ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಬ್ಯಾಂಕ್ ನೌಕರರು ದಾವಣಗೆರೆ ಪಿ.ಬಿ.ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕಿನ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ, ಖಾಸಗೀಕರಣ ನೀತಿಯ ವಿರುದ್ಧ, ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲು, ಎಐಬಿಇಎ ಸಂಯೋಜಿತ ಖಾಸಗಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, “ಸಾರ್ವಜನಿಕರ ಹಣಕ್ಕೆ ಭದ್ರತೆಯನ್ನು ನೀಡುವುದಕ್ಕಾಗಿ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಬೇಕು, ಅಗತ್ಯ ಪ್ರಮಾಣದ ನೇಮಕಾತಿ ಮಾಡಬೇಕು, ಫೆಡರಲ್ ಬ್ಯಾಂಕಿನ ನೌಕರರ ಶೋಷಣೆಯನ್ನು ನಿಲ್ಲಿಸಬೇಕು, ಕೆಥೋಲಿಕ್ ಸಿರಿಯನ್ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, ಖಾಸಗಿ ಬ್ಯಾಂಕುಗಳ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು, ನೈನಿತಾಲ್ ಬ್ಯಾಂಕನ್ನು ಮಾರಾಟ ಮಾಡಬಾರದು, ತಮಿಳುನಾಡು ಮರ್ಕಂಟೈಲ್ ಬ್ಯಾಂಕಿನ ನೌಕರರ ನಿವೃತ್ತಿ ವಯಸ್ಸನ್ನು 60 ಕ್ಕೆ ಹೆಚ್ಚಿಸಬೇಕು, ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ – ಎಐಬಿಇಎ ಸದಸ್ಯರು ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಬ್ಬು ಬೆಳೆಗಾರರ ಸಮಸ್ಯೆಗೆ ಅಧ್ಯಯನ ಸಮಿತಿ ರಚಸಿ: ರೈತ ಮುಖಂಡ ವಾಸುದೇವ ಮೇಟಿ
ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕೆ.ವಿಶ್ವನಾಥ ಬಿಲ್ಲವ, ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ, ಆರ್.ಆಂಜನೇಯ, ಎಂ.ಡಿ.ವಿದ್ಯಾಸಾಗರ, ಆರ್.ಮಂಜಪ್ಪ, ಹೆಚ್.ಜೆ.ಆಶಾ, ರಾಜೇಶ್, ಕೆ.ಆರ್.ಹರ್ಷ, ಡಿ.ಹರ್ಷದ್, ಎಸ್.ಪ್ರಶಾಂತ್, ಸೈಯದ್ ಚಾಂದಬಾಷಾ, ಎಸ್.ಗಜೇಂದ್ರ, ಎಲ್.ಲತಾ, ಕೆ.ಹೆಚ್.ರೇಖಾ, ಹೆಚ್.ಎಸ್.ಶ್ರೀನಿಧಿ, ಪ್ರಸನ್ನ ಭಟ್, ಎಂ.ಕೆ.ನಾಗರಾಜ್ ಹಾಗೂ ನಿವೃತ್ತ ಬ್ಯಾಂಕ್ ನೌಕರರ ಸಂಘದ ಹೆಚ್.ಸುಗುರಪ್ಪ, ಕೆ.ಎಂ.ಮಹೇಶ್ವರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





