಧಿಕ್, ಮುನ್ನಾದ್ ಮುಕ್ತಿಯರ್, ರಾಮಾಂಜನೇಯ ಸೇರಿದಂತೆ ಇತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು..





